ಸಾರಾಂಶ
ನಮ್ಮ ಅವಧಿಯ ಐದು ವರ್ಷದವರೆಗೂ ಗ್ಯಾರಂಟಿ ಯೋಜನೆ ಜಾರಿಯಲ್ಲೇ ಇಡುತ್ತೇವೆ. ಈ ಬಗ್ಗೆ ಸಂಶಯ ಪಡಬೇಕಾದ ಅಗತ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಮೈಸೂರು
ನಮ್ಮ ಅವಧಿಯ ಐದು ವರ್ಷದವರೆಗೂ ಗ್ಯಾರಂಟಿ ಯೋಜನೆ ಜಾರಿಯಲ್ಲೇ ಇಡುತ್ತೇವೆ. ಈ ಬಗ್ಗೆ ಸಂಶಯ ಪಡಬೇಕಾದ ಅಗತ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಜನರಿಗೆ ಶಕ್ತಿ ತುಂಬಬೇಕೆಂದು ಈ ಯೋಜನೆಗಳನ್ನು ಜಾರಿಗೊಳಿಸಿದೆವು. ಆಗ ಪ್ರಧಾನಿ ಮೋದಿ ಅವರೇ ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗುತ್ತದೆ. ಈ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ ಎಂದಿದ್ದರು.
ಬಿಜೆಪಿಯವರು ಗ್ಯಾರಂಟಿ ಯೋಜನೆ ಘೋಷಣೆ ಜಾರಿಗೊಳಿಸಿದ ದಿನದಿಂದ ತಪ್ಪು ಮಾಹಿತಿಯನ್ನು ಜನರಿಗೆ ಕೊಡುತ್ತಿದ್ದಾರೆ. ಆದ್ದರಿಂದ ವಸ್ತುಸ್ಥಿತಿಯನ್ನು ತಿಳಿಸಲು ಸರ್ಕಾರದಿಂದಲೇ ಸಮಾವೇಶ ನಡೆಸುತ್ತಿದ್ದೇವೆ.
ಬೆಲೆ ಏರಿಕೆಯಿಂದ ಬಡವರು ಜೀವನ ನಡೆಸುವುದು ಕಷ್ಟವಾಗುತ್ತಿದೆ. ಬಡವರ ಕೈಯಲ್ಲಿ ದುಡ್ಡಿಲ್ಲ. ಖರೀದಿಸುವ ಶಕ್ತಿ ಕಡಿಮೆಯಾಗಿದೆ ಎಂದರು.
ವಿಪಕ್ಷ ನಾಯಕ ಆರ್. ಅಶೋಕ, ಮಾಜಿ ಸಿಎಂಗಳಾದ ಬೊಮ್ಮಾಯಿ, ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಎಲ್ಲರೂ ಜಾರಿಯಾಗಲ್ಲ ಎಂದಿದ್ದರು.
ಅಭಿವೃದ್ಧಿ ಕೆಲಸಗಳು ನಿಂತು ಹೋಗುತ್ತವೆ ಎಂದಿದ್ದರು. ಚುನಾವಣೆಗಾಗಿ ಗ್ಯಾರೆಂಟ್ ಜಾರಿಗೊಳಿಸಿದ್ದಾರೆ ಎಂದಿದ್ದರು. ಇದೆಲ್ಲವೂ ಅಪ್ಪಟ ಸುಳ್ಳು. ಹೊಟ್ಟೆಉರಿ ತಡೆಯಲಾಗದೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಎಲ್ಲಾ ಜಾತಿಯ ಬಡವರು ಹಾಗೂ ಧರ್ಮದವರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದೇವೆ. ಬಿಜೆಪಿಯ ಬಡವರಿಗೂ ಕೊಡಲಾಗುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಉಚಿತ ಪ್ರಯಾಣದ ಕಾರ್ಯಕ್ರಮ ನೀಡಿದ್ದು ಕಾಂಗ್ರೆಸ್ ಸರ್ಕಾರ ಮಾತ್ರ.
ಬಿಜೆಪಿಯಿಂದ ನಾಮನಿರ್ದೇಶನವಾದ ರಾಜ್ಯಸಭಾ ಸದಸ್ಯರಾದ ವೀರೇಂದ್ರ ಹೆಗ್ಗಡೆ ಅವರು ಸರ್ಕಾರವನ್ನು ಅಭಿನಂದಿಸಿ ಪತ್ರ ಬರೆದಿದ್ದಾರೆ. ಅವರೇನು ಸುಮ್ಮನೆ ಬರೆಯುತ್ತಾರಾ ಎಂದು ಪ್ರಶ್ನಿಸಿದರು.
