ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಭಗವಾನ್ ಮಹಾವೀರರ ಬೋಧನೆಗಳು ನಮಗೆ ಕರುಣೆ, ಅಹಿಂಸೆ ಮತ್ತು ಸದಾಚಾರದ ಜೀವನವನ್ನು ನಡೆಸಲು ಪ್ರೇರಣೆ ನೀಡುತ್ತವೆ ಎಂದು ಮಂಚೇನಹಳ್ಳಿ ತಾಲೂಕಿನ ತಹಸೀಲ್ದಾರ್ ಎನ್.ದೀಪ್ತಿ ತಿಳಿಸಿದರು.ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ನಗರದ ಕಾರ್ಖಾನೆಪೇಟೆಯ ಶ್ರೀ ಮಹಾವೀರ್ ಜೈನ್ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ್ ಮಹಾವೀರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಹಾವೀರರ ಬೋಧನೆಗಳು
ಭಗವಾನ್ ಮಹಾವೀರರು ಅಹಿಂಸೆ, ಸತ್ಯ, ಅಸ್ತೇಯ (ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ ಮತ್ತು ಅಪರಿಗ್ರಹ (ಒಡವೆಗಳಿಗೆ ಆಸೆಪಡದಿರುವುದು) ಎಂಬ ಐದು ಸಂದೇಶಗಳನ್ನು ಉಪದೇಶಿಸಿದರು. ಅವರ ಅನುಯಾಯಿಗಳು ಪ್ರಾರ್ಥನೆ, ಉಪವಾಸ, ದಾನ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಇಂದು ಜಯಂತಿ ಆಚರಿಸಲಾಗುತ್ತಿದೆ ಎಂದರುವರ್ಧಮಾನನಾಗಿ ಜನಿಸಿದ ಭಗವಾನ್ ಮಹಾವೀರರು ಬಿಹಾರದ ರಾಜಮನೆತನದಿಂದ ಬಂದವರು ಮತ್ತು ತಮ್ಮ ಯೌವನದಿಂದಲೇ ಆಧ್ಯಾತ್ಮಿಕ ಒಲವುಗಳನ್ನು ಬೆಳೆಸಿಕೊಂಡರು. 30 ನೇ ವಯಸ್ಸಿನಲ್ಲಿ, ಮಹಾವೀರರು ತಮ್ಮ ಲೌಕಿಕ ಆಸ್ತಿಗಳನ್ನು ತ್ಯಜಿಸಿ, ಜನನ ಮತ್ತು ಮರಣದ ಚಕ್ರದಿಂದ ಬಿಡಿಸಿಕೊಳ್ಳಲು ಜ್ಞಾನೋದಯ ಮತ್ತು ವಿಮೋಚನೆಯನ್ನು ಅರಸುತ್ತಾ ಆಳವಾದ ಆಧ್ಯಾತ್ಮಿಕ ಅನ್ವೇಷಣೆಯನ್ನು ಕೈಗೊಂಡರು ಎಂದರು. ಅಹಿಂಸೆಯ ಪ್ರತಿಪಾದಕಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಎ. ಗಜೇಂದ್ರ ಮಾತನಾಡಿ, ಅಹಿಂಸೆಯೇ ಧರ್ಮದ ಮಾರ್ಗವೆಂದವರಲ್ಲಿ ಮಹಾವೀರರು ಪ್ರಮುಖರು. ಅವರು ಅಹಿಂಸೆಯ ಪಾಲನೆಯನ್ನೇ ಶ್ರೇಷ್ಠ ಧರ್ಮವೆಂದು ಬೋಧಿಸಿದ್ದಾರೆ. ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ- ಶ್ವೇತಾಂಬರರಿಗೆ ಈ ಪ್ರಾಚೀನ ಧರ್ಮವು ಸದಾ ತ್ಯಾಗ, ವೈರಾಗ್ಯಗಳಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯ ತಪಸ್ಸಿನಲ್ಲಿ ನಿರತರಾಗಿ ಸಾಮಾಜಿಕ ಪರಿವರ್ತನೆ ಹಾಗೂ ಸುಧಾರಣೆಯಲ್ಲಿ ತೊಡಗಿಸಿ ಕೊಂಡಿರುವ ಜೈನಮುನಿಗಳನ್ನು ಕಾಣಬಹುದು. ಮಹಾವೀರರು ಸತ್ಯವೇ ಮೋಕ್ಷಕ್ಕೆ ಮೊದಲ ದಾರಿಯೆಂದು ಹೇಳಿದ್ದಾರೆ ಎಂದರು.
ಸಾಧಕರಿಗೆ ಸನ್ಮಾನ:ಈ ವೇಳೆ ಸಮುದಾಯದ ಸಾಧಕ ಮುಖಂಡರಿಗೆ ಸನ್ಮಾನ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಜಿಪಂ ಸಹಾಯಕ ನಿರ್ದೇಶಕ ಮುನಿಯಪ್ಪ, ನಗರಸಭೆ ಸದಸ್ಯರಾದ ಯತೀಶ್ ಮತ್ತು ಭಾರತಿ ದೇವಿ, ಅಮೃತ್ ಕುಮಾರ್, ಸಮುದಾಯದ ಮುಖಂಡರಾದ ಕಾಂತಿಲಾಲ್ ಜಿ,ಉತ್ತಮ್ ಚಂದ್ ಕೊಠಾರಿ,ರಾಕೇಶ್ ಜೈನ್, ಮತ್ತಿತರರು ಇದ್ದರು.