ಸಾರಾಂಶ
ರಸ್ತೆ ಬದಿಯ ಅಂಗಡಿಗಳ ಮುಂದೆ ಕುಳಿತ್ತಿದ್ದ 15 ಜನರ ಮೇಲೆ ಹುಚ್ಚುನಾಯಿ ದಿಡೀರ್ ದಾಳಿ ಮಾಡಿದ್ದು, ಕೊರಟಗೆರೆ ಪಟ್ಟಣದ ಜನತೆ ಭಯಬೀತರಾಗಿದ್ದಾರೆ. ಕೊರಟಗೆರೆ ಪಟ್ಟಣದ 1, 2, 3 ಮತ್ತು 9ನೇ ವಾರ್ಡಿನಲ್ಲಿ ಕಂಡ ಕಂಡವರ ಮೇಲೆ ಅಟ್ಟಾಡಿಸಿಕೊಂಡು ದಾಳಿ ನಡೆಸಿದೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ರಸ್ತೆ ಬದಿಯ ಅಂಗಡಿಗಳ ಮುಂದೆ ಕುಳಿತ್ತಿದ್ದ 15 ಜನರ ಮೇಲೆ ಹುಚ್ಚುನಾಯಿ ದಿಡೀರ್ ದಾಳಿ ಮಾಡಿದ್ದು, ಕೊರಟಗೆರೆ ಪಟ್ಟಣದ ಜನತೆ ಭಯಬೀತರಾಗಿದ್ದಾರೆ. ಕೊರಟಗೆರೆ ಪಟ್ಟಣದ 1, 2, 3 ಮತ್ತು 9ನೇ ವಾರ್ಡಿನಲ್ಲಿ ಕಂಡ ಕಂಡವರ ಮೇಲೆ ಅಟ್ಟಾಡಿಸಿಕೊಂಡು ದಾಳಿ ನಡೆಸಿದೆ.ನಾಯಿಯ ದಾಳಿಯಿಂದ ನರಸಪ್ಪ, ರಾಜಶೇಖರ್, ವೆಂಕಟೇಶ್, ನರಸಯ್ಯ, ಪ್ರಕಾಶ್, ನಾಗರಾಜು, ಮಾನಸ, ವೀರಭದ್ರಯ್ಯ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಕೊರಟಗೆರೆ ಮತ್ತು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ಜನರ ಮೇಲೆ ದಾಳಿ ಮಾಡಿದ ಹುಚ್ಚು ನಾಯಿಯನ್ನು ಪಟ್ಟಣ ಪಂಚಾಯಿತಿಯ ಆರೋಗ್ಯ ಇಲಾಖೆ ಸೆರೆ ಹಿಡಿದಿದೆ. ಬೀದಿ ನಾಯಿಗಳಯ ಉಪಟಳ ಕುರಿತು ಸಾರ್ವಜನಿಕರು ಹತ್ತಾರು ದೂರು ನೀಡಿದರೂ ಪಶು, ಆರೋಗ್ಯ ಅಥವಾ ಪಪಂ ಕ್ರಮ ಕೈಗೊಂಡಿಲ್ಲ. ಈ ಕುರಿತು ಕ್ರಮಕೈಗೊಳ್ಳುವಂತೆ ತುಮಕೂರು ಜಿಲ್ಲಾಧಿಕಾರಿಗೆ ಕನತೆ ಆಗ್ರಹ ಮಾಡಿದ್ದಾರೆ.400ಕ್ಕೂ ಅಧಿಕ ಬೀದಿನಾಯಿ:ಕೊರಟಗೆರೆ ಪಟ್ಟಣದ 15 ವಾರ್ಡಿನಲ್ಲಿ 450ಕ್ಕೂ ಅಧಿಕ ಬೀದಿನಾಯಿಗಳಿವೆ. ಮಟನ್ ಮಾರ್ಕೆಟ್, ರೇಣುಕಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಅಂಚೆ ಕಚೇರಿ, ಕದಂಬ ಬಾರ್, ಕಾಳಿದಾಸ ಶಾಲೆ, ಊರ್ಡಿಗೆರೆ ಕ್ರಾಸ್, ಕಾಲೇಜು ಮೈದಾನದಲ್ಲಿ ಹಿಂಡುಹಿಂಡಾಗಿರುವ ನಾಯಿಗಳ ಆರ್ಭಟ ಹೆಚ್ಚಾಗಿವೆ. ಜನರಕರೆಗೆ ಸಿಗದ ತುರ್ತುವಾಹನ:
ಹುಚ್ಚುನಾಯಿ ದಾಳಿಯಿಂದ ತೀವ್ರ ಗಾಯಗೊಂಡ ವೃದ್ಧರನ್ನು ಕೊರಟಗೆರೆ ಆಸ್ಪತ್ರೆಯಿಂದ ತುಮಕೂರಿಗೆ ರವಾನಿಸಲು ತುರ್ತುವಾಹನ ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ಘಟನೆಯ ಕುರಿತು ಕೂಡಾ ವರದಿಯಾಗಿದೆ. ಬೀದಿನಾಯಿ ಜನರ ಮೇಲೆ ಏಕಾಏಕಿ ದಾಳಿ ಮಾಡಿದೆ. ಕೊರಟಗೆರೆ ಪಟ್ಟಣದಲ್ಲಿ ಬೀದಿ ನಾಯಿಗಳ ಸಂತಾನೋತ್ಪತ್ತಿ ತಡೆಯಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹೊಸದಾಗಿ ಬೀದಿನಾಯಿಗಳ ಅಂಕಿ ಅಂಶದ ಸರ್ವೇ ನಡೆಸಬೇಕಿದೆ. ಪಪಂ ಮತ್ತು ಪಶು ಇಲಾಖೆ ಜಂಟಿಯಾಗಿ ಕಾರ್ಯಚರಣೆ ನಡೆಸಿ ನಾಯಿದಾಳಿ ತಡೆಯುತ್ತೇವೆ ಎಂದು ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಮೊಹಮ್ಮದ್ ಹುಸೇನ್ ತಿಳಿಸಿದ್ದಾರೆ.