ಮಹಾವೀರ ಕಾಲೇಜು: ಕಾರ್ಪೋರೇಟ್‌ ಓರಿಯೆಂಟೇಶನ್‌ ದಿನ ಕಾರ್ಯಾಗಾರ

| Published : Feb 25 2025, 12:51 AM IST

ಸಾರಾಂಶ

ಮಾಹೆ, ಶ್ರೀ ಮಹಾವೀರ ಕಾಲೇಜು ಹಾಗೂ ಮಹಾವೀರ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಸಹಯೋಗದಲ್ಲಿ ಮಣಿಪಾಲದ ಶಾರದಾ ಸಭಾಂಗಣದಲ್ಲಿ ಮಹಾವೀರ ಕಾಲೇಜು ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ‘ಕಾರ್ಪೊರೇಟ್ ಓರಿಯೆಂಟೇಶನ್ ದಿನʼ ಕಾರ್ಯಾಗಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಂದಿನ ಯುವ ಜನಾಂಗ ನಾಳೆಯ ನಾಯಕರು. ಯುವ ಜನತೆಯೇ ದೇಶದ ನಿಜವಾದ ಸಂಪತ್ತು. ಅವರ ವಿದ್ಯಾರ್ಹತೆಯ ಆಧಾರದ ಮೇಲೆ ಅವರಿಗೆ ಉದ್ಯೋಗ ದೊರಕಬೇಕು ಎಂದು ಮಾಹೆ ಮಣಿಪಾಲದ ಉಪ ಕುಲಪತಿ ಡಾ. ಎಚ್.ಎಸ್. ಬಲ್ಲಾಳ್ ಅಭಿಪ್ರಾಯಪಟ್ಟಿದ್ದಾರೆ.

ಮಾಹೆ, ಶ್ರೀ ಮಹಾವೀರ ಕಾಲೇಜು ಹಾಗೂ ಮಹಾವೀರ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಸಹಯೋಗದಲ್ಲಿ ಮಣಿಪಾಲದ ಶಾರದಾ ಸಭಾಂಗಣದಲ್ಲಿ ಮಹಾವೀರ ಕಾಲೇಜು ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಕಾರ್ಪೊರೇಟ್ ಓರಿಯೆಂಟೇಶನ್ ದಿನʼ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾಹೆ ಮಣಿಪಾಲದ ವಿವಿಧ ವಿಭಾಗಗಳಲ್ಲಿ ಪರಿಣಿತರಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾರ್ಪೊರೇಟ್ ಜಗತ್ತಿನಲ್ಲಿ ಎಲ್ಲಾ ವಿಭಾಗಗಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮಣಿಪಾಲದ ಕಾರ್ಯದರ್ಶಿ ವರದರಾಯ ಪೈ ಮಾತನಾಡಿ, ಔದ್ಯೋಗಿಕ ಕ್ಷೇತ್ರದಲ್ಲಿ ಹಲವಾರು ಸವಾಲುಗಳು ಇರುತ್ತವೆ. ಇವನ್ನೆಲ್ಲ ಎದುರಿಸಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ಕಾರ್ಯಾಗಾರ ಇದಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಅವರ ಕೌಶಲ್ಯ ವೃದ್ಧಿಗಾಗಿ ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಣಬರುವ ಸಮಸ್ಯೆಗಳನ್ನು ಎದುರಿಸಲು ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರಬೇಕು. ಎಲ್ಲಾ ಪರಿಸ್ಥಿತಿಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿ ಸಂಜಯ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪದವಿ ಕಾಲೇಜು ಪ್ರಾಂಶುಪಾಲ ಡಾ. ರಾಧಾಕೃಷ್ಣ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್ ಇದ್ದರು.

ವಿದ್ಯಾರ್ಥಿಗಳಾದ ರೋಹಿಸ್ಟನ್ ಪಿಂಟೋ ಸ್ವಾಗತಿಸಿ, ರಮ್ಯಾ ವಂದಿಸಿದರು. ಶೃತಿ ಪೇರಿ ನಿರೂಪಿಸಿದರು.