ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ನಾಡಿನ ಶ್ರೀಮಂತ ಜನಪದ ಸಂಸ್ಕೃತಿ ಇಂದಿನ ಆಧುನಿಕತೆಯ ಗಾಳಿಗೆ ತನ್ನ ವೈಭವ ಕಳೆದುಕೊಳ್ಳುತ್ತಿದೆ ಎಂದು ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು ವಿಷಾದ ವ್ಯಕ್ತಪಡಿಸಿದರು.ಬುಧವಾರ ಗುಳೇದಗುಡ್ಡ ಪಟ್ಟಣದ ತಿಪ್ಪಾ ಪೇಟೆಯಲ್ಲಿ ಶ್ರೀ ಸಂಗಮೇಶ್ವರ ನಾಟ್ಯ ಸಂಘದ ವತಿಯಿಂದ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಜಾನಪದ ಗೀತೆ ಹಾಗೂ ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಪದ ಸಂಸ್ಕೃತಿ, ಸಾಹಿತ್ಯ
ನಮ್ಮ ಬದುಕಿನ ಉಸಿರಾಗಬೇಕು. ಆಧುನಿಕತೆಯ ಗಾಳಿಯಲ್ಲಿ ಜನಪದ ಕಲೆ, ಸಂಸ್ಕೃತಿ ನಶಿಸುತ್ತಿದ್ದು ಅದನ್ನು ಉಳಿಸಿ ಬೆಳೆಸುವ ಮೂಲಕ ನಾಡಿನ ಶ್ರೀಮಂತ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಸಬೇಕು ಎಂದು ಹೇಳಿದರು.ಜನಪದ ಸಂಸ್ಕೃತಿ ನಮ್ಮ ಉಸಿರಾಗಬೇಕು. ಪುರಾತನ ಕಾಲದಿಂದಲೂ ಜನಪದ ಸಾಹಿತ್ಯ ತನ್ನ ವಿಶೇಷತೆ ಹೊಂದಿದೆ. ಆದರೆ ಸದ್ಯ ಆಧುನಿಕತೆ ಹಾಗೂ ತಂತ್ರಜ್ಞಾನದ ಕಾಲದಲ್ಲಿ ನಮ್ಮ ಶ್ರೀಮಂತ ಜನಪದ ಸಾಹಿತ್ಯ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಯುವಕರು ಜನಪದ ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಸ್.ಘಂಟಿ ಜಾನಪದ ಸ್ಪರ್ಧೆ ಕಾರ್ಯಕ್ರಮವನ್ನು ಕರಡಿ ಮಜಲು ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜೀವಂತವಾಗಿದ್ದ ಜನಪದ ಕಲೆ ಅಲ್ಲಿಯೂ ನಶಿಸಿ ಹೋಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಆಧುನಿಕತೆಯ ಗಾಳಿ ಬೀಸಿದೆ. ಮಕ್ಕಳಲ್ಲಿ ಜನಪದ ಸಂಸ್ಕೃತಿ, ಸಾಹಿತ್ಯ ಬೆಳೆಸಬೇಕು. ಆ ಮೂಲಕ ಜನಪದ ಕಲೆ ಉಳಿಸಿ ಬೆಳೆಸಬೇಕು ಎಂದರು.ಶ್ರೀ ಗುರುಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಸಂಗಮೇಶ್ವರ ನಾಟ್ಯ ಸಂಘದ ಅಧ್ಯಕ್ಷ ಆನಂದ ತಿಪ್ಪಾಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಉಮೇಶ ಹುನಗುಂದ, ವೀರಬಸಪ್ಪಾ ತಿಪ್ಪಾ, ರುದ್ರಪ್ಪ ಹುನಗುಂದ, ಸಂಗನಬಸಪ್ಪ ಮಾಮನಿ, ವಿಜಯಮಹಾಂತೇಶ ತಿಪ್ಪಾ, ಅಶೋಕ ರೋಜಿ, ಸಂತೋಷ ತಿಪ್ಪಾ, ಹನಮಂತ ಮೆಂತೆದ, ಜ್ಞಾನೇಶ್ವರ ಬೊಂಬಲೇಕರ, ಸಂಗಮೇಶ ಹುನಗುಂದ, ಪ್ರಕಾಶ ರೋಜಿ, ಶ್ರೀಕಾಂತ ಹುನಗುಂದ ಮತ್ತಿತರರು ಇದ್ದರು.
ನಂತರ ನಡೆದ ಜಾನಪದ ಗೀತೆ ಸ್ಪರ್ಧೆಯಲ್ಲಿ ಉಮಾ ಕನಕೇರಿ (ಪ್ರಥಮ), ಶ್ರಾವಣಿ ಶಿವಪ್ಪಯ್ಯನಮಠ (ದ್ವಿತೀಯ) ಹಾಗೂ ಶಾರದಾ ಹಡಗಲಿ (ತೃತೀಯ) ಸ್ಥಾನ ಪಡೆದರು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಗಜಾನನ ತರುಣ ಸಂಘ ಕೋಟೆಕಲ್ಲ (ಪ್ರಥಮ), ಸೃಷ್ಟಿ ಅಮರನ್ನವರ ತಂಡ ಹಾಗೂ ಎಂ.ಎಸ್. ಡಾನ್ಸ್ ಅಕಾಡೆಮಿ ಗುಳೇದಗುಡ್ಡ ಕ್ರಮವಾಗಿ (ದ್ವಿತೀಯ) ಅನುಷಾ ತಿಪ್ಪಾ ಹಾಗೂ ತಂಡ (ತೃತೀಯ) ಸ್ಥಾನ ಪಡೆದುಕೊಂಡಿತು.