ಮೂಡುಬಿದಿರೆ ಪುರಸಭೆ ಸಾಮಾನ್ಯ ಸಭೆ: ಅಂಗಡಿಗಳ ಏಲಂನಲ್ಲಿ ತಾರತಮ್ಯ ಆರೋಪ

| Published : Feb 01 2025, 12:01 AM IST

ಮೂಡುಬಿದಿರೆ ಪುರಸಭೆ ಸಾಮಾನ್ಯ ಸಭೆ: ಅಂಗಡಿಗಳ ಏಲಂನಲ್ಲಿ ತಾರತಮ್ಯ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕರಿಂಜೆ ಗ್ರಾಮದ ರಾಮಗುಡ್ಡೆ ಎಂಬಲ್ಲಿ ರಮೇಶ್ ಆಚಾರ್ಯ ಎಂಬವರಿಗೆ 94 ಸಿಸಿಯಡಿ ಹಕ್ಕುಪತ್ರ ನೀಡಿದ್ದರೂ ಪುರಸಭೆಯ ಅಧಿಕಾರಿಗಳು ಖಾತೆ ನೀಡದೆ ಸತಾಯಿಸುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳಿದ್ದು ಖಾತೆ ನೀಡದಿದ್ದರೆ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಸದಸ್ಯ ಸುರೇಶ್ ಕೋಟ್ಯಾನ್ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಪುರಸಭೆಗೆ ಸಂಬಂಧಿಸಿದ ವಾಣಿಜ್ಯ ಸಂಕೀರ್ಣಗಳ ಅಂಗಡಿ ಕೋಣೆಗಳ ಏಲಂನಲ್ಲಿ ಹೊರಗಿನವರು ಮಧ್ಯ ಪ್ರವೇಶಿಸಿ ಬಿಡ್‌ದಾರರ ಮೇಲೆ ಒತ್ತಡ ಹೇರಿ ಅಕ್ರಮವಾಗಿ ಹಣ ಸಂಪಾದಿಸಿದ್ದಾರೆ. ಬಾಡಿಗೆ ಮೊತ್ತ ಹರಾಜಿನಲ್ಲಿಯೂ ತಾರತಮ್ಯವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಪುರಸಭೆ ವ್ಯಾಪ್ತಿಯವರಿಗೆ ಮಾತ್ರ ಹರಾಜಿನಲ್ಲಿ ಪಾಲ್ಗೊಳ್ಳುವ ನಿರ್ಣಯ ಕೈಗೊಳ್ಳಬೇಕು ಎಂಬ ಸಲಹೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕೇಳಿಬಂತು.ಮೂಡುಬಿದಿರೆ ಪುರಸಭೆ ಸಾಮಾನ್ಯ ಸಭೆ ಅಧ್ಯಕ್ಷೆ ಜಯಶ್ರೀ ಕೇಶವ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಸಭೆಯಲ್ಲಿ ಅಂಗಡಿ ಕೋಣೆಗಳ ಏಲಂ, ಪುರಸಭೆಗೆ ಆಗುವ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಯಿತು.

ಪರವಾನಗಿಯಲ್ಲಿ ಶೇ.10 ಹೆಚ್ಚಳ: ಪುರಸಭಾ ವ್ಯಾಪ್ತಿಯಲ್ಲಿ ಉದ್ಯಮ ಪರವಾನಗಿ ಇಲ್ಲದೆ ನೂರಾರು ಸಂಸ್ಥೆಗಳು ವ್ಯವಹಾರ ನಡೆಸುತ್ತಿವೆ. ಎಲ್ಲರೂ ಉದ್ಯಮ ಪರವಾನಗಿ ಪಡೆಯಲು ಪುರಸಭೆ ಕ್ರಮ ಕೈಗೊಳ್ಳಬೇಕೆಂದು ಎಂದು ಸದಸ್ಯ ರಾಜೇಶ್ ಆಗ್ರಹಿಸಿದರು. ಪರವಾನಗಿ ಇಲ್ಲದಿರುವವರ ಪಟ್ಟಿ ತಯಾರಿಸಿದ್ದು, ಅವರಿಗೆ ನೋಟಿಸ್‌ ನೀಡಿ ಉದ್ಯಮ ಪರವಾನಗಿ ಪಡೆಯಲು ಸೂಚಿಸಲಾಗಿದೆ ಎಂದು ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದರು.

