ಪುತ್ತೂರು: ಮನುಕುಲಕ್ಕೆ ಮೌಲ್ಯಯುತವಾದ ತತ್ವ ಸಿದ್ಧಾಂತಗಳ ಮೂಲಕ ಸಹಬಾಳ್ವೆಗೆ ಒತ್ತು ನೀಡುವ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಿದ ಶಕ್ತಿ ಭಗವಾನ್ ಮಹಾವೀರ ಎಂದು ಪುತ್ತೂರು ತಹಸೀಲ್ದಾರ್ ಎಸ್.ಬಿ.ಕೂಡಲಗಿ ಅಭಿಪ್ರಾಯಪಟ್ಟರು.ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ನಡೆದ ಪುತ್ತೂರು ತಾಲೂಕು ಮಟ್ಟದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದ ಸಂತರು ಸಾಕಷ್ಟು ಮಂದಿ ಇದ್ದಾರೆ. ಅಂತವರ ನಡುವೆ ಸತ್ಯವನ್ನೇ ನಂಬಿಕೊಂಡು ತನ್ನ ವೈಭೋಗಗಳನ್ನು ತ್ಯಜಿಸಿ ಸಮಾಜಕ್ಕೆ ಅಗತ್ಯವಾದ ಮೂಲಭೂತ ಚಿಂತನೆಗಳನ್ನು ನೀಡಿದ ಮಹಾವೀರ ಉನ್ನತಸ್ಥಾನದಲ್ಲಿದ್ದಾರೆ. ಅವರ ಉಪದೇಶಗಳು ಎರಡು ಸಾವಿರ ವರ್ಷ ಕಳೆದರೂ ಜೀವಂತಿಕೆಯನ್ನು ಕಳೆದುಕೊಳ್ಳದೆ ಇಂದಿಗೂ ಪ್ರಸ್ತುತವಾಗಿವೆ. ಅವರ ಉಪದೇಶ-ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಅವರ ಸತ್ಯದ ಅನ್ವೇಷಣೆಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ. ಯಾರಿಗೂ ನೋವುಕೊಡದ, ಸಮಸ್ಯೆಗಳ ಸೃಷ್ಟಿಗೆ ಕಾರಣವಾಗದ ಸಮಾಜ ಅಂದರೆ ಅದು ಜೈನಸಮಾಜ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣ ಮಾಡಿದ ಕಂದಾಯ ಇಲಾಖೆಯ ಶ್ರೀಕಲಾ ಅವರು, ಅಹಿಂಸಾ ತತ್ವದ ಮೂಲಕ ಹುಟ್ಟಿಕೊಂಡ ಜೈನಧರ್ಮ ಇಂದಿಗೂ ಉನ್ನತಸ್ಥಾನದಲ್ಲಿದೆ. ವರ್ಣ ವ್ಯವಸ್ಥೆಯ ವಿರುದ್ಧದ ಅವರ ಚಿಂತನೆಗಳು ಸಾರ್ವಕಾಲಿಕ ಮೌಲ್ಯಗಳಾಗಿ ಉಳಿದುಕೊಂಡಿವೆ. ಸಾಹಿತ್ಯ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪಕ್ಕೆ ಜೈನಧರ್ಮದ ಕೊಡುಗೆ ಅಪಾರವಾಗಿದೆ. ಸಮಾಜಕ್ಕೆ ಮಾರ್ಗದರ್ಶಕ ಧರ್ಮವಾಗಿರುವ ಜೈನಧರ್ಮ ಉನ್ನತವಾದ ಮೌಲ್ಯವನ್ನು ಕಾಪಾಡಿಕೊಂಡು ಬಂದಿದೆ. ಜೈನಸಮಾಜ ಇಂದಿಗೂ ಸಹಬಾಳ್ವೆಯ ಮಿತಿಯನ್ನು ಮೀರಿ ಬದುಕುವುದನ್ನು ಇಚ್ಛಿಸುವುದಿಲ್ಲ ಎಂದರು.

ಪುತ್ತೂರು ಜೈನ್ ಮಿಲನ್ ಅಧ್ಯಕ್ಷ ಸತೀಶ್ ಪಡಿವಾಳ್ ಅವರು ಮಾತನಾಡಿ, ನೀನು ಬದುಕು. ಇತರರನ್ನು ಬದುಕಲು ಬಿಡು ಎಂಬ ಚಿಂತನೆಯ ಜೈನಧರ್ಮದ ತತ್ವ ಜೈನಸಮಾಜದಲ್ಲಿ ಇಂದಿಗೂ ಹಾಸುಹೊಕ್ಕಾಗಿದೆ. ದೇಶದಲ್ಲಿ ಕೇವಲ ಶೇ. 0.09 ರಷ್ಟಿರುವ ಜೈನರು ಅತ್ಯಂತ ಹೆಚ್ಚು ತೆರಿಗೆ ಪಾವತಿಸುವ ಸಮಾಜವಾಗಿದೆ. ಮಹಾವೀರ ದೇವರ ಜನ್ಮದಿನ ಎಂದು ನಾವು ಆಚರಿಸುತ್ತಿರುವ ಈ ಜಯಂತಿ ಕಾರ್ಯಕ್ರಮ 2024 ನೇ ವರ್ಷದ್ದಾಗಿದೆ. ಅಂದಿನಿಂದ ಇಂದಿಗೂ ಅವರ ಉಪದೇಶಗಳನ್ನು ಪಾಲಿಸುತ್ತಾ ಬಂದಿರುವ ಜೈನಸಮಾಜದ ಯೋಚನೆಗಳು ಹಾಗೂ ಚಿಂತನೆಗಳು ಧಾರ್ಮಿಕತೆಯಡಿಯಲ್ಲಿ ಬೆಳದುಕೊಂಡು ಬಂದಿದೆ ಎಂದರು.ಕಾರ್ಯಕ್ರಮದ ವೇದಿಕೆಯಲ್ಲಿ ಡಿವೈಎಸ್ಪಿ ಪ್ರಮೋದ್ ಕುಮಾರ್, ನಗರಸಭಾ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜೈನ್ ಮಿಲನ್ ಪುತ್ತೂರು ಇದರ ಪದಾಧಿಕಾರಿಗಳಾದ ಯಶೋಧರ್ ಜೈನ್, ರಾಜಶೇಖರ್ ಜೈನ್, ವಿ.ಕೆ.ಜೈನ್, ಅಶೋಕ್ ಜೈನ್, ಅಕ್ರಮಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಉಪತಹಸೀಲ್ದಾರ್ ರವಿಕುಮಾರ್, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ, ಕಂದಾಯ ಇಲಾಖೆಯ ಪ್ರಮೋದ್ ಕುಮಾರ್, ಗೋಪಾಲ್ ಭಾಗವಹಿಸಿದ್ದರು. ಕಂದಾಯ ಇಲಾಖೆಯ ದಯಾನಂದ ಡಿ.ಟಿ ಕಾರ್ಯಕ್ರಮ ನಿರೂಪಿಸಿದರು.