ವಿಶ್ವವನ್ನೆ ಪರಿವರ್ತಿಸುವ ಶಕ್ತಿ ಬೇಂದ್ರೆ ಸಾಹಿತ್ಯಕ್ಕಿದೆ

| Published : Feb 01 2025, 12:01 AM IST

ಸಾರಾಂಶ

ಭಾಷೆಯ ಪದ ಸಂಪತ್ತು ಮತ್ತು ನಾದ ಸಂಪತ್ತು ಎರಡನ್ನೂ ಬೇಂದ್ರೆ ಅವರು ತಮ್ಮ ಕವನಗಳಲ್ಲಿ ಬಳಸಿದರು. ಅವರ ಕವನಗಳು ಕಾವ್ಯಗುಣದ ಉನ್ನತಮಟ್ಟವನ್ನು ಹೊಂದಿವೆ. ಅನುಭವದ ಆಳದಿಂದ ಮೂರ್ತಗೊಂಡ ಬೇಂದ್ರೆಯವರ ಕವಿತೆಗಳು ವಾಚಕರ ಮನಸ್ಸನ್ನು ಸಹಜವಾಗಿಯೇ ಗೆಲ್ಲುತ್ತವೆ. ಅನುಭವಗಳೇ ಬೇಂದ್ರೆ ಕವಿತೆಗಳ ಸಾರ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಡಾ. ದ.ರಾ. ಬೇಂದ್ರೆ ಅವರ ಪ್ರತಿ ಸಾಹಿತ್ಯ, ಕವನದಲ್ಲಿಯೂ ಒಂದೊಂದು ಸಂದೇಶವಿದೆ, ವಿಶ್ವವನ್ನೇ ಪರಿವರ್ತನೆ ಮಾಡುವಂತಹ ಸಂದೇಶ ಅವರದಾಗಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಆರ್.ಅಶ್ವತ್ಥ್‌ ಹೇಳಿದರು. ಪಟ್ಟಣದ ನವಚೇತನ ವಿದ್ಯಾ ಸಂಸ್ಥೆಯ ಕಾಲೇಜಿನಲ್ಲಿ ತಾಲೂಕು ಕಸಾಪದಿಂದ ಹಮ್ಮಿಕೊಂಡಿದ್ದ ಡಾ.ದ.ರಾ ಬೇಂದ್ರೆಯವರ 129ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪದ ಸಂಪತ್ತು, ನಾದ ಸಂಪತ್ತು

ಭಾಷೆಯ ಪದ ಸಂಪತ್ತು ಮತ್ತು ನಾದ ಸಂಪತ್ತು ಎರಡನ್ನೂ ಬೇಂದ್ರೆ ಅವರು ತಮ್ಮ ಕವನಗಳಲ್ಲಿ ಬಳಸಿದರು. ಅವರ ಕವನಗಳು ಕಾವ್ಯಗುಣದ ಉನ್ನತಮಟ್ಟವನ್ನು ಹೊಂದಿವೆ. ಅನುಭವದ ಆಳದಿಂದ ಮೂರ್ತಗೊಂಡ ಬೇಂದ್ರೆಯವರ ಕವಿತೆಗಳು ವಾಚಕರ ಮನಸ್ಸನ್ನು ಸಹಜವಾಗಿಯೇ ಗೆಲ್ಲುತ್ತವೆ ಎಂದುರು.

ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ದಿವಾಕರ ಮಾತನಾಡಿ, ದ.ರಾ ಬೇಂದ್ರೆಯವರು ಸಾಮಾನ್ಯರ ಜನಜೀವನವನ್ನು ಅವರ ನೋವು-ನಲಿವುಗಳನ್ನು, ಚೆಲುವು-ಒಲವುಗಳನ್ನು, ಮಿಡಿತ-ತುಡಿತಗಳನ್ನು ಕವನಗಳಲ್ಲಿ ಮೂಡಿಸಿದ ಮಹತ್ವಗಳಲ್ಲಿ ಕವಿಗಳಲ್ಲಿ ಬೇಂದ್ರೆ ಅಗ್ರಗಣ್ಯರು ಪ್ರಕೃತಿ, ಅಧ್ಯಾತ್ಮ, ಸಾಮಾಜಿಕ ಇವುಗಳ ಜೊತೆಗೆ ಶಾಂತಿ, ಪ್ರೀತಿಗಳ ಬಗ್ಗೆ ಒತ್ತಿ ಹೇಳಿದವರು.ಇಂತಹ ಕವಿಗಳನ್ನು ಕವನಗಳನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಓದಬೇಕಾಗಿದೆ ಎಂದರು.

ಮೊಬೈಲ್‌ ಬಿಟ್ಟು ಪುಸ್ತಕ ಓದಿನವ ಚೇತನ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಲ್.ರಾಮಕೃಷ್ಣಪ್ಪ ಮಾತನಾಡಿ, ಬೇಂದ್ರೆ ಅವರ ಕಾವ್ಯಗಳನ್ನು ಇಂದಿನ ಪೀಳಿಗೆ ಓದಬೇಕೆಂಬ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈ ಕಾರ್ಯಕ್ರಮವನ್ನು ಇಂದು ನಮ್ಮ ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿದೆ. ಅವರ ಸಂದೇಶ, ಗದ್ಯ, ನಾಟಕ ಹಾಗೂ ವಿಮರ್ಶೆಗಳು ಎಂದೆಂದಿಗೂ ಜೀವಂತ, ವಿದ್ಯಾರ್ಥಿಗಳು ಸಮಯ ಸಿಕ್ಕಾಗ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ, ಪುಸ್ತಕಗಳನ್ನು ಓದುವುದು ಹಾಗೂ ತಮ್ಮ ಗ್ರಾಮಗಳಲ್ಲಿ ಕುಳಿತು ಒಳ್ಳೆಯ ಕವಿತೆ, ಕವನಗಳನ್ನು ರಚನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಪ್ಪಯ್ಯ ಗೌಡ, ನವ ಚೇತನ ಪದವಿ ಕಾಲೇಜಿನ ಪ್ರಾಂಶುಪಾಲರಾದ ವೆಂಕಟಸುಬ್ಬಯ್ಯ, ಸಾಹಿತಿಗಳಾದ ವೈ.ಎಸ್ ಕೃಷ್ಣಮೂರ್ತಿ, ಸತೀಶ್ ಕುಮಾರ್,ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪ, ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷರಾದ ಆಯುಷ ಬೇಗಂ, ಶಿಕ್ಷಕರಾದ ಕೆ.ಜಿ ಮಂಜುನಾಥ್ , ವಿಜಯಕುಮಾರ್ ಇತರರು ಇದ್ದರು.