ಮೂಡುಬಿದಿರೆ ಪುರಸಭೆಯು ಉದ್ಯಮ ಪರವಾನಗಿಯಲ್ಲಿ ಶೇ.10 ಹೆಚ್ಚಿಸಲು ನಿರ್ಧರಿಸಲಾಯಿತು. ಪ್ರತಿ ವಾರ್ಡ್‌ಗಳಲ್ಲಿ ರಸ್ತೆ ದುರಸ್ತಿ ಹಾಗೂ ಇತರ ತುರ್ತು ಕಾಮಗಾರಿಗಳಿಗಾಗಿ 10 ಲಕ್ಷ ರುಪಾಯಿ ಮೀಸಲಿಡುವುದಾಗಿ ಉಪಾಧ್ಯಕ್ಷ ನಾಗರಾಜ ಪೂಜಾರಿ ತಿಳಿಸಿದರು.

ಕರಿಂಜೆ ಗ್ರಾಮದ ರಾಮಗುಡ್ಡೆ ಎಂಬಲ್ಲಿ ರಮೇಶ್ ಆಚಾರ್ಯ ಎಂಬವರಿಗೆ 94 ಸಿಸಿಯಡಿ ಹಕ್ಕುಪತ್ರ ನೀಡಿದ್ದರೂ ಪುರಸಭೆಯ ಅಧಿಕಾರಿಗಳು ಖಾತೆ ನೀಡದೆ ಸತಾಯಿಸುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳಿದ್ದು ಖಾತೆ ನೀಡದಿದ್ದರೆ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಸದಸ್ಯ ಸುರೇಶ್ ಕೋಟ್ಯಾನ್ ಎಚ್ಚರಿಸಿದರು.

ಈ ಸ್ಥಳದ ರಸ್ತೆ ಬಗ್ಗೆ ವಿವಾದವಿದ್ದು, ಈ ಕುರಿತು ಸಮಸ್ಯೆ ಬಗೆಹರಿಸಲು ತಹಸೀಲ್ದಾರರಿಗೆ ಪತ್ರ ಬರೆಯಲಾಗಿದೆ. ರಮೇಶ್ ಆಚಾರ್ಯ ಅವರಿಗೆ ಖಾತೆ ನೀಡುವುದಾಗಿ ಮುಖ್ಯಾಧಿಕಾರಿ ಇಂದು ಎಂ. ಉತ್ತರಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಎಸ್.ಪ್ರಭುಗೆ ಅಭಿನಂದನೆ: ಪುರಸಭೆಗೆ ನೂತನ ಸ್ಥಾಯಿ ಸಮಿತಿ ರಚಿಸಿದ್ದು, ಅಧ್ಯಕ್ಷೆಯಾಗಿ ಆಯ್ಕೆಯಾದ ಸ್ವಾತಿ ಪ್ರಭು ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಸದಸ್ಯರಾಗಿ ಸುಜಾತಾ ಶಶಿಕಿರಣ್, ಸೌಮ್ಯಾ ಸಂದೀಪ್ ಶೆಟ್ಟಿ, ದಿವ್ಯಾ ಜಗದೀಶ್, ಧನಲಕ್ಷ್ಮೀ, ಶ್ವೇತಾ ಪ್ರವೀಣ್, ಕುಶಲಾ ಯಶೋಧರ ದೇವಾಡಿಗ, ನವೀನ್ ಶೆಟ್ಟಿ, ಮಮತಾ ಆನಂದ ಕುಮಾ‌ರ್ ಆಯ್ಕೆಯಾಗಿದ್ದಾರೆ.