ಯುವ ನಿಧಿ ಯೋಜನೆಗೆ ಈವರೆಗೆ ಜಿಲ್ಲೆಯಲ್ಲಿ 5,651 ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ವೇಳೆ ನಿರುದ್ಯೋಗ ಭತ್ಯೆ ಪಡೆಯುವ ಎಲ್ಲರಿಗೂ ಅಗತ್ಯ ಕೌಶಲ್ಯ ತರಬೇತಿ ನೀಡುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರ ಮಾತ್ರ ಅಭಿವೃದ್ಧಿ ಕೆಲಸ ಮಾಡುತ್ತದೆ. ರಾಜ್ಯದ 1.20 ಕೋಟಿ ಕುಟುಂಬಗಳಿಗೆ ಗೃಹಭಾಗ್ಯ ಯೋಜನೆ ದೊರೆಯುತ್ತಿದೆ. ಬಡವರ ಕೈಗೆ ದುಡ್ಡು ಕೊಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ.
ಯೂನಿವರ್ಸಲ್ ಬೇಸಿಕ್ ಇನ್ಕಂ ತತ್ತ್ವದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ. ಇದನ್ನು ಸಹಿಸಲಾಗದೆ ಸುಳ್ಳು ಹೇಳುತ್ತಿದ್ದಾರೆ ಎಂದರು.
ಬಿಜೆಪಿಯವರ ಆರೋಪಗಳನ್ನು ನಂಬಬೇಡಿ. ನೀವು ಐದು ವರ್ಷಗಳವರೆಗೆ ಅಧಿಕಾರ ಕೊಟ್ಟಿದ್ದೀರಿ. ಲೋಕಸಭಾ ಚುನಾವಣೆಯಲ್ಲಿ ಆಶೀರ್ವಾದ ನಮ್ಮ ಮೇಲಿರಬೇಕು ಎಂದು ಸಿದ್ದರಾಮಯ್ಯ ಕೋರಿದರು.
ಮೋದಿ ವಿರುದ್ಧ ವಾಗ್ದಾಳಿ
ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಒಳ್ಳೆಯ ದಿನಗಳು ಬರುತ್ತವೆ, ಬರುತ್ತವೆ ಎಂದರು ಬಂದಿದೆಯಾ? ಕಪ್ಪು ಹಣ ಮುಟ್ಟುಗೋಲು ಹಾಕಿ ಎಲ್ಲರ ಖಾತೆಗೆ 15 ಲಕ್ಷ ನೀಡುವುದಾಗಿ ಹೇಳಿದ್ದರು. ಯಾರ ಖಾತೆಗಾದರೂ ಹದಿನೈದು ಪೈಸೆಯಾದರೂ ಬಂತಾ? ಎಂದು ಅವರು ಪ್ರಶ್ನಿಸಿದರು.
ಸಂವಿಧಾನದ ವಿಚಾರದಲ್ಲಿ ಮೋದಿ ಸುಳ್ಳು ಹೇಳುತ್ತಾರೆ. ಸಂವಿಧಾನ ಮುಖ್ಯ ಎನ್ನುತ್ತಾರೆ. ಮತ್ತೊಬ್ಬ ಸಂಸದ ಸಂವಿಧಾನ ಬದಲಿಸುವುದಾಗಿ ಹೇಳುತ್ತಾರೆ.
ಸಂವಿಧಾನ ಜಾರಿ ಅವರಿಗೆ ಇಷ್ಟ ಇಲ್ಲ. ಸಂವಿಧಾನ ಇರಬಾರದು ಎಂಬುದು ಅವರ ಅಚಲವಾದ ನಂಬಿಕೆ. ಹೀಗಾಗಿಯೇ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ.
ಅನಂತಕುಮಾರ್ ಹೆಗಡೆ ಮೂಲಕ ಮೋದಿ, ಅಮಿತ್ ಶಾ, ನಡ್ಡಾ ಅವರು ಹೀಗೆ ಹೇಳಿಸುತ್ತಿದ್ದಾರೆ. ಹಾಗೆ ಹೇಳಿದವರ ಮೇಲೆ ಕ್ರಮ ಕೈಗೊಂಡಿದ್ದಾರೆಯೇ? ಪಕ್ಷದಿಂದ ಅಮಾನತುಗೊಳಿಸಿದ್ದಾರೆಯೇ? ಇಲ್ಲ. ಅದರ ಅರ್ಥ ಬಿಜೆಪಿಯ ರಹಸ್ಯ ಕಾರ್ಯಾಚರಣೆ ಇದು ಎಂದು ಅವರು ಕಿಡಿಕಾರಿದರು.
