ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಆಧುನಿಕ ಗ್ರಂಥಾಲಯಗಳ ನಿರ್ವಹಣೆ ಕುರಿತ ರಾಷ್ಟ್ರೀಯ ಸಮ್ಮೇಳನ ಇತ್ತೀಚೆಗೆ ಇಲ್ಲಿನ ಕೆ.ಎಂ.ಸಿ.ಯ ಡಾ.ಟಿ.ಎಂ.ಎ.ಪೈ ಹಾಲ್ ನಲ್ಲಿ ನಡೆಯಿತು. ಮಾಹೆಯ ಮಾಹಿತಿ ತಂತ್ರಜ್ಞಾನ ವಿಭಾಗ ಮತ್ತು ಕೆ.ಎಂ.ಸಿ.ಯ ಗ್ರಂಥಾಲಯ ವಿಭಾಗಗಳು ಈ ಕಾರ್ಯಕ್ರಮ ಆಯೋಜಿಸಿದ್ದವು.ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್ ಮಾತನಾಡಿ, ಕಲಿಕೆ ಮತ್ತು ಸಂಶೋಧನೆಗಾಗಿ ಮಾಹೆಯು ಗ್ರಂಥಾಲಯಗಳಿಗೆ ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಪ್ರಾಮುಖ್ಯತೆ ನೀಡಿದೆ. ಹೆಚ್ಚುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಗ್ರಂಥಾಲಯಗಳು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಆಶಿಸಿದರು.
ಮಾಹೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರವಿರಾಜಎನ್ ಎಸ್. ಮಾತನಾಡಿ, ಶೈಕ್ಷಣಿಕ ಗ್ರಂಥಾಲಯಗಳು ತಾಂತ್ರಿಕ ಪ್ರಗತಿಯಿಂದ ಗಮನಾರ್ಹವಾಗಿ ರೂಪಾಂತರವಾಗುತ್ತಿವೆ. ಜ್ಞಾನದ ಸಾಂಪ್ರದಾಯಿಕ ಭಂಡಾರಗಳಿಂದ, ಅವು ಕ್ರಿಯಾತ್ಮಕ, ತಂತ್ರಜ್ಞಾನ ಚಾಲಿತ ಸ್ಥಳಗಳಾಗಿ ವಿಕಸನಗೊಳ್ಳುತ್ತಿವೆ. ಗ್ರಂಥಾಲಯದ ದಕ್ಷತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಬಳಸುವುದರಿಂದ ಅವುಗಳು ಸಂಶೋಧನೆಗೆ ಮತ್ತು ವಿದ್ಯಾರ್ಥಿಗಳ ಅವಶ್ಯಕತೆಗಳಿಗೆ ಹೆಚ್ಚು ಸ್ಪಂದಿಸುವಂತೆ ಮಾಡುತ್ತದೆ ಎಂದರು.ಕೆಎಂಸಿಯ ಡೀನ್ ಡಾ. ಪದ್ಮರಾಜ ಹೆಗ್ಡೆ, ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ. ಕೆ. ಶಿವಾನಂದ ಭಟ್, ಸಮ್ಮೇಳನದ ನಿರ್ದೇಶಕ ಡಾ. ಸತೀಶ್ ಕನಮಡಿ ಹಾಜರಿದ್ದರು.
ನವದೆಹಲಿಯ ಐಐಟಿಯ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಡಾ.ನಬಿಹಸನ್ ಮುಖ್ಯ ಭಾಷಣ ಮಾಡಿದರು. ಸಮ್ಮೇಳನದಲ್ಲಿ 7 ಆಹ್ವಾನಿತರ ಭಾಷಣಗಳು, 8 ಉತ್ಪನ್ನ ಪ್ರದರ್ಶನಗಳು, ವಿವಿಧ ವಿಷಯಗಳ ಕುರಿತು 4 ತಾಂತ್ರಿಕ ಗೋಷ್ಠಿಗಳು ಮತ್ತು ಶೈಕ್ಷಣಿಕಗ್ರಂಥಾಲಯಗಳ ಭವಿಷ್ಯದ ಕುರಿತು ಗುಂಪು ಚರ್ಚೆ ನಡೆಸಲಾಯಿತು.ಭಾಷಣಕಾರರಾಗಿ ಹಿಮಾಚಲ ಪ್ರದೇಶದ ಧರ್ಮಶಾಲಾದ ಕೇಂದ್ರೀಯ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶಿವರಾಮ ರಾವ್ ಕೆ., ಮಾಹೆಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ ಪ್ರೊಫೆಸರ್ ಡಾ. ಬಾಲಚಂದ್ರ, ತುಮಕೂರು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಮತ್ತುಸಂಶೋಧನಾ ವಿಭಾಗದ ಪ್ರೊಫೆಸರ್ ಡಾ.ಬಿ.ಟಿ. ಸಂಪತ್ ಕುಮಾರ್, ನವದೆಹಲಿಯ ಸಂಸ್ಕೃತಿ ಸಚಿವಾಲಯದ ಇಂದಿರಾಗಾಂಧಿ ನ್ಯಾಷನಲ್ಸೆಂಟರ್ ಫಾರ್ ಆರ್ಟ್ಸ್ ನ ಡೀನ್ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಸಿ ಗೌರ್, ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಂ.ಸಾದಿಕ್ ಬಚ್ಚಾ, ಮಹಾರಾಷ್ಟ್ರ ಸೊಲ್ಹಾಪುರದ ಸ್ಥಾಪಕ ಉಪಗ್ರಂಥಪಾಲಕ ಡಾ.ಜಯದೇವ್ ಬಿ ಕುಂಬಾರ್ ಇದ್ದರು.
ಸಮ್ಮೇಳನದ ಸಂಚಾಲಕ ಡಾ. ಮಹಾಬಲೇಶ್ವರ ರಾವ್ ವಂದಿಸಿದರು. ಮಣಿಪಾಲ ತಂತ್ರಜ್ಞಾನ ಸಂಸ್ಥೆಯ ಮುಖ್ಯ ಗ್ರಂಥಪಾಲಕಿ ಡಾ. ರೇಖಾಡಿ. ಪೈ ನಿರೂಪಿಸಿದರು.