ಸಾರಾಂಶ
ಹಾವೇರಿ: ಸಾಹಿತಿ ಆತ್ಮಾವಲೋಕನ ಮಾಡಿಕೊಂಡಾಗ ಜೀವನ ಪ್ರೀತಿಯ ಒಳ ಹರಿವು ಹೆಚ್ಚುತ್ತದೆ. ಬದುಕಿನ ಎಲ್ಲ ತಲ್ಲಣಗಳನ್ನು ಮರೆಸುವ ಹಾಗೂ ನಗೆಯ ಪರದೆ ಚಾಚುವ ಶಕ್ತಿ ಸಾಹಿತ್ಯಕ್ಕಿದೆ. ಜೊತೆಗೆ ಸಾಹಿತ್ಯಕ ಅಭಿರುಚಿಯಿಂದ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯ ಎಂದು ಸಾಹಿತಿ ಸಂಕಮ್ಮ ಸಂಕಣ್ಣನವರ ಹೇಳಿದರು.ಪಟ್ಟಣದ ದಾನೇಶ್ವರಿ ನಗರದ ಪದವಿ ಪೂರ್ವ ನೌಕರರ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸುವರ್ಣ ಕರ್ನಾಟಕ ಸಂಭ್ರಮ ನಿಮಿತ್ತ ಜರುಗಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಹಿತಿಗೆ ಸಾಮಾಜಿಕ ಚಿಕಿತ್ಸಕ ಬುದ್ಧಿ ಹಾಗೂ ಪ್ರಜ್ಞೆ ಇರಬೇಕು. ಕೌಟುಂಬಿಕ ಸಮಸ್ಯೆಗಿಂತ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಬೇಕು. ನನಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ತಾವು ತೋರಿದ ಪ್ರೀತಿ ಪ್ರಶಸ್ತಿಗಿಂತ ಮಿಗಿಲು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವೆ ವಿಜಯಲಕ್ಷ್ಮಿ ತಿರ್ಲಾಪುರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ನೆಪದಲ್ಲಿ ಯುವ ಜನಾಂಗ ಓದುವ ಹವ್ಯಾಸದಿಂದ ವಿಮುಖವಾಗುತ್ತಿದೆ. ವಿದ್ವಾಂಸರ ದಂಡಿಗಿಂತ ವಿಧ್ವಂಸಕರ ದಂಡು ಹೆಚ್ಚುತ್ತಿದೆ. ಸತತ ಅಧ್ಯಯನ ಹಾಗೂ ಅನುಭವದ ಮೂಸೆಯಿಂದ ಸಾಹಿತ್ಯ ಹೊರಬರಬೇಕಿದೆ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಸಾಹಿತಿಗಳಾದ ಕೆ.ಎಚ್. ಮುಕ್ಕಣ್ಣನವರ, ಜಗನ್ನಾಥ ಗೇನಣ್ಣವರ, ಡಾ.ನಾಗರಾಜ ದ್ಯಾಮನಕೊಪ್ಪ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿರೂಪಾಕ್ಷಪ್ಪ ಹಾವನೂರ, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಎಸ್.ಆರ್. ಜೋಳದ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರಮೇಶ ಲಮಾಣಿ, ನಾರ್ತ್ ಕರ್ನಾಟಕ ಅಚೀವರ್ಸ್ ಅವಾರ್ಡ್ ಪುರಸ್ಕೃತ ಸತೀಶ ಎಂ.ಬಿ. ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.ಸಾಹಿತಿ ಸತೀಶ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಎನ್. ಸುರೇಶಕುಮಾರ, ಬಿ.ಎಂ. ಜಗಾಪುರ, ಪ್ರಭಾಕರ ಶಿಗ್ಲಿ, ನಾಗಪ್ಪ ಬೆಂತೂರ, ಷಣ್ಮುಖಪ್ಪ ಮುಚ್ಚಂಡಿ, ಎಸ್.ಎನ್. ದೊಡ್ಡಗೌಡ್ರ, ಎಸ್.ಎಸ್. ಬೇವಿನಮರದ, ಬಿ.ಪಿ. ಶಿಡೇನೂರ, ಪ್ರಭು ಹಿಟ್ನಳ್ಳಿ, ಸುಭಾಷ್ಚಂದ್ರ ದೊಡ್ಡಕುರುಬರ, ಈರಣ್ಣ ಬೆಳವಡಿ, ರೇಣುಕಾ ಗುಡಿಮನಿ, ಜುಬೇದಾ ನಾಯಕ್, ಶಶಿಕಲಾ ಅಕ್ಕಿ, ಮಲ್ಲಿಕಾರ್ಜುನ ಹಿರೇಕಾರ, ಎ.ಬಿ.ರತ್ನಮ್ಮ, ಶಂಕರ ಸುತಾರ, ಎನ್.ಬಿ.ಕಾಳೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳು ಕವನ ವಾಚಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಭು ಅರಗೋಳ ಸ್ವಾಗತಿಸಿದರು. ಪೃಥ್ವಿರಾಜ ಬೆಟಗೇರಿ ನಿರೂಪಿಸಿದರು. ಎಸ್.ಆರ್. ಹಿರೇಮಠ ವಂದಿಸಿದರು.