ಮಹಿಳೆಯರ ಪೈಕಿ ಗೆದ್ದಿರುವುದು ಚಂದ್ರಪ್ರಭಾ ಅರಸು ಮಾತ್ರ

| Published : Apr 01 2024, 12:53 AM IST

ಮಹಿಳೆಯರ ಪೈಕಿ ಗೆದ್ದಿರುವುದು ಚಂದ್ರಪ್ರಭಾ ಅರಸು ಮಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಚಂದ್ರಪ್ರಭಾ ಅರಸು 1983 ರಲ್ಲಿ ಜನತಾಪಕ್ಷದಿಂದ ವಿಧಾನಸಭೆಗೆ ಪ್ರಥಮ ಬಾರಿಗೆ ಗೆದ್ದು, ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ರೇಷ್ಮೆ ಖಾತೆಯ ಸಚಿವೆಯಾಗಿದ್ದರು. ಕೆಲವೇ ದಿನಗಳಲ್ಲಿ ಅಜೀಜ್ ಸೇಠ್ ಅವರೊಂದಿಗೆ ಕಾಂಗ್ರೆಸ್ ಸೇರಿದರು. 1985 ರಲ್ಲಿ ಅವರು ಹುಣಸೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. 1989 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಅಂಶಿ ಪ್ರಸನ್ನಕುಮಾರ್

ಕನ್ನಡಪ್ರಭ ವಾರ್ತೆ ಮೈಸೂರು

ಲೋಕಸಭೆಗೆ ಮೈಸೂರು ಕ್ಷೇತ್ರದಿಂದ 17 ಹಾಗೂ ಚಾಮರಾಜನಗರ ಕ್ಷೇತ್ರದಿಂದ 15 ಬಾರಿ ಚುನಾವಣೆಗಳು ನಡೆದಿವೆ. ಆದರೆ ಈವರೆಗೆ ಲೋಕಸಭೆಗೆ ಆಯ್ಕೆಯಾಗಿರುವ ಏಕೈಕ ಮಹಿಳೆ ಎಂದರೇ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಪುತ್ರಿ ಚಂದ್ರಪ್ರಭಾ ಅರಸು ಮಾತ್ರ.

ಮೈಸೂರು ಕ್ಷೇತ್ರದಲ್ಲಿ ಚಂದ್ರಪ್ರಭಾ ಅರಸು ಅವರಿಗೆ ಕಾಂಗ್ರೆಸ್ ಹಾಗೂ ಚಾಮರಾಜನಗರದಲ್ಲಿ ಸುಶೀಲಾ ಕೇಶವಮೂರ್ತಿ ಅವರಿಗೆ ಲೋಕಶಕ್ತಿ ಟಿಕೆಟ್ ಕೊಟ್ಟಿವೆ. ಮೈಸೂರಿನಿಂದ ಎಂ.ವಿ. ಪದ್ಮಮ್ಮ ಅವರು ಆಮ್ ಆದ್ಮಿ ಪಾರ್ಟಿಯಿಂದ, ರತಿ ಪೂವಯ್ಯ ಕರುನಾಡ ಪಾರ್ಟಿಯಿಂದ ಕಣಕ್ಕಿಳಿದಿದ್ದರು.

ಚಂದ್ರಪ್ರಭಾ ಅರಸು 1983 ರಲ್ಲಿ ಜನತಾಪಕ್ಷದಿಂದ ವಿಧಾನಸಭೆಗೆ ಪ್ರಥಮ ಬಾರಿಗೆ ಗೆದ್ದು, ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ರೇಷ್ಮೆ ಖಾತೆಯ ಸಚಿವೆಯಾಗಿದ್ದರು. ಕೆಲವೇ ದಿನಗಳಲ್ಲಿ ಅಜೀಜ್ ಸೇಠ್ ಅವರೊಂದಿಗೆ ಕಾಂಗ್ರೆಸ್ ಸೇರಿದರು. 1985 ರಲ್ಲಿ ಅವರು ಹುಣಸೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. 1989 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು. 1991 ರಲ್ಲಿ ಲೋಕಸಭೆ ಚುನಾವಣೆ ಎದುರಾದಾಗ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಯ ಕೊರತೆ. ಏಕೆಂದರೆ 1984, 1989 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಬಿಜೆಪಿ ಸೇರಿ, ಅಭ್ಯರ್ಥಿಯಾಗಿದ್ದರು. ಚಂದ್ರಪ್ರಭಾ ಅವರ ಮೇಲೆ ಒತ್ತಡ ಹೇರಿ, ಕಾಂಗ್ರೆಸ್ ಟಿಕೆಟ್ ನೀಡಲಾಯಿತು. 2,25,881 ಮತಗಳನ್ನು ಗಳಿಸಿ ಚಂದ್ರಪ್ರಭಾ ಆಯ್ಕೆಯಾದರು. 2,08,999 ಮತಗಳನ್ನು ಪಡೆದ ಒಡೆಯರ್ ಸೋತರು.

