ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ನಾವು ಶಿಸ್ತಿನ ಜೀವನಶೈಲಿಯನ್ನು ಅನುಸರಿಸದೇ ಇರುವುದು, ಅನಾರೋಗ್ಯಕ್ಕೆ ಕಾರಣವಾಗುತ್ತಿದೆ, ಪೌಷ್ಟಿಕಾಂಶ ಕೊರತೆಯ ಆಹಾರ ಸೇವ, ಒತ್ತಡ ಜೀವನದಿಂದಾಗಿ ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಜರುತ್ತಿವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಮಂಗಳವಾರ ಸುಮಾರು 3.5 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ಒಂದು ತಿಂಗಳಿನಿಂದ ಹೃದಯಾಘಾತ ಪ್ರಕರಣದಿಂದ ಯುವಕರ ಸಾವುಗಳು ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಈಗಲಾದರೂ ನೀವುಗಳು ಶಿಸ್ತಿನ ಜೀವನಶೈಲಿಗೆ ಬದಲಾಯಿಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಆಗ ನಿಮ್ಮ ಆರೋಗ್ಯ ಸದೃಡವಾಗುತ್ತದೆ ಎಂದು ತಿಳಿಸಿದರು.
ನಿತ್ಯ ಕ್ರಿಯಾಶೀಲರಾಗಬೇಕಾದರೆ ಯೋಗ, ಮುದ್ರೆ, ಪ್ರಾಣಾಯಾಮ ಮಾಡಿ, ಆಗ ನೋಡಿ ನಿಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ, ದೇಹ ಕ್ರಿಯಾಶೀಲವಾಗಿರುತ್ತದೆ ಎಂದು ಕರೆ ನೀಡಿದರು.ಒತ್ತಡ ಜೀವನದಿಂದ ಮುಕ್ತರಾಗಬೇಕಾದರೆ ಮೊದಲು 7 ರಿಂದ 8 ತಾಸು ಮೊಬೈಲ್ನಿಂದ ದೂರ ಇದ್ದು, ಸಂಪೂರ್ಣ ನಿದ್ದೆ ಮಾಡಿ ಆಗ ನೀವು ಒತ್ತಡ ಜೀವನದಿಂದ ಹೊರ ಬರುತ್ತೀರಿ ಎಂದು ಹೇಳಿದರು.
ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, 1983ರ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ನಮ್ಮ ಸಹೋದರ ಮಾಜಿ ಶಾಸಕ ಡಿ.ಜಿ.ಬಸವನಗೌಡ್ರು ಆಸ್ಪತ್ರೆಯನ್ನು ನಿರ್ಮಿಸಲು ಅನುದಾನ ತಂದಿದ್ದರು, ಅವರ ಸಹೋದರನಾದ ನಾನು ಶಾಸಕನಾಗಿರುವ ಸಮಯದಲ್ಲಿ ಈ ಆಸ್ಪತ್ರೆಗೆ 3.5 ಕೋಟಿ ರು. ಅನುದಾನ ತಂದು ಕತ್ತಿಗೆ ಗ್ರಾಮದಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಿದೆ ಎಂದರು.ಹೊನ್ನಾಳಿ, ಕತ್ತಿಗೆ.ಮಾದೇನಹಳ್ಳಿ,ಸೇರಿದಂತೆ ಕೆಲವು ಗ್ರಾಮದಲ್ಲಿ ರಸ್ತೆ ಹಾಳಾಗಿದೆ,ಈ ಬಗ್ಗೆ ಗ್ರಾಮಸ್ಥರು ಸಹ ಬೇಡಿಕೆ ಇಟ್ಟಿದ್ದಾರೆ ಶೀಘ್ರವೇ ರಸ್ತೆ ಕಾಮಗಾರಿಗೆ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡುತ್ತೇನೆ. 15 ಕೋಟಿ ರು. ಅನುದಾನದಲ್ಲಿ ಹೊನ್ನಾಳಿ- ಶಿವಮೊಗ್ಗ ರಸ್ತೆ ಅಭಿವೃದ್ದಿ ಶೀಘ್ರವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇತ್ತೀಚಿಗೆ ಯುವಕರು ಮೊಬೈಲ್ ಬಿಟ್ಟು ಬದುಕುವುದೇ ಕಷ್ಟ ಎಂದು ತಿಳಿದುಕೊಂಡಿದ್ದಾರೆ,ಸತ್ವ ಇಲ್ಲದ ಆಹಾರ ಸೇವನೆಯಿಂದ ಯುವಕರಲ್ಲಿ ಕ್ರಿಯಾಶೀಲತಯೇ ಕಾಣಲಿಕ್ಕೆ ಆಗುತ್ತಿಲ್ಲ ಎಂದ ಅವರು ನನಗೀಗ 76 ವರ್ಷ ಆದರೂ ನಾನು ಇನ್ನೂ ಗಟ್ಟಿಮುಟ್ಟಾಗಿದ್ದೇನೆ ನಿತ್ಯ ವಾಕ್ ಮಾಡುತ್ತೇನೆ ಹಾಗೂ ಹೆಚ್ಚು ಲವಲವಿಕೆಯಿಂದ ಇದ್ದೇನೆ ಎಂದರು.ಗ್ರಾ.ಪಂ. ಅಧ್ಯಕ್ಷೆ ಓಬಮ್ಮ, ಉಪಾಧ್ಯಕ್ಷೆ ಮೀನಮ್ಮ, ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಡಿಎಚ್ಒ ಷಣ್ಮುಖಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗದ್ದಿಗೇಶ್, ಮುಖಂಡರಾದ ಕೆಂಗಲಹಳ್ಳಿ ಷಣ್ಮುಖಪ್ಪ, ಹನುಮನಹಳ್ಳಿ ಬಸವರಾಜಪ್ಪ, ಆರ್,ನಾಗಪ್ಪ, ಗುತ್ತಿಗೆದಾರ ಸಂತೋಷ್, ಇತರರು ಇದ್ದರು.