ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಮರಡಹಳ್ಳಿ ಗ್ರಾಮದ ನಿವಾಸಿ ಎಂ.ಪಿ.ನಿವೇದಿತಾ ಪಿಎಚ್.ಡಿ.ಪದವಿಗೆ ಭಾಜನರಾಗಿದ್ದಾರೆ. ಇವರು ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ಕಾಲೇಜಿನಲ್ಲಿ ಬೇಸಾಯ ಶಾಸ್ತ್ರ ವಿಭಾಗದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಶಿವಮೊಗ್ಗದ ಇರುವಕ್ಕಿಯಲ್ಲಿರುವ ಕೃಷಿ ಮತ್ತು ತೋಟಗಾರಿಕಾ ವಿ.ವಿ. ಆವರಣದಲ್ಲಿ ನಡೆದ 9 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥ್ಯಾವರ್ ಚಂದ್ ಗೆಯ್ಲೋಟ್ ಎಂ.ಪಿ.ನಿವೇದಿತಾ ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದರು.ಬೇಸಾಯಕ್ಕೆ ಸಂಬಂಧಿಸಿದಂತೆ ವಿಶೇಷ ಅಧ್ಯಯನ ನಡೆಸಿ ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದು ತಾಲೂಕಿಗೆ ಕೀರ್ತಿ ತಂದಿರುವ ಎಂ.ಪಿ.ನಿವೇದಿತಾ ಅವರನ್ನು ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯರಾಮೇಗೌಡ, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಯುವ ಮುಖಂಡ ಮೊಸಳೆ ಕೊಪ್ಪಲು ದಿನೇಶ್ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.
ಎಂ.ಪಿ.ನಿವೇದಿತಾ ಅವರು ಮರಡಹಳ್ಳಿ ಗ್ರಾಮದ ಶಿಕ್ಷಕಿ ಎಸ್.ಭಾಗ್ಯ ಮತ್ತು ಎಂ.ವಿ.ಪುಟ್ಟಸ್ವಾಮಿಗೌಡರ ಪುತ್ರಿಯಾಗಿದ್ದಾರೆ.ಅಭಿನವ ಭಾರತಿ ಪ್ರೌಢಶಾಲೆಯಲ್ಲಿ ಖಗೋಳ ಕೌತುಕ ವೀಕ್ಷಣೆ
ಕನ್ನಡಪ್ರಭ ವಾರ್ತೆ ಮಂಡ್ಯಅಭಿನವ ಭಾರತಿ ಪ್ರೌಢಶಾಲೆ (ಆಂಗ್ಲ ಮಾಧ್ಯಮ) ಆವರಣದಲ್ಲಿ ಖಗೋಳ ಕೌತುಕ ವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶ್ರಾಂತ ವಿಜ್ಞಾನ ವಿಷಯ ಪರಿವೀಕ್ಷಕ ಲೋಕೇಶ್ ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಗುರು, ಶುಕ್ರ, ಮಂಗಳ ಗ್ರಹ ಹಾಗೂ ರೋಹಿಣಿ ನಕ್ಷತ್ರಗಳನ್ನು ದೂರದರ್ಶಕ ಯಂತ್ರದ ಮೂಲಕ ವೀಕ್ಷಿಸಲು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.
ಸಾರ್ವಜನಿಕರು, ಪೋಷಕರು ಮತ್ತು ವಿದ್ಯಾರ್ಥಿಗಳು ದೂರದರ್ಶಕ ಯಂತ್ರದ ಮೂಲಕ ಅಪರೂಪವಾಗಿ ಒಂದೇ ಕಕ್ಷೆಯಲ್ಲಿ ನಿಲ್ಲುವ ಗ್ರಹಗಳನ್ನು ನೋಡಿ, ಕಣ್ಣುಂಬಿಕೊಂಡರು. ಖಗೋಳ ಕೌತುಕದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.ಲೋಕೇಶ್ ರವರು ಅವುಗಳ ಬಗ್ಗೆ ವಿವರಣೆಗಳನ್ನು ನೀಡುವುದರ ಮೂಲಕ ಅವುಗಳ ಮಹತ್ವವನ್ನು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಕೀಲಾರ, ಶಿಕ್ಷಕ, ಶಿಕ್ಷಕಿಯರು ಹಾಗೂ ಬೋಧಕೇತರ ವರ್ಗದವರು ಭಾಗವಹಿಸಿದ್ದರು.