ಸಾರಾಂಶ
ಗದಗ ನಗರ ಠಾಣೆ ಸಿಪಿಐ ಅವರಿಗೆ ಸೇರಿದ ಬಾಗಲಕೋಟೆಯಲ್ಲಿರುವ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗದಗ ನಗರ ಠಾಣೆ ಸಿಪಿಐ ಅವರಿಗೆ ಸೇರಿದ ಬಾಗಲಕೋಟೆಯಲ್ಲಿರುವ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.ನವನಗರದ ಸೆಕ್ಟರ್ ನಂಬರ್ 18ರಲ್ಲಿರುವ ಮನೆಯ ಮೇಲೆ ಬೆಳ್ಳಂಬೆಳಗ್ಗೆ ಸಿಪಿಐಗೆ ಲೋಕಾಯುಕ್ತರು ಶಾಕ್ ನೀಡಿದ್ದಾರೆ. ಬಾಗಲಕೋಟೆ ಸೇರಿ ಹಲವು ಕಡೆ ಅಕ್ರಮ ಆಸ್ತಿ ಮನೆ ಮಾಡಿರುವ ಆರೋಪ ಕೇಳಿ ಬಂದಿದ್ದರಿಂದ ಅವರ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆದಿದೆ. ಗದಗ-ಬಾಗಲಕೋಟೆ ಸೇರಿ ಐದು ಕಡೆ ದಾಳಿ ಮಾಡಲಾಗಿದ್ದು, ಗದಗ ಟೌನ್ ಸಿಪಿಐ ಡಿ.ಬಿ.ಪಾಟೀಲ ಆಪ್ತರ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಟಿ.ಬಿ. ಪಾಟೀಲರ ಆಪ್ತರಾದ ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣದ ಬುಡ್ಡೇಸಾಬ್ ಪೀರಖಾನ ಅವರ ಮನೆ ಮೇಲೂ ಲೋಕಾಯುಕ್ತರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಎಂಜಿನಿಯರ್ ಅಶೋಕ್ ವಾಸನದಗೆ ಲೋಕಾ ಶಾಕ್:ಮಲಪ್ರಭಾ ಪ್ರಾಜೆಕ್ಟ್ ಎಂಜಿನಿಯರ್ ಅಶೋಕ ವಾಸನದ ಅವರಿಗೂ ಲೋಕಾಯಕ್ತರು ಶಾಕ್ ನೀಡಿದ್ದಾರೆ. ಧಾರವಾಡ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಪ್ರಾಜೆಕ್ಟ್ ಚೀಫ್ ಎಂಜಿನಿಯರ್ ಆಗಿರುವ ಅಶೋಕ್ ಅವರ ಸ್ವಗ್ರಾಮ ಬಾಗಲಕೋಟೆ ಜಿಲ್ಲೆ ಖಜ್ಜಿಡೋಣಿ ಮನೆ ಮೇಲೂ ದಾಳಿ ನಡೆದಿದ್ದು, ಧಾರವಾಡ ಲೋಕಾಯುಕ್ತ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.