ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಇಂದಿನ ಯುವಕರು ದುಶ್ಚಟಗಳ ದಾಸರಾಗಿದ್ದು, ದೂಮಪಾನ, ಮದ್ಯಪಾನ, ತಂಬಾಕು ಸೇವನೆ, ಮಾದಕ ದ್ರವ್ಯಗಳ ಸೇವನೆಯಿಂದ ತಮ್ಮ ಜೀವನವನ್ನೆ ಹಾಳುಮಾಡುತ್ತಿದ್ದು, ಇದರಿಂದ ದೂರ ಇರಬೇಕು ಎಂದು ಯಶೋದ ನರ್ಸಿಂಗ್ ವಿದ್ಯಾಲಯ ಪ್ರಾಂಶುಪಾಲ ರಮೇಶ ಚೌದರಿ ಹೇಳಿದರು.ನಗರದ ಹೊರ ವಲಯದ ಹಿಟ್ಟಿನಹಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಂಬಾಕಿನಲ್ಲಿ ನಿಕೋಟಿನ್ ಎಂಬ ಹಾನಿಕಾರಕ ಅಂಶವಿದೆ. ಇದರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಇದಲ್ಲದೆ ಅನೇಕ ಹಾನಿಕಾರಕ ರೋಗಗಳಾದ ಕ್ಯಾನ್ಸರ್ ಮತ್ತು ಇನ್ನಿತರ ಕಾಯಿಲೆಯಿಂದ ಜೀವಿತಾವಧಿಯಲ್ಲಿ ಹಾನಿಯನ್ನುಂಟು ಮಾಡುತ್ತದೆ. ಕಾರಣ ಯುವಕರು ಇದರಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ತಂಬಾಕು ಸೇವನೆ ಒಂದು ಸಾಮಾಜಿಕ ಪಿಡುಗಾಗಿದ್ದು, ಇದರಿಂದ ಅನೇಕ ಕುಟುಂಬಗಳು ನಾಶವಾಗಿವೆ. ಕಾರಣ ಈ ಕುರಿತು ಜಾಗೃತಿ ಮೂಡಿಸಲು ಪ್ರತಿಯೊಬ್ಬ ಯುವ ಪೀಳಿಗೆ ಶ್ರಮಿಸಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ ವಿದ್ಯಾಧಿಕಾರಿ ಡಾ.ಎ.ಭೀಮಪ್ಪ ಮಾತನಾಡಿ, ದೂಮಪಾನವು ಒಂದು ನಿಧಾನ ಆತ್ಮಹತ್ಯೆಯಾಗಿದ್ದು, ತಂಬಾಕು ಸೇವನೆ ಮಾಡುವವರು ಮಾತ್ರವಲ್ಲ ತಂಬಾಕು ಉತ್ಪಾದನೆ ಮಾರಾಟ ಮಾಡುವವರಿಗೂ ಕೂಡ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತದೆ. ಕಾರಣ ಈ ಕುರಿತು ಅರಿವು ಮೂಡಿಸಲು ಇಂದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವೈದ್ಯಾಧಿಕಾರಿ ಡಾ.ಬಸವರಾಜ ಬೀಳೂರ ಅವರು ತಂಬಾಕಿನಿಂದ ಆಗುವ ತೊಂದರೆಗಳ ಬಗ್ಗೆ ವಿವರಿಸಿದರು.ಸಹ ಸಂಶೋಧನಾ ನಿರ್ದೇಶಕ ಡಾ.ಅಶೋಕ ಸಜ್ಜನ, ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಎಸ್.ಬಿ.ಜಗ್ಗಿನವರ, ಪ್ರಾಧ್ಯಾಪಕ ಡಾ.ಆರ್.ಬಿ. ಜೊಳ್ಳಿ, ಡಾ.ಸಂಗೀತ ಜಾದವ, ಎನ್.ಎಸ್.ಎಸ್. ಕಾರ್ಯಕ್ರಮ ಯೋಜನಾಧಿಕಾರಿ ಡಾ.ರಮೇಶ ಬೀರಗೆ, ಡಾ. ಸಾವಿತ್ರಿ ಪಾಟೀಲ, ನಿಲಯ ಪಾಲಕರಾದ ಡಾ.ಎಸ್.ಎಚ್.ಗೋಟ್ಯಾಳ, ಡಾ.ವಿದ್ಯಾವತಿ ಯಡಹಳ್ಳಿ, ವಿದ್ಯಾರ್ಥಿ ಸಂಘದ ರಿಯಾನ್ಮಲಿಕ್ ಹಳ್ಳೂರ, ಪ್ರಿಯಾಂಕ ಆನಿಕಿವಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.