ಕನ್ನಡಪ್ರಭ ವಾರ್ತೆ ಪಾವಗಡ
ಮಳೆ ಬೆಳೆ ಇಲ್ಲದೆ ತಾಲೂಕಿನಲ್ಲಿ ಬರಗಾಲ ಸೃಷ್ಟಿಯಾಗಿದೆ. ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಅಭಾವ ಉಂಟಾಗಿದೆ. ತಾಲೂಕಿನ ಜನಪರ ಸಮಸ್ಯೆ ನಿವಾರಣೆಯಲ್ಲಿ ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕಾಂಗ್ರೆಸ್ ಸರ್ಕಾರದ ವೈಖರಿ ವಿರುದ್ಧ ತರಾಟೆಗೆ ತೆಗೆದುಕೊಂಡರು.ತಾಲೂಕಿನ ಜನಪರ ಸಮಸ್ಯೆ ನಿವಾರಣೆಯಲ್ಲಿ ಶಾಸಕ ಹಾಗೂ ತಾಲೂಕು ಆಡಳಿತ ವೈಫಲ್ಯ ವಿರೋಧಿಸಿ ತಾಲೂಕು ಜಾತ್ಯತೀತ ಜನತಾ ದಳದ ವತಿಯಿಂದ ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಉಗ್ರ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಅವರು, ಬರ ತಾಂಡವಾಗುತ್ತಿದ್ದು, ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಎದುರಾಗಿದೆ. ಅಂತರ್ಜಲ ಕುಸಿತವಾಗಿದೆ. ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿದರು. ಜಾನುವಾರುಗಳ ಮೇವಿನ ಸಮಸ್ಯೆ ನಿವಾರಣೆಗೆ ನಾಲ್ಕು ಹೋಬಳಿ ಕೇಂದ್ರಗಳಲ್ಲಿ ಗೋಶಾಲೆ ತೆರೆಯಬೇಕು. ಕಡುಬಡವರಿಗೆ ಸಮರ್ಪಕ ಪಡಿತರ ಚೀಟಿ ವಿತರಿಸಬೇಕು. ಗ್ಯಾರಂಟಿಗಳಿಂದ ವಿವಿಧ ಯೋಜನೆ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಶಾಸಕ ಎಚ್.ವಿ.ವೆಂಕಟೇಶ್ ನಿತ್ಯ ಬೆಂಗಳೂರು ತುಮಕೂರು ನಗರ ಪ್ರದೇಶಗಳಿಗೆ ತೆರಳುತ್ತಿದ್ದು ಕಾಮಗಾರಿಗಳು ಗುದ್ದಲಿಪೂಜೆಗಳಿಗೆ ಮಾತ್ರ ಸೀಮಿತವಾಗಿವೆ ಎಂದು ಆರೋಪಿಸಿದರು.ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ ಮಾತನಾಡಿ, ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಶಾಸಕರ ಆದೇಶದಂತೆ ಪೊಲೀಸ್ ಠಾಣೆಗಳು ನಡೆಯುತ್ತಿವೆ. ವಿನಾಕಾರಣ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿ ದೌರ್ಜನ್ಯವೆಸಗುತ್ತಿದ್ದಾರೆ. ತಾಲೂಕಿನಲ್ಲಿ ಬಹುತೇಕ ಕಚೇರಿಗಳು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿವೆ. ಪರಿಣಾಮ ಜನಸಾಮಾನ್ಯರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ತಕ್ಷಣ ಸರಿಪಡಿಸಬೇಕು. ರೈತರ ಜಮೀನುಗಳಿಗೆ ಹೋಗಲು ಕಾನೂನಿನ ಅನ್ವಯ ದಾರಿ ಬಿಡಿಸಲು ಜೆಡಿಎಸ್ ಪಕ್ಷದವರಿಗೆ ಅನ್ಯಾಯವೆಸಗುತ್ತಿದ್ದಾರೆ. ವಿದ್ಯುತ್ ಆಡಚಣೆ ಸೇರಿದಂತೆ ಟ್ರಾನ್ಸ್ ಫಾರ್ಮಗಳನ್ನು ಅಳವಡಿಸಲು ಬೆಸ್ಕಾಂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದು ಇನ್ನೂ ಮಂದಿ ಹಣ ಬಲ ನಡೆಯುವುದಿಲ್ಲ. ಜನಪರ ಸಮಸ್ಯೆ ನಿವಾರಣೆಯಲ್ಲಿ ಶಾಸಕರ ವೈಫಲ್ಯ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಜನತೆ ತಕ್ಕಪಾಠ ಕಲಿಸಲಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಕೊತ್ತೂರು ರಾಜವಂತಿಯ 12ಕಿಮೀ ರಸ್ತೆ ಹದಗಟ್ಟಿದ್ದು ಕಳೆದ ಎರಡು ವರ್ಷದಿಂದ ಸರಿಪಡಿಸುವ ಗೋಜಿಗೆ ಹೋಗಿಲ್ಲ. ವದನಕಲ್ಲು ರಂಗಸಮುದ್ರ ಪ್ರಧಾನ ರಸ್ತೆ ಮಾರ್ಗ ಹಾಳಾಗಿದೆ. ಶಾಸಕರು ಬರೀ ಸುಳ್ಳು ಭರವಸೆ ನೀಡಿ ಕಾಲಹರಣ ಮಾಡುತ್ತಿದ್ದಾರೆ. ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದು ಟೀಕಿಸಿದರು.ಹಿರಿಯ ಮುಖಂಡರಾದ ಗುಜ್ಜನಡು ಜಿ.ವಿ.ಬಲರಾಮ್, ಜೆಡಿಎಸ್ ಮಹಾ ಕಾರ್ಯದರ್ಶಿ ಸೊಗಡು ವೆಂಕಟೇಶ್ , ತಾಲೂಕು ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಕೊತ್ತೂರು ನಾಗೇಶ್, ರೈತ ಘಟಕದ ಅಧ್ಯಕ್ಷ ಗಂಗಾಧರ್ ನಾಯ್ಡ, ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾದ ಎನ್.ತಿಮ್ಮಾರೆಡ್ಡಿ, ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಎ.ಈರಣ್ಣ,ಹಿರಿಯ ಮುಖಂಡರಾದ ಚೆನ್ನಮಲ್ಲಪ್ಪ, ರಾಜಶೇಖರಪ್ಪ, ಬಲರಾಮರೆಡ್ಡಿ, ಗೋವಿಂದಬಾಬು, ಸತ್ಯಪ್ಪ, ಎಸ್.ವಿ.ಗೋವಿಂದಪ್ಪ, ಲಿಂಗದಹಳ್ಳಿ ಎಲ್.ಎನ್.ಸಣ್ಣಾರೆಡ್ಡಿ, ಕೊಡಿಗೇನಹಳ್ಳಿ ನರಸಿಂಹಪ್ಪ, ಸದಸ್ಯ ಅಂಜಪ್ಪ,ಎನ್.ವಿ.ಕೃಷ್ಣಾರೆಡ್ಡಿ, ರಾಜ್ಗೋಪಾಲ್,ಅಪ್ಪಾಜಿಹಳ್ಳಿ ರಾಮಾಂಜಿನರೆಡ್ಡಿ,ಹೊಸಕೋಟೆ ಸತ್ಯನಾರಾಯಣ್, ವೈ.ಆರ್.ಚೌದರಿ,ಎಂ.ಆರ್.ನರಸಿಂಹಪ್ಪ, ಮನುಮಹೇಶ್, ಗುಟ್ಟಹಳ್ಳಿ ಮಣಿ, ಜಿ.ಎ.ವೆಂಕಟೇಶ್, ಗೋಪಾಲ್, ಗಡ್ಡಂ ತಿಮ್ಮರಾಜು, ಕಾವಲಗರೆ ರಾಮಾಂಜಿನಪ್ಪ, ಯುವ ಅಧ್ಯಕ್ಷ ನೆರಳೇಕುಂಟೆ ಭರತ್, ಸಿ.ಎಚ್.ಪಾಳ್ಯ ನರಸೇಗೌಡ, ಅಪ್ಬಂಡೆ ಗೋಪಾಲ್,ಕೆಇಬಿ ಅಲ್ಕುಂದಪ್ಪ, ಲಕ್ಷ್ಮನಾಯಕ್, ಪೆದ್ದನ್ನ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾರಮೇಶ್,ಶಂಕುತಲಬಾಯಿ,ಸುಜಾತಮ್ಮ,ಅಮರದೇವಿ ಹಾಗೂ ಇತರೆ ಅಪಾರ ಸಂಖ್ಯೆಯ ಮುಖಂಡರು ಹಾಗೂ ಸಾವಿರಾರು ಮಂದಿ ಜೆಡಿಎಸ್ ಕಾರ್ಯಕರ್ತರಿದ್ದರು.