ಸಾರ್ವಜನಿಕರೆದುರೇ ಪೊಲೀಸರ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ, ತಲೆಮರೆಸಿಕೊಂಡಿದ್ದ ಮಚ್ಚಾ ಮಂಜ ಕೊನೆಗೂ ಹಳಿಯಾಳ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಹಾರಾಷ್ಟ್ರದ ಗಡಿಯಲ್ಲಿ ಬಂಧನ

ಕನ್ನಡಪ್ರಭ ವಾರ್ತೆ ಹಳಿಯಾಳ

ಸಾರ್ವಜನಿಕರೆದುರೇ ಪೊಲೀಸರ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ, ತಲೆಮರೆಸಿಕೊಂಡಿದ್ದ ಮಚ್ಚಾ ಮಂಜ ಕೊನೆಗೂ ಹಳಿಯಾಳ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬರೋಬ್ಬರಿ ಎಂಟು ದಿನಗಳ ನಂತರ ಹಳಿಯಾಳ ಪೊಲೀಸರು ರೌಡಿಶೀಟರ್ ಮಂಜುನಾಥ (ಮಚ್ಚ ಮಂಜ) ಸುಭ್ರಾಯ ಬೇಕನಿಯನ್ನು ಮಹಾರಾಷ್ಟ್ರದ ಗಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾನುವಾರ ರಾತ್ರಿಯೇ ಆರೋಪಿಯನ್ನು ಹಳಿಯಾಳಕ್ಕೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವೈರಲ್ ವಿಡಿಯೋ:

ಮಚ್ಚ ಮಂಜ ಅರೆನಗ್ನನಾಗಿ ನಡೆಸಿದ ದಾದಾಗಿರಿ, ಪೊಲೀಸರ ಮೇಲೆ ನಡೆಸಿದ ಹಲ್ಲೆ, ಪೊಲೀಸ್‌ ವಾಹನಕ್ಕೆ ಅಡ್ಡಲಾಗಿ ಮಲಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದ ಪ್ರತಿಯೊಂದು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದವು.

ಈ ಹಿನ್ನೆಲೆ ಹಳಿಯಾಳ ಪಿಎಸ್‌ಐ ಅವರನ್ನು ಅಮಾನತು ಮಾಡಿ 8 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಇಲಾಖೆಯು ಪ್ರಕರಣದ ತನಿಖೆ ಆರಂಭಿಸಿತ್ತು.

ಎಸ್ಪಿ, ಹೆಚ್ಚುವರಿ ಎಸ್ಪಿ ಮತ್ತು ದಾಂಡೇಲಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ ನೇತೃತ್ವದಲ್ಲಿ ಹಳಿಯಾಳ ಪಿಎಸ್‌ಐ ಕೃಷ್ಣಗೌಡಾ ಅರಕೇರಿ, ದಾಂಡೇಲಿ ಪಿಎಸ್‌ಐ ಕಿರಣ ಪಾಟೀಲ ಮತ್ತು ರಾಮನಗರ ಪಿಎಸ್‌ಐ ಮಹಾಂತೇಶ್ ನಾಯಕ ಮತ್ತು ಹಳಿಯಾಳ, ದಾಂಡೇಲಿ ಮತ್ತು ರಾಮನಗರ ಪೊಲೀಸ್ ಠಾಣೆಯ ಸಿಬ್ಬಂದಿ ಮಹಮ್ಮದಶಫಿ ಶೇಖ್, ಎಂ.ಎಂ. ಮುಲ್ಲಾ, ಕೃಷ್ಣ ಬಿಳಿವರಿ, ಬಸವರಾಜ ತೇಲಸಂಗ, ಬಸವರಾಜ ತ್ಯಾಪಿ, ನಿಂಗಪ್ಪ ಬಳ್ಳಾರಿ, ಶ್ರೀಶೈಲ, ಬಸವರಾಜ ಹಗರಿ, ಗುರುಪ್ಪ ಮತ್ತು ವೃತ್ತ ಕಚೇರಿಯ ಸಿಬ್ಬಂದಿ ಜಗದೀಶ್, ನಿಂಗಪ್ಪ, ಸೋಹೆಲ್, ತಾಂತ್ರಿಕ ಸಹಾಯಕರಾದ ಉದಯ ಗುನಗಾ, ಚಂದ್ರು ಪಾಟೀಲ ಅವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿತ್ತು.