ಚಂದ್ರಪ್ರಭಾ ಅವರ ಲೋಕಸಭಾ ಸದಸ್ಯತ್ವದ ಅವಧಿ ಇನ್ನೂ ಎರಡು ವರ್ಷ ಬಾಕಿ ಇತ್ತು. ಆದರೂ ಅವರು 1994 ರಲ್ಲಿ ಹುಣಸೂರಿನಿಂದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. 1999 ರಲ್ಲಿ ಅವರು ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾದರೂ ಸೋತರು. 2004 ರ ನಂತರ ಅವರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗಲಿಲ್ಲ. ಮತ್ತೆ ಬೇರೆ ಯಾವುದೇ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಅವಕಾಶ ಸಿಗಲಿಲ್ಲ. ಹೀಗಾಗಿ ಚಂದ್ರಪ್ರಭಾ ಅವರು ಸಕ್ರಿಯ ರಾಜಕಾರಣದಿಂದ ದೂರವಾದರು. 1998ರ ಉಪ ಚುನಾವಣೆಯಲ್ಲಿ ಅವರ ಸಹೋದರಿ ಭಾರತಿ ಅರಸು ಲೋಕಶಕ್ತಿ- ಬಿಜೆಪಿ ಅಭ್ಯರ್ಥಿಯಾಗಿ ಹುಣಸೂರು ಕ್ಷೇತ್ರದಲ್ಲಿ ಸೋತರು. ಚಂದ್ರಪ್ರಭಾ ಅವರ ಪುತ್ರ ಮಂಜುನಾಥ್ ಅರಸು 2013ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರಿನಿಂದ ಕೆಜಿಪಿ ಅಭ್ಯರ್ಥಿಯಾಗಿ ಸೋತರು.

1998 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸುಶೀಲಾ ಕೇಶವಮೂರ್ತಿ ಅವರು ಬಿಜೆಪಿ ಬೆಂಬಲಿತ ಲೋಕಶಕ್ತಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, 75,165 ಮತಗಳನ್ನು ಗಳಿಸಿ, ಸೋತರು. 1952 ರಿಂದ 1980 ರವರೆಗೆ ಯಾವುದೇ ಮಹಿಳೆ ಸ್ಪರ್ಧಿಸಿರಲಿಲ್ಲ. 1984 ರಲ್ಲಿ ಚಾಮರಾಜನಗರದಲ್ಲಿ ಸುಶೀಲಾ ಪಕ್ಷೇತರರಾಗಿ ಸ್ಪರ್ಧಿಸಿದ್ದರು. 1989 ರಲ್ಲಿ ಯಾರೂ ಸ್ಪರ್ಧಿಸಿರಲಿಲ್ಲ. 1991 ರಲ್ಲಿ ಚಾಮರಾಜನಗರದಿಂದ ಪಿ. ಮಹದೇವಮ್ಮ ಎಂಬುವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಮೈಸೂರಿನಿಂದ ಚಂದ್ರಪ್ರಭಾ ಅರಸು ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತು. 1996, 1999,2004

ರಲ್ಲಿ ಯಾವುದೇ ಮಹಿಳೆ ಸ್ಪರ್ಧಿಸಲಿಲ್ಲ. 2009 ರಲ್ಲಿ ಮೈಸೂರಿನಿಂದ ಡಾ.ಇ.ಕೇಶವಮ್ಮ- ಆರ್‌ಡಿಎಂಪಿಪಿ ಲೀಲಾವತಿ- ಪಿಪಿಒಐನಿಂದ ಸ್ಪರ್ಧಿಸಿದ್ದರು. 2014 ರಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಎಂ.ವಿ. ಪದ್ಮಮ್ಮ, ಕರುನಾಡು ಪಾರ್ಟಿಯಿಂದ ರತಿ ಪೂವಯ್ಯ ಸ್ಪರ್ಧಿಸಿದ್ದರು.

2019 ರಲ್ಲಿ ಮೈಸೂರಿನಿಂದ 22 ಮಂದಿ ಕಣದಲ್ಲಿದ್ದರು. ಅವರಲ್ಲಿ ಮೂವರು ಮಹಿಳೆಯರು. ಅವರೆಂದರೆ ಉತ್ತಮ ಪ್ರಜಾಕೀಯ ಪಾರ್ಟಿಯಿಂದ ವಿ. ಆಶಾರಾಣಿ, ಎಸ್ಯುಸಿಐ- ಕಮ್ಯೂನಿಸ್ಟ್‌ನಿಂದ ಪಿ.ಎಸ್. ಸಂಧ್ಯಾ, ಪಕ್ಷೇತರರಾಗಿ ಎನ್.ಕೆ. ಕಾವೇರಿಯಮ್ಮ ಸ್ಪರ್ಧಿಸಿದ್ದರು. ಚಾಮರಾಜನಗರದಲ್ಲಿ 10 ಮಂದಿ ಕಣದಲ್ಲಿದ್ದು, ಮಹಿಳೆಯರು ಇರಲಿಲ್ಲ.

----

ಬಾಕ್ಸ್....

ಈ ಬಾರಿ ಡಾ.ಪುಷ್ಪಾ ಅಮರನಾಥ್ ತೀವ್ರ ಯತ್ನ

22ಸಿ.ಜೆಪಿಜಿ

--

ಈ ಬಾರಿ ಮೈಸೂರಿನಲ್ಲಿ ಯಾವುದೇ ಮಹಿಳೆ ರಾಜಕೀಯ ಪಕ್ಷಗಳ ಟಿಕೆಟ್‌ ಗೆ ಯತ್ನಿಸಿರಲಿಲ್ಲ. ಆದರೆ ಚಾಮರಾಜನಗರ ಕ್ಷೇತ್ರದಿಂದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್ ಟಿಕೆಟ್ ಕೇಳಿದ್ದರು. ಆದರೆ ಸಿಗಲಿಲ್ಲ. ಇವರು ಮೈಸೂರು ಜಿಪಂ ಮಾಜಿ ಅಧ್ಯಕ್ಷರು. ಎರಡು ಅವಧಿಗೆ ಜಿಪಂ ಸದಸ್ಯರಾಗಿದ್ದರು. ಹುಣಸೂರು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರ ನಾದಿನಿ.