ಸಾರಾಂಶ
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಸ್ಥಗಿತ ಮಾಡಬೇಕು ಎಂದು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ ಹೊರತು ಪಶ್ಚಿಮದಲ್ಲಿ ಹುಟ್ಟಲ್ಲ, ಇದನ್ನು ಅಧಿಕಾರಿಗಳು ಅರ್ಥಮಾಡಿಕೊಂಡು ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಸ್ಥಗಿತ ಮಾಡಬೇಕು ಎಂದು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕಿನ ನಿಟ್ಟೂರು ಹೋಬಳಿ ಸುಂಕಪುರ ಬಳಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಾಮಗಾರಿ ಅವೈಜ್ಞಾನಿಕವಾಗಿದೆ. ಈ ಯೋಜನೆ ಕುರಿತಂತೆ ದೇವೇಗೌಡರು, ಕುಮಾರಸ್ವಾಮಿಯ ಜೊತೆ ಮಾತನಾಡಿ ಯಾರಿಗೂ ಅನ್ಯಾಯವಾಗಬಾರದು ಎಂಬುದನ್ನು ಮನವರಿಕೆ ಮಾಡಿದ್ದೇನೆ. ರಾಜ್ಯ ಸರ್ಕಾರ ಪಾಪದ ವ್ಯವಸ್ಥೆಯಲ್ಲಿ ಮುಂಂದಿನ ದಿನಗಳಲ್ಲಿ ಶಾಪಗ್ರಸ್ತವಾಗಬಹುದು ಇದನ್ನು ಅರ್ಥ ಕಾಮಗಾರಿಯನ್ನು ಸ್ಥಗಿತ ಮಾಡಬೇಕು ಎಂದರು.ಗುಬ್ಬಿ ತಾಲೂಕಿಗೆ ಆಗಿರುವಂತ ಅನ್ಯಾಯವನ್ನು ಸರಿಪಡಿಸುವ ಜವಾಬ್ದಾರಿ ನನ್ನದು. ಇದನ್ನು ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಸರಿಪಡಿಸುತ್ತೇನೆ. ಕಾಮಗಾರಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಡಿಕೆ ಶಿವಕುಮಾರ್ ಜೊತೆ ಮಾತನಾಡುತ್ತೇನೆ. ಅಧಿಕಾರಿಗಳು ನಾನೊಬ್ಬ ಕೇಂದ್ರ ಸಚಿವ ಇದ್ದೇನೆ ಎಂಬುದನ್ನು ಮರೆಯಬಾರದು. ಒಂದೊಂದು ಸರ್ಕಾರ ಬಂದಾಗ ಒಂದೊಂದು ರೀತಿಯಲ್ಲಿ ಯೋಜನೆ ರೂಪಿಸಿದ್ದಾರೆ. ಇಂದು ಗುಬ್ಬಿ ತಾಲೂಕಿನಲ್ಲಿ ಹೇಮಾವತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಇದಕ್ಕೆ ನಾವುಗಳು ಪರಿಹಾರ ಹುಡುಕಬೇಕಾಗಿದೆ. ಜನಪರ ಕಾರ್ಯಕ್ರಮಗಳಿಗೆ ಹಕ್ಕು ಚ್ಯುತಿಯಾಗುವುದಕ್ಕೆ ವಿ.ಸೋಮಣ್ಣ ಬಿಡುವುದಿಲ್ಲ ಮತ್ತು ಸೋಲುವುದಿಲ್ಲ ಎಂದು ಹೇಳಿದರು.
ತಾಂತ್ರಿಕ ಸಲಹಾ ಸಮಿತಿಯ ಜಯಪ್ರಕಾಶ್ ಮಾತನಾಡಿ, ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯ ಬಗ್ಗೆ ಕೇಂದ್ರ ಸಚಿವ ವಿ ಸೋಮಣ್ಣನವರು ರಾಜ್ಯ ಸರ್ಕಾರದ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವವರೆಗೂ ಕಾಮಗಾರಿ ಪ್ರಾರಂಭಿಸುವುದಿಲ್ಲ ಎಂದರು.ಈ ಸಂದರ್ಭದಲ್ಲಿ ಮಾಜಿ ಸಂಸದ ಜಿಎಸ್ ಬಸವರಾಜು,ಶಾಸಕ ಜ್ಯೋತಿ ಗಣೇಶ್, ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ, ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು, ಮಾಜಿ ಶಾಸಕರಾದ ನಿಂಗಪ್ಪ, ಸುಧಾಕರ್ ಲಾಲ್, ಸೊಗುಡು ಶಿವಣ್ಣ, ಹುಲಿನಾಯ್ಕರ್, ಹುಚ್ಚಯ್ಯ, ಲಿಂಗಪ್ಪ , ಚಂದ್ರಶೇಖರ್ ಬಾಬು, ಎಚ್.ಟಿ ಭೈರಪ್ಪ, ನಂಜೇಗೌಡ, ಬ್ಯಾಟರಂಗೇಗೌಡ, ಪಂಚಾಕ್ಷರಿ, ಸಿ ಜಿ ಲೋಕೇಶ್, ಸಿದ್ದರಾಮಣ್ಣ, ಜಿಎನ್ ಬೆಟ್ಟಸ್ವಾಮಿ, ಹೊನ್ನಗಿರಿ ಗೌಡ, ಕಳ್ಳಿಪಾಳ್ಯ ಲೋಕೇಶ್, ಸಾಗರಹಳ್ಳಿ ವಿಜಯ್ ಕುಮಾರ್, ಸೇರಿದಂತೆ ನೂರಾರು ರೈತರು ಹಾಜರಿದ್ದರು.