ಸಾರಾಂಶ
ಎಲ್ಲೆಡೆ ದೇವಸ್ಥಾನಗಳಲ್ಲಿ ಶಿವರಾತ್ರಿ ಆಚರಣೆ ನಡೆದರೆ, ರಬಕವಿಯಲ್ಲಿರುವ ಹಿಂದು ರುದ್ರಭೂಮಿಯಲ್ಲಿ ಹಿಂದು ರುದ್ರಭೂಮಿ ಸಮಿತಿ ಆಯೋಜಿಸಿದ್ದ ಶಿವರಾತ್ರಿಯ ಶಿವಧ್ಯಾನ ವಿಶೇಷವಾಗಿತ್ತು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಎಲ್ಲೆಡೆ ದೇವಸ್ಥಾನಗಳಲ್ಲಿ ಶಿವರಾತ್ರಿ ಆಚರಣೆ ನಡೆದರೆ, ರಬಕವಿಯಲ್ಲಿರುವ ಹಿಂದು ರುದ್ರಭೂಮಿಯಲ್ಲಿ ಹಿಂದು ರುದ್ರಭೂಮಿ ಸಮಿತಿ ಆಯೋಜಿಸಿದ್ದ ಶಿವರಾತ್ರಿಯ ಶಿವಧ್ಯಾನ ವಿಶೇಷವಾಗಿತ್ತು. ನಗರದ ಎಲ್ಲ ಸಮುದಾಯಗಳ ನೂರಾರು ಹಿರಿಯರು ಶಿವರಾತ್ರಿ ಆಚರಣೆ ಮಾಡಿದರು.ರುದ್ರಭೂಮಿ ಮನುಷ್ಯನ ಮೋಕ್ಷ ಸ್ಥಳ, ಇಂಥ ಪಾವನ ಪವಿತ್ರ ಸ್ಥಳ ಶಿವನ ಆವಾಸ ತಾಣವೂ ಹೌದು. ರುದ್ರಭೂಮಿ ಪಾವಿತ್ರ್ಯ ಅರುಹಲು ಮತ್ತು ಈ ಬಗ್ಗೆ ಸಾಮಾಜಿಕ ಜಾಗೃತಿಯ ಕಾರಣಕ್ಕೆ ಶಿವರಾತ್ರಿಯಂದು ಶಿವಾರಾಧನೆ ನಡೆಸಲಾಗುತ್ತಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ ಎಂದು ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.
ಸಂಭ್ರಮದ ತಾಣವಾದ ರುದ್ರಭೂಮಿ: ದಿನಂಪ್ರತಿ ಅಂತ್ಯಸಂಸ್ಕಾರಕ್ಕೆಂದು ದುಃಖದಿಂದಲೇ ತೆರಳುವ ಜನತೆ ಶುಕ್ರವಾರ ಶಿವರಾತ್ರಿ ಆಚರಣೆಗೆ ಎಲ್ಲರೂ ಖುಷಿಯಿಂದ ರುದ್ರಭೂಮಿಗೆ ತಂಡೋಪತಂಡವಾಗಿ ಆಗಮಿಸಿ ಶಿವನ ಮೂರ್ತಿ ಮುಂಭಾಗದ ವೇದಿಕೆಯಲ್ಲಿ ಶ್ರೀಗಳ ನೇತೃತ್ವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ರುದ್ರಭೂಮಿಯಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನ ಎಲ್ಲರೂ ಶಿವಧ್ಯಾನದಲ್ಲಿ ತೊಡಗಿದ್ದ ಅಪೂರ್ವ ಸನ್ನಿವೇಶ ಕಂಡುಬಂತು. ರುದ್ರಭೂಮಿಯಲ್ಲಿ ಶಿವನ ಮೂರ್ತಿ ಸಹಿತ ಇಡೀ ರುದ್ರಭೂಮಿ ಅಲಂಕರಿಸಲಾಗಿತ್ತು.ಮಲ್ಲಿಕಾರ್ಜುನ ನಾಶಿ, ಶಿವಾನಂದ ಬಾಗಲಕೋಟಮಠ, ಚಿದಾನಂದ ಸೊಲ್ಲಾಪೂರ, ಸೋಮಶೇಖರ ಕೊಟ್ರಶೆಟ್ಟಿ, ಪ್ರಭು ಉಮದಿ, ಶ್ರೀಕಾಂತ ಕೆಂಧೂಳಿ, ವಿಶ್ವನಾಥ ನಾಗರಾಳ, ಚಿದಾನಂದ ಗಾಳಿ, ಈರಣ್ಣ ಗುಣಕಿ, ಬಸವರಾಜ ಯಂಡಿಗೇರಿ, ಬಸವರಾಜ ಮಟ್ಟಿಕಲ್ಲಿ, ರವಿ ಗುಣಕಿ, ತಮ್ಮಣ್ಣಿ ಕಾಮೋಜಿ, ಗುರಪಾದಯ್ಯ(ರಾಜು) ಅಮ್ಮಣಗಿ, ಶಿವಜಾತ ಉಮದಿ, ದಯಾನಂದ ಬಾಗಲಕೋಟಮಠ, ಶಿವಾನಂದ ಜೋತಾವರ, ಭೀಮಶಿ ಪಾಟೀಲ, ಸವಿತಾ ಹೊಸೂರ, ವಿಜಯಲಕ್ಷ್ಮೀ ಹತಪಕಿ, ಸಂಗೀತಾ ಮರೆಗುದ್ದಿ, ಮಂಜುಳಾ ಬೀಳಗಿ, ಅನುಪಮಾ ಗುಣಕಿ, ಮಹಾನಂದಾ ಗುಣಕಿ ಇತರರು ಇದ್ದರು.