ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಮಾದಿಗ ಸಮಾಜದವರ ಮತಗಳು ಪಡೆದರೂ ಕಾಂಗ್ರೆಸ್ ನಮ್ಮ ಹೋರಾಟಕ್ಕೆ ಬೆಂಬಲ ನೀಡಿಲ್ಲ. ಒಳ ಮಿಸಲಾತಿಯ ಚಕಾರ ಎತ್ತಿಲ್ಲ. ಇಂತಹ ಸಂದರ್ಭದಲ್ಲಿ ಆರ್ಎಸ್ಎಸ್ ಹಾಗೂ ಬಿಜೆಪಿ ಸಂಕಲ್ಪ ಮಾಡಿ ನಮ್ಮ ಬೆಂಬಲಕ್ಕೆ ನಿಂತಿವೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ನುಡಿದರು.ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಗುರುವಾರ ಮಾದಿಗ ಮುನ್ನಡೆ ಮಾದಿಗರ ಆತ್ಮ ಗೌರವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ಕುರಿತು ಕಳೆದ 30 ವರ್ಷಗಳಿಂದ ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಹೋರಾಟ ಮಾಡಿದ್ದರೂ ಯಾರೂ ನಮ್ಮ ಪರವಾಗಿ ಧ್ವನಿ ಎತ್ತಿಲ್ಲ. ಆದರೆ ಕಳೆದ ತಿಂಗಳು ತೆಲಂಗಾಣದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ನಮಗೆ ಭರವಸೆ ನೀಡಿ, ನಾನು ನಿಮ್ಮೊಂದಿಗೆ ಇದ್ದೇನೆ ಎಂದಿದ್ದಾರೆ ಎಂದರು.
ನಮ್ಮ ಸಮಾಜದ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದಲ್ಲದೇ ಕೇಂದ್ರದ ಯೋಜನೆಗಳ ಲಾಭ ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ಜಾಗೃತಿ ಮೂಡಿಸಲು ರಾಜ್ಯ ಹಾಗೂ ಎಲ್ಲ ಜಿಲ್ಲೆಗಳಲ್ಲಿ ಮಾದಿಗರ ಆತ್ಮ ಗೌರವ ಸಮಾವೇಶಗಳನ್ನು ಆಯೋಜಿಸುತ್ತಿದ್ದೇವೆ ಎಂದರು.ಈಗಾಗಲೇ ಒಳ ಮೀಸಲಾತಿ ಕುರಿತು ಪ್ರಕರಣ ಸುಪ್ರೀಂಕೋರ್ಟ್ನಲ್ಲಿದೆ. ಮುಂದಿನ ಜನವರಿ ತಿಂಗಳು ನಮಗೆ ಸಿಹಿ ಸುದ್ದಿ ಸಿಗಲಿದೆ ಎಂಬ ವಿಶ್ವಾಸ ನಮಗಿದೆ. ಸುಪ್ರಿಂಕೋರ್ಟ್ನಲ್ಲಿ ನ್ಯಾಯ ನಮ್ಮ ಪರವಾಗಿ ಬಂದರೂ ರಾಜ್ಯಗಳು ಅದನ್ನು ಜಾರಿಗೆ ತರುವಲ್ಲಿ ತಾತ್ಸರ ಮಾಡಿದರೆ ಎಲ್ಲರೂ ಹೋರಾಟ ಮಾಡಲು ತಯಾರಾಗಿದ್ದೇವೆ ಎಂದು ಸಚಿವರು ಎಚ್ಚರಿಸಿದರು.
ನಾವು ಇಲ್ಲಿ ಯಾವುದೇ ರಾಜಕಾರಣ ಮಾಡಲು ಬಂದಿಲ್ಲ . ಈಗ ಸಧ್ಯ ಯಾವುದೇ ಚುನಾವಣೆ ಕೂಡ ಇಲ್ಲ. ಕೇವಲ ನಮ್ಮ ಸಮಾಜಕ್ಕೆ ಜಾಗೃತ ಮಾಡುವ ಉದ್ದೇಶದಿಂದ ಮಾತ್ರ ಸಮಾವೇಶಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಸಚಿವ ಎ. ನಾರಾಯಣ ಸ್ವಾಮಿ ಸ್ಪಷ್ಟಪಡಿಸಿದರು.ಮಾದಿಗ ದಂಡೋರ ಹೋರಾಟ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷರಾದ ಫರ್ನಾಂಡಿಸ್ ಹಿಪ್ಪಳಗಾಂವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ಮತಗಳನ್ನು ಪಡೆದ ಕಾಂಗ್ರೆಸ್ನ ಯಾರೊಬ್ಬರೂ ನಮಗೆ ನ್ಯಾಯ ಕೊಡಿಸಿಲ್ಲ. ಆದರೆ ಆರ್ಎಸ್ಎಸ್ ಹಾಗೂ ಬಿಜೆಪಿಯವರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಸಮಾಜಕ್ಕೆ ನ್ಯಾಯ ಕೊಡುವವರಿಗೆ ನಾವು ಬೆಂಬಲ ನೀಡಲೇಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ದೇವೇಂದ್ರನಾಥ, ರಾಜು ಕಡ್ಯಾಳ, ವೆಂಕಟೇಶ ದೊಡ್ಡೇರಿ, ರಾಯಚೂರಿನ ಸಂಪತ್, ರಾಜ್ಯ ಉಪಾಧ್ಯಕ್ಷ ದಯಾನಂದ ವಕೀಲ್, ಸುಧಾಕರ ಸೂರ್ಯವಂಶಿ ಸೇರಿದಂತೆ ಇನ್ನಿತರ ಪ್ರಮುಖರು ಇದ್ದರು.ಮಾದಿಗ ನೌಕರರ ಸಂಘದ ಅಧ್ಯಕ್ಷರಾದ ಸುಮಂತ ಕಟ್ಟಿಮನಿ ಅವರು ಸಂವಿಧಾನದ ಪೀಠಿಕೆ ವಾಚನ ಮಾಡಿದರೆ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣಕುಮಾರ ಮೀರಾಗಂಜಕರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ಪ್ರಮುಖರನ್ನು ಸನ್ಮಾನಿಸಲಾಯಿತು.