ಲೋಕ ಅದಾಲತ್: 8 ವರ್ಷದ ಆಸ್ತಿ ವಿವಾದ ಸಂಧಾನದ ಮೂಲಕ ಇತ್ಯರ್ಥ

| Published : Sep 16 2025, 12:04 AM IST

ಸಾರಾಂಶ

2017ರಿಂದ ಕುಟುಂಬದ ನಡುವೆ ನಡೆಯುತ್ತಿದ್ದ ಆಸ್ತಿ ವಿವಾದ ಪ್ರಕರಣವನ್ನು ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನ ಮಾಡುವ ಮೂಲಕ ಇತ್ಯರ್ಥಪಡಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

2017ರಿಂದ ಕುಟುಂಬದ ನಡುವೆ ನಡೆಯುತ್ತಿದ್ದ ಆಸ್ತಿ ವಿವಾದ ಪ್ರಕರಣವನ್ನು ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನ ಮಾಡುವ ಮೂಲಕ ಇತ್ಯರ್ಥಪಡಿಸಲಾಯಿತು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ ನಲ್ಲಿ ಬಾಲಕೋಟೆ ಜಿಲ್ಲೆಯ ಕೆಳ ಹಂತದ ನ್ಯಾಯಾಲಯದಿಂದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಪ್ರಕರಣ ಬಂದಿತ್ತು. ಕುಟುಂಬಸ್ಥರ ಮಧ್ಯೆ ರಾಜೀ ಸಂಧಾನ ಮೂಲಕ ಪ್ರಕರಣ ಇತ್ಯರ್ಥಪಡಿಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ. ವಿಜಯ್‌ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ ನಲ್ಲಿ ಬಾಕಿ ಇರುವ 8533 ಪೈಕಿ 5085 ಹಾಗೂ ವಾಜ್ಯ ಪೂರ್ವ ಪ್ರಕರಣಗಳಲ್ಲಿ 29014 ಪೈಕಿ 27485 ಪ್ರಕರಣ ಸೇರಿ ಒಟ್ಟು ₹137.93 ಕೋಟಿ ಮೊತ್ತದ 32570 ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು.

ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ 2551 ಪ್ರಕರಣಗಳ ಪೈಕಿ 1490, ಬೀಳಗಿ ನ್ಯಾಯಾಲಯದಲ್ಲಿ 190 ಪೈಕಿ 112, ಮುಧೋಳದ 465 ಪೈಕಿ 450, ಬನಹಟ್ಟಿಯ 1648 ಪೈಕಿ 532, ಹುನಗುಂದದ 1301 ಪೈಕಿ 1037, ಇಲಕಲ್ಲದ 438 ಪೈಕಿ 355, ಬಾದಾಮಿಯ 662 ಪೈಕಿ 564, ಜಮಖಂಡಿ ನ್ಯಾಯಾಲಯದಲ್ಲಿನ 1248 ಪೈಕಿ 534 ಹಾಗೂ ಎಫ್.ಟಿ.ಎಸ್.ಸಿ ಕೋರ್ಟ್‌ನಲ್ಲಿನ 30 ಪೈಕಿ 1 ಪ್ರಕರಣ ಇತ್ಯರ್ಥಪಡಿಸಲಾಯಿತು.

ವಾಜ್ಯ ಪೂರ್ವ ಪ್ರಕರಣಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ 1591 ಪೈಕಿ 62 ಪ್ರಕರಣ (₹1.03) ಇತ್ಯರ್ಥಗೊಂಡರೆ, ವಿದ್ಯುತ್‌ ಬಿಲ್‌ ಗೆ ಸಂಬಂಧಿಸಿದ 165 ಪೈಕಿ 165 ಪ್ರಕರಣ ಇತ್ಯರ್ಥ (₹3.23 ಲಕ್ಷ), ನೀರಿನ ಕರಕ್ಕೆ ಸಂಬಂಧಿಸಿದ 2418 ಪೈಕಿ 2418 ಪ್ರಕರಣ (₹1 ಕೋಟಿ), ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದ 9250 ಪೈಕಿ 9250 (₹30.94 ಲಕ್ಷ), ಆಸ್ತಿ ತೆರಿಗೆ ಸಂಬಂಧಿಸಿದಂತೆ 15519 ಪೈಕಿ 15519 ಪ್ರಕರಣಗಳ (₹7.99ಕೋಟಿ) ಇತ್ಯರ್ಥಪಡಿಸಲಾಯಿತು.

ಲೋಕ ಅದಾಲತ್ ಶಿಬಿರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ಎಫ್‌ಟಿಎಸ್‌ಸಿ-1 ನ್ಯಾಯಾಧೀಶ ಪಿ.ಎಸ್. ಸದರ ಜೋಶಿ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಜಿ.ಎ. ಮೂಲಿಮನಿ, 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಶಕರಣಮ್ ಕೆ, 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಮೇಶ ಎಕಬೋಟೆ, ಜಿಲ್ಲಾ ನ್ಯಾಯಾಧೀಶರು ಮತ್ತು ಕುಟುಂಬ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಮಹೇಶ ಪಾಟೀಲ, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಸುದೀಪ ನಾಯಕ, 2ನೇ ಹೆಚ್ಚುವರು ಹಿರಿಯ ದಿವಾಣಿ ನ್ಯಾಯಾಧೀಶ ರಾಜಶೇಖರ ತಿಳಗಂಜಿ, ಪ್ರಧಾನ ದಿವಾಣಿ ನ್ಯಾಯಾಧೀಶ ಮುರುಘೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಇದ್ದರು.