ಮಧುಗಿರಿ: ಶೈಕ್ಷಣಿಕ ಪ್ರಗತಿಗೆ ಮಹತ್ವ ನೀಡಿ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಕರೆ

| Published : Dec 29 2023, 01:30 AM IST / Updated: Dec 29 2023, 01:31 AM IST

ಸಾರಾಂಶ

ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಬಡವನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠೆ ಶಾಲೆಯಲ್ಲಿ ಗ್ರಾಮ ಮಟ್ಟದ ಗಣೀತ ಸ್ಪರ್ಧೆ

ಕನ್ನಡಪ್ರಭವಾರ್ತೆ ಮಧುಗಿರಿ

ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಕಲಿಯುವ ಆಸಕ್ತಿ ಬೆಳಸಿಕೊಳ್ಳಬೇಕು. ಸುಖಾಸುಮ್ಮನೆ ಶಾಲೆಗೆ ತಪ್ಪಿಸಿಕೊಳ್ಳ ಬಾರದು. ಶಿಕ್ಷಕರು ಪ್ರತಿದಿನ ಬೋಧಿಸಿದ ಪಾಠ ಪ್ರವಚನ ಗಮನ ಕೊಟ್ಟು ಕೇಳಿ ಅಕ್ಷರ ಕಲಿಯಬೇಕು. ಶಾಲೆಗೆ ಗೈರಾದರೆ ವಿಧ್ಯೆ ಕಲಿಯಲು ಕಷ್ಟವಾಗುತ್ತದೆ. ಆದ ಕಾರಣ ಶೈಕ್ಷಣಿಕ ಪ್ರಗತಿಗೆ ಮಹತ್ವ ನೀಡಿ ಹೆತ್ತವರ ಮತ್ತು ಸಮಾಜದ ಕೀರ್ತಿ ಬೆಳಗಿಸಿ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಕರೆ ನೀಡಿದರು.

ತಾಲೂಕಿನ ದೊಡ್ಡೇರಿ ಹೋಬಳಿ ಬಡವನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠೆ ಶಾಲೆಯಲ್ಲಿ ಪಂಚಾಯತ್‌ ರಾಜ್‌ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಅಕ್ಷರ ಪೌಂಡೇಶನ್‌ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಬುಧವಾರ ಆಯೋಜಿಸಿದ್ದ 2023-24ನೇ ಸಾಲಿನ ಮಕ್ಕಳಿಗಾಗಿ ಗ್ರಾಪಂ ಮಟ್ಟದ ಗಣಿತ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಗಣಿತ ಕಲಿಕೆ ನಿರಂತರ ಅಧ್ಯಯನದಿಂದ ಮಾತ್ರ ಸುಲಭವಾಗುತ್ತದೆ. ತರಗತಿಗೆ ಚೆಕ್ಕರ್‌ ಹಾಕುವುದರಿಂದ ಹಿಂದಿನ ತರಗತಿ ಮತ್ತು ಮುಂದಿನ ತರಗತಿಗಳಿಗೆ ಸರಿಯಾದ ಸಂಬಂಧವಿರುವುದಿಲ್ಲ, ಶಾಲೆಗೆ ಪ್ರತಿದಿನ ಹಾಜರಾಗುವುದರಿಂದ ಪರೀಕ್ಷೆಗೆ ನಿಗದಿ ಪಡಿಸಿದ ಪೂರ್ಣ ಅಂಕಗಳನ್ನು ಗಣಿತದಲ್ಲಿ ಪಡೆಯಬಹುದು. ಒಂದು ವೇಳೆ ಶಾಲಾಗೆ ಗೈರಾದರೆ ನಿಮ್ಮ ಸ್ನೇಹಿತರ ಬಳಿ ಅಂದಿನ ದಿನದ ಪಾಠವನ್ನು ಕೇಳಿ ಪಡೆದು ಕಲಿಯಬೇಕು. ವಿಧ್ಯೆ ಸಾಧಕನ ಸ್ವತ್ತು, ಕಠಿಣ ಪರಿಶ್ರಮದಿಂದ ಕಲಿತರೆ ನಿಮ್ಮ ಬದುಕು ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದರು.

ಬಿಇಒ ಹನುಮಂತರಾಯಪ್ಪ, ಇಒ ಲಕ್ಷ್ಮಣ್‌, ಗ್ರಾಪಂ ಅಧ್ಯಕ್ಷೆ ಬಾನುಪ್ರಿಯಾ, ಉಪಾಧ್ಯಕ್ಷೆ ಜಯಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಹನುಮಂತರಾಯಪ್ಪ, ನಳಿನಾ, ಜಿ.ಪಂ. ಮಾಜಿ ಸದಸ್ಯ ಚೊಡಪ್ಪ, ಮುಖ್ಯ ಶಿಕ್ಷಕಿ ಅಶ್ವತ್ಥಮ್ಮ ಸೇರಿದಂತೆ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.