ಸಂವಿಧಾನ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಇಲ್ಲವಾದರೆ ನಾವ್ಯಾರೂ ಉಳಿಯುವುದಿಲ್ಲ. ಬಿಜೆಪಿಯವರು ಮೈಸೂರು ನಗರಕ್ಕೆ ಇಂಥಾದ್ದು ಮಾಡಿದ್ದೇವೆ ಎಂದು ತೋರಿಸಲಿ ಎಂದು ಅವರು ಸವಾಲು ಹಾಕಿದರು.
ಗರಂ ಆದ ಸಿದ್ದು
ಸಿದ್ದರಾಮಯ್ಯ ಅವರು ಭಾಷಣ ಆರಂಭಿಸಿದ ಕೆಲವೇ ಹೊತ್ತಿಗೆ ಅನೇಕ ಮಹಿಳೆಯರು ಎದ್ದು ಹೊರಡಲು ಅಣಿಯಾಗುತ್ತಿದ್ದರು. ಈ ವೇಳೆ ಕೋಪಗೊಂಡ ಸಿದ್ದರಾಮಯ್ಯ ಅವರು, ಹೋಗ್ತಿರಾ, ಬರ್ತೀರಾ? ಕುಳಿತುಕೊಳ್ರಮ್ಮ ಅಲ್ಲಿ, ಏ ಕುಳಿತುಕೊಳ್ಳಿ ಎಂದು ಗದರಿದರು. ನಿಮಗೋಸ್ಕರ ಕಾರ್ಯಕ್ರಮ ಮಾಡಿದ್ದೇವೆ ಎಂದು ಕೋಪಗೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು. ತನ್ವೀರ್ ಸೇಠ್, ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ್, ಎ.ಆರ್. ಕೃಷ್ಣಮೂರ್ತಿ, ಕೆ. ಹರೀಶ್ ಗೌಡ, ಸೂರಜ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ,
ಡಾ.ಡಿ. ತಿಮ್ಮಯ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ಖಾನ್, ಎಂಡಿಎ ಅಧ್ಯಕ್ಷ ಕೆ. ಮರಿಗೌಡ, ಡಾ. ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಗ್ಯಾರಂಟಿ ಯೋಜನೆ ಜಾರಿ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್, ಮಾಜಿ ಸಂಸದ ಶಿವಣ್ಣ ಮೊದಲಾದವರು ಇದ್ದರು.
ನಾವು ಗ್ಯಾರಂಟಿ ಜಾರಿ ಭರವಸೆ ನೀಡಿದಾಗ ವಿರೋಧ ಪಕ್ಷದವರು ಅಪಪ್ರಚಾರ ಮಾಡಿದ್ದರು. ಆದರೆ ಜನರು ನಮ್ಮ ಮೇಲೆ ಭರವಸೆ ಇಟ್ಟರು. ಯೋಜನೆಗಳು ಶೇ. 100ರಷ್ಟು ಜಾರಿಯಾಗಬೇಕು ಎಂಬುದು ಮುಖ್ಯಮಂತ್ರಿಗಳ ಸೂಚನೆ. ಅಗತ್ಯ ದಾಖಲೆ ನೀಡಿ ಜನರು ಸೌಲಭ್ಯ ಪಡೆಯಬೇಕು.
- ಕೆ. ವೆಂಕಟೇಶ್, ರೇಷ್ಮೆ ಹಾಗೂ ಪಶು ಸಂಗೋಪನಾ ಸಚಿವರು
ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರೆ ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದು ಹೇಳಿದ್ದ ಪ್ರಧಾನಿಗಳು ನಮ್ಮ ಗ್ಯಾರಂಟಿಗಳನ್ನು ದೇಶದಾದ್ಯಂತ ಘೋಷಣೆ ಮಾಡುತ್ತಿದ್ದಾರೆ.
- ತನ್ವೀರ್ ಸೇಠ್, ಶಾಸಕರು
ಮನೆಯ ಯಜಮಾನಿಗೆ ₹ 2 ಸಾವಿರ ಕೊಡುತ್ತಿದ್ದೇವೆ. ಕೇಂದ್ರದವರು ಅಕ್ಕಿ ಕೊಡಲಿಲ್ಲ. ಆದ್ದರಿಂದ ಐದು ಕೆಜಿ ಅಕ್ಕಿಗೆ ಆಗುವಷ್ಟು ಹಣವನ್ನು ಕೊಡುತ್ತಿದ್ದೇವೆ.
ಈ ಕಾರ್ಯಕ್ರಮ ರಾಜಕೀಯ ಪ್ರೇರಿತವಾದುದಲ್ಲ. ಸಂಪತ್ತು ಹಂಚಿಕೆ ಆಗಬೇಕು ಎಂದು ಸಂವಿಧಾನದಲ್ಲಿ ಹೇಳಿದೆ. ಅದನ್ನು ನಾವು ಅನುಷ್ಠಾನಗೊಳಿಸುತ್ತಿದ್ದೇವೆ.
- ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರು