ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪ್ರಥಮ ವರ್ಷದ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್-1 ಲೆದರ್ ಬಾಲ್ ಪಂದ್ಯಾವಳಿ ಮೇ ತಿಂಗಳ ಮೊದಲ ವಾರದಿಂದ ನಡೆಯಲಿದ್ದು, ಆಟಗಾರರು ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆಯ ಸಂಚಾಲಕ ಪೊರುಕೊಂಡ ಸುನಿಲ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಯುವಕರಿಗೆ ಸೀಮಿತವಾಗಿರುವ ಪಂದ್ಯಾವಳಿ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ ನಡೆಯಲಿದೆ. 14 ವರ್ಷ ಮೇಲ್ಪಟ್ಟ ಆಟಗಾರರಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ ರು.1.50 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ರು.75 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಲೀಗ್ ಮಾದರಿಯಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಒಟ್ಟು ಹತ್ತು ಪ್ರಾಂಚೈಸಿಗಳು ಇರಲಿದ್ದಾರೆ ಎಂದರು.ರಿಪಬ್ಲಿಕ್ ಟಿವಿ ಕನ್ನಡ ಚಾನಲ್ ನ ಮುಖ್ಯಸ್ಥ ಚೇರಂಡ ಕಿಶನ್ ಮಾದಪ್ಪ, ಉತ್ತಮ ಕ್ರಿಕೆಟಿಗರಾಗಿದ್ದು, ಕಳೆದ ಹಲವು ವರ್ಷಗಳಿಂದ ಕೊಡಗಿನಲ್ಲಿ ನಡೆಯುತ್ತಿರುವ ಕ್ರೀಡಾಕೂಟಗಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಹಿರಿಯರಾದ ಬಲ್ಯಾಟಂಡ ಕಾವೇರ್ ಪೂಣಚ್ಚ ಅವರ ಪ್ರೋತ್ಸಾಹ ಮತ್ತು ಪ್ರೇರಣೆಯಿಂದ ಹಾಗೂ ಜಿಲ್ಲೆಯ ಶಾಸಕದ್ವಯರ ಸಹಕಾರದಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿರುವುದಾಗಿ ಹೇಳಿದರು.ಫ್ರಾಂಚೈಸಿಗಳು: ಪಂದ್ಯಾವಳಿಯ ಫ್ರಾಂಚೈಸಿಗಳಾಗಿ ಅವರೆಮಾದಂಡ ಶರಣ್ ಪೂಣಚ್ಚ, ಮಾದಂಡ ತಿಮ್ಮಯ್ಯ, ಬೊಪ್ಪಂಡ ಸೂರಾಜ್, ಮುಂಡ್ಯೋಳಂಡ ನಂದಾ ನಾಣಯ್ಯ, ಚೆಟ್ಟಿಯರಂಡ ನಿರನ್, ಕೋಟೇರ ಸುನಿಲ್, ಪಾಲಚಂಡ ಜಗನ್ ಉತ್ತಪ್ಪ, ಪರವಂಡ ಹೇಮಂತ್, ಪರವಂಡ ಮಿಥುನ್, ಬಾಚೆಟ್ಟಿರ ತೇಜಸ್ವಿ ತಿಮ್ಮಯ್ಯ, ತ್ಯಾಗಿ, ಹಂಚೆಟ್ಟಿರ ಶಿಪ್ರಜ್ ಸೋಮಣ್ಣ ಸಹಕಾರ ನೀಡಿದ್ದಾರೆ ಎಂದು ಹೇಳಿದರು.ನಿರ್ದೇಶಕ ಮಡ್ಲಂಡ ದರ್ಶನ್ ಮಾತನಾಡಿ, ಪಂದ್ಯಾವಳಿಯ ಅರ್ಜಿ ಶುಲ್ಕ ರು.500 ಆಗಿದ್ದು, ಬಿಡ್ಡಿಂಗ್ ಪ್ರಕ್ರಿಯೆ ಮಾರ್ಚ್ ತಿಂಗಳಿನಲ್ಲಿ ನಡೆಯಲಿದೆ. ಆಟಗಾರರು ಮಾ.15 ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಹರಾಜಾಗದ ಆಟಗಾರರ ನೋಂದಾವಣಿ ಶುಲ್ಕ ರು.500 ನ್ನು ಹಿಂತಿರುಗಿಸಲಾಗುವುದು ಎಂದು ತಿಳಿಸಿದರು.
ಆಸಕ್ತ ಆಟಗಾರರು ಮಡ್ಲಂಡ ದರ್ಶನ್ 7204702325, ಚರ್ಮಂದಂಡ ಡಾ.ಸೋಮಣ್ಣ 9980599861 ನ್ನು ಸಂಪರ್ಕಿಸಬಹುದಾಗಿದೆ. ಯೂಟ್ಯೂಬ್ ಚಾನಲ್ ನಲ್ಲಿ ಈ ಪಂದ್ಯಾವಳಿಯ ನೇರ ಪ್ರಸಾರವಿರುತ್ತದೆ ಎಂದರು.ನಿರ್ದೇಶಕ ಕುಲ್ಲೇಟಿರ ಶಾಂತ ಕಾಳಪ್ಪ ಮಾತನಾಡಿ, ದೇಶ, ವಿದೇಶಗಳಲ್ಲಿ ನೆಲೆಸಿರುವ ಕೊಡವ ಯುವಕರು ಕೂಡ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸಹ ಸಂಚಾಲಕ ಚಂಡೀರ ರಚನ್ ಚಿಣ್ಣಪ್ಪ ಮಾತನಾಡಿ, ಕೊಡವ ಯುವಕರ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಚರ್ಮಂದಂಡ ಡಾ.ಸೋಮಣ್ಣ ಹಾಗೂ ಪಾಲಚಂಡ ಜಗನ್ ಉತ್ತಪ್ಪ ಇದ್ದರು.