ಕೋಡಿಮಠದಲ್ಲಿ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

| Published : Mar 16 2025, 01:50 AM IST

ಕೋಡಿಮಠದಲ್ಲಿ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾರನಹಳ್ಳಿ ಕೋಡಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಜಾತ್ರಾ ಮಹೋತ್ಸವದ ಮೊದಲೇ ದಿನವಾದ ಶನಿವಾರ, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಮಠದ ಸಂಪ್ರದಾಯದಂತೆ ಸಾವಿರಾರು ಮುತ್ತೈದೆಯರಿಗೆ ಉಡಿ ತುಂಬಿ, ಕುಂಕುಮ ನೀಡಿ, ಬಾಗಿನ ಕೊಟ್ಟು ಸತ್ಕರಿಸಲಾಯಿತು. ಜಾತಿ, ಮತ, ಪಂಥ ಬೇಧವಿಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಹೆಂಗೆಳೆಯರು, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಂದ ಸಾಂಪ್ರದಾಯಿಕ ಗೌರವ ಜೊತೆಗೆ ಆಶೀರ್ವಚನ ಪಡೆದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ.

ಜಾತ್ರಾ ಮಹೋತ್ಸವದ ಮೊದಲೇ ದಿನವಾದ ಶನಿವಾರ, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಮಠದ ಸಂಪ್ರದಾಯದಂತೆ ಸಾವಿರಾರು ಮುತ್ತೈದೆಯರಿಗೆ ಉಡಿ ತುಂಬಿ, ಕುಂಕುಮ ನೀಡಿ, ಬಾಗಿನ ಕೊಟ್ಟು ಸತ್ಕರಿಸಲಾಯಿತು. ಜಾತಿ, ಮತ, ಪಂಥ ಬೇಧವಿಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಹೆಂಗೆಳೆಯರು, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಂದ ಸಾಂಪ್ರದಾಯಿಕ ಗೌರವ ಜೊತೆಗೆ ಆಶೀರ್ವಚನ ಪಡೆದರು. ನಂತರ ಅರಿಶಿನ ಕುಂಕುಮದೊಂದಿಗೆ ಹೂ, ಬಳೆ ಹಾಗೂ ಸೀರೆಯನ್ನು ಹೆಣ್ಣು ಮಕ್ಕಳಿಗೆ ನೀಡುವ ಮೂಲಕ ಶ್ರೀ ಮಠದ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಹೆಣ್ಣು ಮಕ್ಕಳಿಗೆ ಶ್ರೀಮಠವು ಮೊದಲಿನಿಂದಲೂ ಗೌರವ ನೀಡುತ್ತಾ ಬಂದಿರುವುದಲ್ಲದೆ, ಪೂಜ್ಯ ಭಾವನೆಯಲ್ಲಿ ಕಾಣಲಾಗುತ್ತಿದೆ ಎಂದರು. ಮಠಕ್ಕೆ ಬರುವ ಪ್ರತಿ ಹೆಣ್ಣು ಮಗಳೂ ಸಹ, ಪಾರ್ವತಿ ಸಮಾನ ಎಂಬುದು ಮಠದ ನಂಬಿಕೆಯಾಗಿದೆ. ಅಲ್ಲದೆ, ಮುತ್ತೈದೆಯರಿಗೆ ಬಾಗಿನ ನೀಡುವ ಮಠದ ಸಂಪ್ರದಾಯ ಒಂದೆಡೆಯಾದರೆ, ಅವರನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಹೆಣ್ಣು ಮಕ್ಕಳನ್ನೂ ಮುನ್ನಲೆಗೆ ತರುವುದು ಹಾಗೂ ಪುರುಷರಿಗೆ ಸಮಾನಳು ಎಂದು ಸಾರುವುದು ಕಾರ್ಯಕ್ರಮದ, ಆಶಯ, ಉದ್ದೇಶ ಎಂದರು.

ಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಸೇರಿದಂತೆ ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.ಮಧ್ಯಾಹ್ನ ಸಾಮೂಹಿಕವಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ನಾಳೆ ಕೋಡಿಮಠ ಹಾಗೂ ಹಾರನಹಳ್ಳಿ ಗ್ರಾಮಗಳನ್ನು ಪ್ರವೇಶಸುವ ಮಹಾಸ್ವಾಮೀಜಿ ಅವರು, ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುವರು. ಶ್ರೀಗಳನ್ನು ಸ್ವಾಗತ ಮಾಡಲು, ಈಗಾಗಲೇ ಕೋಡಿಮಠ ಮತ್ತು ಹಾರನಹಳ್ಳಿ ಜನರು ರಸ್ತೆ ಮತ್ತಿತರ ಕಡೆಗಳಲ್ಲಿ ತಳಿರು-ತೋರಣಗಳಿಂದ ಸಿಂಗಾರ ಮಾಡಲಾಗಿದೆ.