ಮಡಿಕೇರಿ: ಮಡಿಕೇರಿ ನಗರಸಭೆಯ ಕಸದ ವಾಹನದಲ್ಲಿ ಕಸದ ಜತೆಗೆ ಕುಡಿಯುವ ನೀರು ಪೂರೈಕೆಯಾಗುವ ಕೇಂದ್ರಕ್ಕೆ ಆಲಂ ಹಾಗೂ ಬ್ಲೀಚಿಂಗ್ ಪೌಡರ್ ಸಾಗಿಸುತ್ತಿರುವುದು ಸರಿಯಲ್ಲ. ಕಸದ ವಾಹನದಲ್ಲಿ ಸಾಗಿಸಲು ಅನುಮತಿ ನೀಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್ ಒತ್ತಾಯಿಸಿದರು.

ಮಡಿಕೇರಿ ನಗರಸಭೆ ಎದುರು ಕಳೆದ ರಾತ್ರಿ(ಗುರುವಾರ) ಗಲಾಟೆ ನಡೆಯುತ್ತಿತ್ತು. ಅಲ್ಲಿ ಹೋಗಿ ವಿಚಾರಿಸಿದಾಗ ಸ್ಥಳೀಯರು ಟ್ರ್ಯಾಕ್ಟರ್‌ಗೆ ಕಸ ಹಾಕಿದಕ್ಕಾಗಿ ನಗರಸಭೆ ಪೌರ ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿ ಕಸ ಹಾಕದಂತೆ ತಡೆದಿದ್ದರು. ಅವರನ್ನು ಪ್ರಶ್ನಿಸಿದಾಗ ಅದರಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗೆ ಹಾಕುವ ಆಲಂ ಮತ್ತು ಬ್ಲೀಚಿಂಗ್ ಪೌಡರ್ ಇದೆ. ಇದೇ ವಾಹನದಲ್ಲಿ ಕೊಂಡೊಯ್ಯಬೇಕಾಗಿದೆ ಎಂದು ಪೌರಕಾರ್ಮಿಕರೇ ತಿಳಿಸಿದ್ದಾರೆ. ಮಡಿಕೇರಿ ನಗರದ ಜನತೆಗೆ ಪೂರೈಕೆಯಾಗುವ ಕುಡಿಯುವ ನೀರಿಗೆ ದುರ್ನಾತ ಬೀರುವ ಕಸದ ಗಾಡಿಯಲ್ಲಿ ಆಲಂ ಮತ್ತು ಬ್ಲೀಚಿಂಗ್ ಪೌಡರ್ ಸಾಗಿಸುವುದು ಖಂಡನೀಯ. ಈ ವಿಚಾರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ಮೌನ ವಹಿಸಲು ಕಾರಣವೇನೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕವನ್ ಕೊತ್ತೊಳಿ ಮಾತನಾಡಿ, ಆಲಂ, ಬ್ಲೀಚಿಂಗ್ ಪೌಡರ್ ಸಾಗಿಸಲು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಬೇಕು. ನಗರಸಭೆ ಅಧ್ಯಕ್ಷರು ಹಾಗೂ ಆರೋಗ್ಯ ಸಮಿತಿ ಅಧ್ಯಕ್ಷರು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಮುದ್ದುರಾಜ್ ಉಪಸ್ಥಿತರಿದ್ದರು.