ಭಗವದ್ಗೀತೆಯ ಮೂಲಕ ಶ್ರೀಕೃಷ್ಣ ನೀಡಿದ ಸಂದೇಶಗಳು ಸಾವಿರಾರು ವರ್ಷಗಳಾದರೂ ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳನ್ನು ಸಾರುತ್ತವೆ ಎಂದು ಶಿರಹಟ್ಟಿ ತಹಸೀಲ್ದಾರ್ ಕೆ. ರಾಘವೇಂದ್ರ ರಾವು ಹೇಳಿದರು.
ಶಿರಹಟ್ಟಿ: ಶ್ರೀಕೃಷ್ಣನ ದಿವ್ಯ ಸಂದೇಶಗಳು ಆಧುನಿಕ ಜೀವನಕ್ಕೆ ದಾರಿದೀಪವಾಗಿವೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವು ಹೇಳಿದರು.
ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ ಮಾಡಿ ಅವರು ಮಾತನಾಡಿದರು. ಭಗವದ್ಗೀತೆಯ ಮೂಲಕ ಶ್ರೀಕೃಷ್ಣ ನೀಡಿದ ಸಂದೇಶಗಳು ಸಾವಿರಾರು ವರ್ಷಗಳಾದರೂ ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳನ್ನು ಸಾರುತ್ತವೆ.ಜೀವನದಲ್ಲಿ ಕಷ್ಟಗಳು, ಸೋಲುಗಳು ಹಾಗೂ ಸವಾಲುಗಳು ಎದುರಾದಾಗ ಧೃತಿಗೆಡದೆ ಕರ್ತವ್ಯದ ಹಾದಿಯಲ್ಲಿ ಮುನ್ನಡೆಯಬೇಕು ಎಂಬುದು ಶ್ರೀಕೃಷ್ಣನ ಪ್ರಮುಖ ಸಂದೇಶವಾಗಿದೆ. ಫಲದ ನಿರೀಕ್ಷೆಗಿಂತ ಕರ್ತವ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂಬ ಗೀತೆಯ ತತ್ವ ಪ್ರತಿಯೊಬ್ಬರಿಗೂ ಆತ್ಮವಿಶ್ವಾಸ ತುಂಬುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಅದರ ಫಲವನ್ನು ಕಾಲವೇ ನೀಡುತ್ತದೆ ಎಂಬ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಂತೋಷ ಅಸ್ಕಿ, ಶರಣಪ್ಪ ಪವಾರ, ವಿನೋದ ಪಾಟೀಲ, ಎಚ್.ಜಿ. ಭಾವಿಕಟ್ಟಿ, ಕನೋಜ, ಪಾಟೀಲ ಇದ್ದರು.
ಕೃಷ್ಣ-ರಾಧೆ ವೇಷತೊಟ್ಟು ಸಂಭ್ರಮಿಸಿದ ಮಕ್ಕಳು:ಡಂಬಳ ಗ್ರಾಮದ ತೋಂಟದಾರ್ಯ ಬಸವೇಶ್ವರ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಶ್ರೀಕೃಷ್ಣ ರುಕ್ಮಿಣಿ ರಾಧೆಯರ ವೇಷಭೂಷಣ ನೆರೆದಿದ್ದವರ ಗಮನ ಸೆಳೆಯಿತು. ಧೋತಿ ಏರಿಸಿ ವಲ್ಲಿ ಧರಿಸಿ ಬರಿಮೈಲಿದ್ದರೂ ಕಿರೀಟ ತಲೆಗೇರಿಸಿದ ಮಕ್ಕಳು, ಮುದ್ದು ಕೃಷ್ಣನನ್ನು ಧರೆಗೆ ತಂದರು. ಶಾಲೆಯಲ್ಲಿ ಹಲವಾರು ಮಕ್ಕಳು ಕೃಷ್ಣ, ರಾಧೆ ಮತ್ತು ರುಕ್ಮಿಣಿ ವೇಷ ಧರಿಸಿ ಕೃಷ್ಣನ ರೂಪಕಕ್ಕೆ ಪೂರಕವಾಗಿ ಅಭಿನಯಿಸಿದರು.ಶಾಲೆಯ ಮುಖ್ಯಶಿಕ್ಷಕಿ ಜ್ಯೋತಿ ಗೌಡರ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಜನ್ಮತಳೆದ ಪುಣ್ಯಪುರುಷ ನ್ಯಾಯ ನೀತಿ ಹಾಗೂ ಸತ್ಯದ ಹಾದಿಯಲ್ಲಿ ಧರ್ಮದ ವ್ಯಾಖ್ಯಾನ ನೀಡಿದ ಶ್ರೀ ಕೃಷ್ಣನ ಬದುಕು ಮತ್ತು ಬೋಧನೆಗಳು ಎಲ್ಲರಿಗೂ ಸ್ಫೂರ್ತಿದಾಯಕ ಮತ್ತು ಆದರ್ಶಪ್ರಾಯವಾದದ್ದು, ಅಂಧಕಾರದಲ್ಲಿದ್ದ ಜಗತ್ತಿಗೆ ಧರ್ಮದ ಹಾದಿ ತೋರಿದ ದಾರ್ಶನಿಕನ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಡಂಬಳ ಕೇಂದ್ರಸ್ಥಾನ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು. ಈ ಸಮಯದಲ್ಲಿ ಸಹ ಶಿಕ್ಷಕಿಯರಾದ ಗೀತಾ ಕೋಲಾರ, ಶಶಿಕಲಾ ಚಟ್ಟೇರ, ಚೈತ್ರಾ ತಳಕಲ್ಲ, ಲಲಿತಾ ಬಾವಿ, ಮೇಘನಾ ಮುದಕವಿ, ಶಿಲ್ಪಾ ಶಿರೋಳ, ಮಹಾಮಾಯ ಗಂಭೀರ ಇದ್ದರು.