ಸಾರಾಂಶ
ಸತ್ಪುರುಷರ, ಯೋಗಿಗಳ ಸಂಸ್ಕಾರವುಳ್ಳ ಸಜ್ಜನರ ಸಾಂಗತ್ಯದಲ್ಲಿ ಇದ್ದುಕೊಂಡು ಶರಣರ ವಚನಗಳ ಸಾರ ಅರಿಯಬೇಕು. ಪ್ರತಿಯೊಬ್ಬರು ಸತ್ಸಂಗ ಜೀವನ ಸಾಗಿಸಬೇಕು. ಪರರಿಗೆ ಒಳಿತು ಬಯಸುವ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು.
ಯಲಬುರ್ಗಾ:
ಸಮಾಜದ ಒಳಿತಿಗಾಗಿ ಶ್ರಮಿಸಿದ ಬಸವಾದಿ ಶರಣರ ವಚನ ಆಲಿಸುವುದರಿಂದ ಮನಶುದ್ಧಿಯಾಗುತ್ತದೆ ಎಂದು ಕಪ್ಪತಗುಡ್ಡದ ಬಸವಬೆಟ್ಟದ ಯೋಗಗುರು ಮಾತೆ ಓಂಕಾರೇಶ್ವರಿ ಹೇಳಿದರು.ಪಟ್ಟಣದ ಸಾಯಿ ಪ್ಯಾಲೆಸ್ನಲ್ಲಿ ಬಸವ ಶಿವಯೋಗ ಸಮಿತಿಯಿಂದ ಏರ್ಪಡಿಸಿದ್ದ ಬಸವಾದಿ ಶರಣರಾದ ಕುರಬರ ಗೊಲ್ಲಾಳೇಶ್ವರ ಹಾಗೂ ಕುಂಬಾರ ಗುಂಡಯ್ಯನವರ ಶರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸತ್ಪುರುಷರ, ಯೋಗಿಗಳ ಸಂಸ್ಕಾರವುಳ್ಳ ಸಜ್ಜನರ ಸಾಂಗತ್ಯದಲ್ಲಿ ಇದ್ದುಕೊಂಡು ಶರಣರ ವಚನಗಳ ಸಾರ ಅರಿಯಬೇಕು. ಪ್ರತಿಯೊಬ್ಬರು ಸತ್ಸಂಗ ಜೀವನ ಸಾಗಿಸಬೇಕು. ಪರರಿಗೆ ಒಳಿತು ಬಯಸುವ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದರು.ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಶರಣರ ಕುರಿತ ಚರಿತ್ರೆ ಓದಬೇಕು. ಭಕ್ತಿ, ಶ್ರದ್ಧೆಗೆ ದೊರಕುವ ಪ್ರತಿಫಲವನ್ನು ಕಂಡಾಗ ನಂಬಿದವರ ಮನದೊಳಗೆ ಶಿವ ನೆಲೆಸುತ್ತಾನೆ ಎಂದರು.
ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಗೀತಾ ಅಕ್ಕ ಮಾತನಾಡಿ, ಶಿವ ಪರಮಾತ್ಮನ ಸ್ವರೂಪ ಹಾಗೂ ಬಾಬಾನ ಜ್ಞಾನದ ಬಗ್ಗೆ ಎಲ್ಲರೂ ತಿಳಿಯಬೇಕಿದೆ ಎಂದರು.ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ಶೈಲಶ್ರೀ ಪಾಟೀಲ್ ಮಾತನಾಡಿದರು. ಅನ್ನಪೂರ್ಣ ತೆಂಗಿನಕಾಯಿ ಪ್ರಾಥಮಿಕ ಶಾಲಾ ಮಕ್ಕಳಿಂದ ಶರಣರ ವಚನಗಳನ್ನು ಸುಶ್ರಾವ್ಯವಾಗಿ ಆಡಿದರು. ಬೆಳಗ್ಗೆ 6ಕ್ಕೆ ಇಷ್ಟಲಿಂಗ ಪೂಜೆ ಏರ್ಪಡಿಸಲಾಗಿತ್ತು.
ಈ ವೇಳೆ ಬಸವ ಶಿವಯೋಗ ಸಮಿತಿ ಅಧ್ಯಕ್ಷ ಸಂಗಣ್ಣ ತೆಂಗಿನಕಾಯಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೊಜಿ, ಪ್ರಮುಖರಾದ ಎಸ್.ಕೆ. ದಾನಕೈ, ಶಿವಪ್ಪ ಶಾಸ್ತ್ರಿ, ಚನ್ನಪ್ಪ ಕುಂಬಾರ, ಮೀನಾಕ್ಷಮ್ಮ ಮಲಕಸಮುದ್ರ, ಮುದಕಪ್ಪ ಸಜ್ಜನ, ಸಿದ್ದಲಿಂಗಪ್ಪ ಶ್ಯಾಗೋಟಿ, ವಿರೂಪಾಕ್ಷಪ್ಪ ಹನುಮಶೆಟ್ಟಿ, ಮಹಾಗುಂಡಪ್ಪ ಕಟಗೇರಿ, ಫಕೀರಪ್ಪ ಗಾಣಿಗೇರ, ಬಸವರಾಜ ಹಳ್ಳಿ, ಪರಶುರಾಮ ಹೊಸ್ಮನಿ, ವೀರೇಶ ತೆಂಗಿನಕಾಯಿ, ಗವಿಸಿದ್ದಪ್ಪ ಕುಂಬಾರ, ಅನಸೂಯ ತೆಂಗಿನಕಾಯಿ, ಅಶೋಕ ಪಾಟೀಲ್, ದೇವಪ್ಪ ವಾಲ್ಮೀಕಿ ಸೇರಿದಂತೆ ಇತರರು ಇದ್ದರು.