ಲೋಕಾ ದಾಳಿ, ಜಿಪಂ ಎಸ್‌ಡಿಸಿ ಮನೆಯಲ್ಲಿ ₹2 ಕೋಟಿ ಪತ್ತೆ!

| Published : Dec 11 2024, 12:46 AM IST

ಸಾರಾಂಶ

ಲೋಕಾಯುಕ್ತ ಪೊಲೀಸರಿಗೆ ಒಂದು ನಿವೇಶನ, ಒಂದು ವಾಣಿಜ್ಯ ಮಳಿಗೆ, ಮೂರು ವಾಸದ ಮನೆ, 3.17 ಎಕರೆ ಕೃಷಿ ಜಮೀನು ಸೇರಿದಂತೆ ₹1.75 ಕೋಟಿ ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳು ಸಿಕ್ಕಿವೆ

ಗದಗ: ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದ ಮೇಲೆ ಗದಗ ಜಿಪಂ ಎಂಜಿನಿಯರಿಂಗ್‌ ವಿಭಾಗದ ದ್ವಿತೀಯ ದರ್ಜೆ ಸಹಾಯಕ (ಎಸ್‌.ಡಿ.ಸಿ) ಲಕ್ಷ್ಮಣ ಕೊನೆರಪ್ಪ ಕರ್ಣಿ ಮನೆ, ಸೇರಿದಂತೆ ಐದು ಸ್ಥಳಗಳ ಮೇಲೆ ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಒಟ್ಟು ₹ 2 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು ಕಾಗದ ಪತ್ರ ವಶಕ್ಕೆ ಪಡೆದಿದ್ದಾರೆ.

ಕರ್ಣಿ ಅವರ ಗದಗ ನಗರದ ಆರ್‌.ಕೆ. ಬಡಾವಣೆಯಲ್ಲಿರುವ ಮನೆ ಸೇರಿದಂತೆ ಗಜೇಂದ್ರಗಡ, ಹಾವೇರಿಯಲ್ಲಿರುವ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರಿಗೆ ಒಂದು ನಿವೇಶನ, ಒಂದು ವಾಣಿಜ್ಯ ಮಳಿಗೆ, ಮೂರು ವಾಸದ ಮನೆ, 3.17 ಎಕರೆ ಕೃಷಿ ಜಮೀನು ಸೇರಿದಂತೆ ₹1.75 ಕೋಟಿ ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳು ಸಿಕ್ಕಿವೆ. ಜತೆಗೆ ₹ 3.40 ಲಕ್ಷ ನಗದು, ₹ 21.91 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು ಸೇರಿದಂತೆ ಒಟ್ಟು ₹ 26.31 ಲಕ್ಷ ಮೌಲ್ಯದ ಚರಾಸ್ತಿ ಸಿಕ್ಕಿವೆ.

ಕರ್ನಾಟಕ ಲೋಕಾಯುಕ್ತ ಗದಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿಯ ಲೋಕಾಯುಕ್ತ ಎಸ್‌ಪಿ ಹನುಮಂತರಾಯ, ಗದಗ ಡಿವೈಎಸ್‌ಪಿ ವಿಜಯ್‌ ಬಿರಾದಾರ, ಪಿಎಸ್ಐ ಎಸ್‌.ಎಸ್‌. ತೇಲಿ, ಪಿ.ಜಿ. ಕಟಗಿ ಮತ್ತು ತಂಡದವರು ದಾಳಿಯಲ್ಲಿ ಭಾಗವಹಿಸಿದ್ದರು.