ನಾಲ್ಕು ಜನರ ಹಿತಕ್ಕಾಗಿ ಬಾಳಿ: ನಾಡೋಜ ಅನ್ನದಾನೀಶ್ವರ ಶಿವಯೋಗಿಗಳು

| Published : Dec 04 2024, 12:30 AM IST

ನಾಲ್ಕು ಜನರ ಹಿತಕ್ಕಾಗಿ ಬಾಳಿ: ನಾಡೋಜ ಅನ್ನದಾನೀಶ್ವರ ಶಿವಯೋಗಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬದುಕಿನಲ್ಲಿ ನಾಲ್ಕು ಜನರಿಗಾದರೂ ಸಹಾಯ ಮಾಡಿ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕುಕನೂರು

ಬದುಕಿನಲ್ಲಿ ನಾಲ್ಕು ಜನರಿಗಾದರೂ ಸಹಾಯ ಮಾಡಿ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮುಂಡರಗಿಯ ಅನ್ನದಾನೀಶ್ವರ ಮಠದ ನಾಡೋಜ ಶ್ರೀ ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.

ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ಜಾತ್ರಾ ಮಹೋತ್ಸವ ಮತ್ತು ಶ್ರೀ ಕಲ್ಬುರ್ಗಿ ಶರಣಬಸವೇಶ್ವರ ಪುರಾಣ ಮಂಗಳದ ಸಾನಿಧ್ಯ ವಹಿಸಿ ಮಾತನಾಡಿದರು.

ಜೀವನದಲ್ಲಿ ಯಶಸ್ಸು ಸಾಧಿಸಲು ನಮ್ಮಲ್ಲಿ ತಾಳ್ಮೆ ಇರಬೇಕು. ತಾಳಿದವನು ಬಾಳುತ್ತಾನೆ. ಗುರುವಿನ ಮಾರ್ಗದರ್ಶನದಲ್ಲಿ ಸದಾ ನಡೆಯಬೇಕು. ಸೇವೆ ಮಾಡುವ ಗುಣ ಅಳವಡಿಸಿಕೊಳ್ಳಬೇಕು. ನಮ್ಮಲ್ಲಿ ತ್ಯಾಗದ ಬದುಕು ಇರಬೇಕು. ಒಬ್ಬರನ್ನ ನೋಡಿ ಖುಷಿ ಪಡಬೇಕು. ಬದುಕು ನಾಲ್ಕು ಜನರ ಕಲ್ಯಾಣಕ್ಕೆ ದಾರಿಯಾಗಬೇಕು. ಹಮ್ಮು ಬಿಮ್ಮುಗಳು ಇಲ್ಲದ ಬದುಕು ನಮ್ಮದಾಗಬೇಕು ಎಂದರು.

ಶ್ರೀ ಶಾಖಾಮಠದ ಮಹಾದೇವ ಸ್ವಾಮೀಜಿ ಮಾತನಾಡಿ, ಮುಂಡರಗಿ ಅನ್ನದಾನೀಶ್ವರ ಮಠಕ್ಕೆ 900 ವರ್ಷಗಳ ಭವ್ಯವಾದ ಪರಂಪರೆಯಿದೆ. ಶ್ರೀ ಮಠ ತನ್ನ ಮೂಲ ಆಸ್ತಿಯನ್ನು ಹಲವಾರು ಕಲ್ಯಾಣ ಕಾರ್ಯಗಳಿಗೆ ದಾನ ನೀಡಿದೆ. ಸಾಹಿತ್ಯಿಕವಾಗಿ 260ಕ್ಕೂ ಹೆಚ್ಚು ಗ್ರಂಥಗಳನ್ನು ಈ ನಾಡಿಗೆ ನೀಡಿದೆ. ಶೈಕ್ಷಣಿಕವಾಗಿ 1924ರಲ್ಲೆ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಪ್ರಾರಂಭಿಸಿ ಶಿಕ್ಷಣವನ್ನು ನೀಡಿದ ಕೀರ್ತಿ ಶ್ರೀಮಠಕ್ಕೆ ಇದೆ. ಇಂತಹ ಶ್ರೀಮಠಕ್ಕೆ ನಾಡಿನ ತುಂಬೆಲ್ಲ ಭಕ್ತರು ಇದ್ದಾರೆ. ಅವರ ಭಕ್ತಿ ದೊಡ್ಡದು ಎಂದರು.

ಹಿರೇಸಿಂದೋಗಿ ಚಿದಾನಂದ ಸ್ವಾಮೀಜಿ ಮಾತನಾಡಿ, ಕಲ್ಬುರ್ಗಿ ಶರಣಬಸವೇಶ್ವರ ಪುರಾಣ ಹಚ್ಚುವುದರಿಂದ ಈ ನಾಡಿಗೆ ಕಲ್ಯಾಣವಾಗುತ್ತದೆ. ತಳಕಲ್ ಭಕ್ತರು ಉತ್ತಮ ಕೆಲಸ ಮಾಡಿದ್ದಾರೆ. ಧಾರ್ಮಿಕ ಕಾರ್ಯಗಳು ನಡೆಯುವುದರಿಂದ ಮನುಷ್ಯ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಪ್ರವಚನ ಸೇವೆಯನ್ನು ಶಿವಯೋಗಿಶ್ವರ ಸ್ವಾಮೀಜಿ, ಸಂಗೀತ ಸೇವೆಯನ್ನ ಕುಮಾರ ಶಾಸ್ತ್ರಿ ತೊಳಲಿ, ಮಲ್ಲಿಕಾರ್ಜುನ ಕರ್ಜಗಿ, ಈಶ್ವರಯ್ಯ ಹಲಸಿನಮಠದ, ಬಸಯ್ಯ ಚಂಡೂರು ಮಾಡಿದರು.

ಬೆಳಗ್ಗೆ ಶ್ರೀ ಕಲ್ಬುರ್ಗಿ ಶರಣಬಸವೇಶ್ವರ ಭಾವಚಿತ್ರ, ಕುಂಭ ಮೇರವಣಿಗೆ ಮತ್ತು ಸಂಜೆ ಅನ್ನದಾನೀಶ್ವರ ರಥೋತ್ಸವಕ್ಕೆ ಮುಂಡರಗಿ ಪೂಜ್ಯರು ಚಾಲನೆ ನೀಡಿದರು. ಮಹಾದಾಸೋಹ ಜರುಗಿತು.

ಮಂಗಳೂರಿನ ಸಿದ್ದಲಿಂಗ ಸ್ವಾಮೀಜಿ, ಮೈನಳ್ಳಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ, ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಗೂಳಪ್ಪಜ್ಜ ಮೂಲಿಮನಿ, ವೀರಯ್ಯ ತೋಂಟದಾರ್ಯಮಠ, ಜಯಣ್ಣ ಮುಂಡರಗಿ, ತಳಕಲ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರಿದ್ದರು.