ಸಾರಾಂಶ
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯಕೇರಳದ ಕುಟುಂಬವೊಂದು ಮೈಸೂರಿಗೆ ಬಂದಿದ್ದ ವೇಳೆ ಹಣವಿದ್ದ ಲಗೇಜ್ ಕಳವು ಆದ ಕಾರಣ ಸುಬ್ರಹ್ಮಣ್ಯದಿಂದ ಕೇರಳಕ್ಕೆ ನಡೆದುಕೊಂಡು ಹೋಗಲು ಸಿದ್ಧರಾದ ಕುಟುಂಬಕ್ಕೆ ಗುತ್ತಿಗಾರಿನ ವ್ಯಕ್ತಿಗಳು ಹಣ ಸಂಗ್ರಹಿಸಿ ವಾಹನದಲ್ಲಿ ಕಳುಹಿಸಿದ ಘಟನೆ ನಡೆದಿದೆ.ಮೂಲತಃ ಕೇರಳದ ಇಡುಕ್ಕಿ ಜಿಲ್ಲೆಯ ತಂದೆ-ತಾಯಿ ಮತ್ತು ಮಗ ಸಿಬಿನ್ ಜೂವೇನ್ ಎಂಬವರು ಮೈಸೂರಿಗೆ ತೆರಳಿದ್ದರು. ಅಲ್ಲಿಂದ ಮಾಹೆ ಚರ್ಚಿಗೆ ವಾಪಸ್ ಆಗುವ ಸಂದರ್ಭ ಲಗೇಜ್ನಲ್ಲಿ ಇಟ್ಟಿದ್ದ ಪರ್ಸ್, ಮೊಬೈಲ್ ಸಮೇತ ಲಗೇಜನ್ನು ಕಳ್ಳರು ಕಳವು ಮಾಡಿದ್ದಾರೆ. ಈ ವೇಳೆ ಅವರಲ್ಲಿದ್ದ ಹಣದಿಂದ ಮಡಿಕೇರಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದಾರೆ. ಈ ವೇಳೆ ಅವರು ತಮ್ಮೂರು ಕೇರಳದ ಇಡುಕ್ಕಿಯ ತೊಕೂದುರು ಎಂಬಲ್ಲಿ ತೆರಳಲು ನಡೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಈ ನಡುವೆ ಗುತ್ತಿಗಾರಿನಲ್ಲಿ ಪರಿಚಯಸ್ಥ ಯುವಕ ಇರುವ ಬಗ್ಗೆ ತಿಳಿದು ಅಲ್ಲಿಗೆ ನಡೆದುಕೊಂಡು ಹೋಗಿ ವಿಚಾರಿಸಿದ್ದರೂ ಆ ಯುವಕ ಅಲ್ಲಿರಲಿಲ್ಲ.
ಇವರ ಪರಿಸ್ಥಿತಿ ಬಗ್ಗೆ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಅವರ ಗಮನಕ್ಕೆ ಶೇಷಪ್ಪ ನಾಯ್ಕ್ ಹಾಲೇಮಜಲು ತಂದಿದ್ದಾರೆ. ಅವರು ಗುತ್ತಿಗಾರು ಚರ್ಚ್ ಧರ್ಮಗುರು ಆದರ್ಶ್ ಜೋಸೆಫ್ ಅವರೊಂದಿಗೆ ಮಾತಾಡಿಸಿ ಅವರನ್ನು ಊರಿಗೆ ತೆರಳಲು ವ್ಯವಸ್ಥೆ ಮಾಡಿಸಿದರು.ಬಸ್ ವೆಚ್ಚವನ್ನು ಚರ್ಚ್ ಧರ್ಮಗುರು ಆದರ್ಶ್ ಜೋಸೆಫ್, ಶ್ರೀ ಮಂಗಳಾ ಡ್ರೈವಿಂಗ್ ಸ್ಕೂಲ್ ಮಾಲಕ ಸಾತ್ವಿಕ್ ಕನ್ನಡ್ಕ, ಭರತ್ ದೇರುಮಜಲ್, ಶೇಷಪ್ಪ ನಾಯ್ಕ್ ಒಟ್ಟು ೩೮೦೦ ರುಪಾಯಿಯನ್ನು ಚಂದ್ರಶೇಖರ ಕಡೋಡಿ ಅವರು ಸಂಗ್ರಹಿಸಿ ನೀಡಿದರು.