ಕನ್ನಡಪ್ರಭ ವಾರ್ತೆ ಶಿರಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಿಂದ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿಗಳಿಗೂ ಸರಕಾರದ ಸೌಲಭ್ಯ ತಲುಪಬೇಕು. ಅರ್ಹರಿಗೆ ಸಾಲ ಸೌಲಭ್ಯ ಸಿಗಬೇಕು. ಅದರಿಂದ ಅವರು ಹೆಚ್ಚು ವ್ಯಾಪಾರ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂಬುದೇ ಸರ್ಕಾರಗಳ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಅವರು ಬುಧವಾರ ನಗರದ ಹೂವಿನ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆ ಬಳಿ ಬೀದಿ ಬದಿ ವ್ಯಾಪಾರಸ್ಥರೊಂದಿಗೆ ಯೋಜನೆಗಳ ಬಗ್ಗೆ ಸಂವಾದ ನಡೆಸಿ ಮಾತನಾಡಿದರು. ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ, ಸ್ವನಿಧಿ ಯೋಜನೆ ಹಾಗೂ ಪ್ರಧಾನಮಂತ್ರಿ ನಗರ ಆವಾಸ್ ಯೋಜನೆಗಳಿಂದ ಫಲಾನುಭವಿಗಳಿಗೆ ಉತ್ತಮ ಅನುಕೂಲಗಳು ದೊರಕಿದ್ದು, ಪಿಎಂ ವಿಶ್ವಕರ್ಮ ಹಾಗೂ ಸ್ವನಿಧಿ ಯೋಜನೆಗಳಿಂದ ತುಮಕೂರು ಜಿಲ್ಲೆಯಲ್ಲಿ ೨೫೦೦೦ಕ್ಕೂ ಹೆಚ್ಚು ಜನ ಸಾಲ ಸೌಲಭ್ಯ ಪಡೆದಿದ್ದಾರೆ. ಪಿಎಂ ವಿಶ್ವ ಕರ್ಮ ಮತ್ತು ಸ್ವನಿಧಿ ಯೋಜನೆಯಿಂದ ಅನುಕೂಲ ಪಡೆದ ಫಲಾನುಭವಿಗಳು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ. ಅವರು ಬ್ಯಾಂಕಿನವರು ಫಲಾನುಭವಿಗಳಿಗೆ ಯಾವುದೇ ಅಡಮಾನ ಇಲ್ಲದೆ ಸಾಲ ನೀಡಬೇಕೆಂದು ತಿಳಿಸಿದ್ದೇವೆ. ಇದಕ್ಕೆ ಬ್ಯಾಂಕಿನವರು ಸ್ಪಂದನೆ ಮಾಡಬೇಕು. ಜಿಲ್ಲೆಯಲ್ಲಿ ಇದುವರೆಗೂ ಸುಮಾರು ೨೫೦೦೦ ಜನ ಸಾಲ ಪಡೆದಿದ್ದಾರೆ. ಅದರಲ್ಲಿ ಶೇ. ೭೦ರಷ್ಟು ಹಣ ಮರುಪಾವತಿ ಮಾಡಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೇಂದ್ರ ತಂಡದ ಉಪಕಾರ್ಯದರ್ಶಿ ಶುಕ್ಲ, ಉಪವಿಭಾಗಾಧಿಕಾರಿ ಶಿವಪ್ಪ, ತಹಸೀಲ್ದಾರ್ ಆನಂದ್ ಕುಮಾರ್, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಪೌರಾಯುಕ್ತ ರುದ್ರೇಶ್.ಕೆ, ತಾಪಂ ಇಒ ಹರೀಶ್, ನಗರಸಭೆ ಸದಸ್ಯರಾದ ಉಮಾ ವಿಜಯರಾಜ್, ಸೇರಿದಂತೆ ಹಲವರು ಹಾಜರಿದ್ದರು.