ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎಲ್ಲರನ್ನೂ ವಿಶ್ವಾದಲ್ಲಿಟ್ಟುಕೊಂಡು ಕನ್ನಡದ ತೇರನ್ನು ಎಳೆಯಬೇಕಿದ್ದ ಮಹೇಶ್ ಜೋಶಿ ಎಲ್ಲರನ್ನೂ ಧಿಕ್ಕರಿಸಿ, ಏಕಪಕ್ಷೀಯ ತೀರ್ಮಾನಗಳೊಂದಿಗೆ ಪರಿಷತ್ತಿನಲ್ಲಿ ಆರ್ಥಿಕ ಅವ್ಯವಹಾರ ನಡೆಸಿ ಪ್ರಾಥಮಿಕ ಸದಸ್ಯತ್ವವನ್ನೇ ಕಳೆದುಕೊಂಡು ಪರಿಷತ್ತಿನ ಇತಿಹಾಸದಲ್ಲೇ ದೊಡ್ಡ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದ್ದಾರೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.

ಹಿಂದೆ ಪರಿಷತ್ತಿನ ಅಧ್ಯಕ್ಷರಾಗಿದ್ದವರು ಘನತೆಯಿಂದಲೇ ಮುನ್ನಡೆಸಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಅಧ್ಯಕ್ಷಗಾದಿಗೇರಿದ ಮಹೇಶ್‌ ಜೋಶಿ ಇಂತಹ ಸತ್ಸಂಪ್ರದಾಯಕ್ಕೆ ಎಳ್ಳುನೀರು ಬಿಟ್ಟರು. ಸ್ವಪ್ರತಿಷ್ಠೆಯನ್ನು ಮುಂದೆ ತಂದರು. ಪರಿಷತ್ತು ಅಧಿಕಾರದ ಕೇಂದ್ರವನ್ನಾಗಿಸಿಕೊಂಡು ತಮ್ಮ ವಿರುದ್ಧ ಆರೋಗ್ಯಕರ ಟೀಕೆ ಆಡಿದವರಿಗೂ ಸದಸ್ಯತ್ವ ರದ್ದು ಮಾಡುವ ನೋಟಿಸ್ ನೀಡುತ್ತಾ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದೇ ಅವರ ದೊಡ್ಡ ಸಾಧನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಸ್ವ-ಹಿತಾಸಕ್ತಿಯಂತೆ ಪರಿಷತ್ತನ್ನು ದುರ್ಬಳಕೆ ಮಾಡಿಕೊಂಡು, ಆರ್ಥಿಕ ಅವ್ಯವಹಾರ ಮತ್ತು ಅವ್ಯವಸ್ಥೆಯಲ್ಲಿ ಸ್ವತಃ ತಾವೇ ಸಿಲುಕಿ ಇಂದು ತಮ್ಮ ಸದಸ್ಯತ್ವವನ್ನು ರದ್ದುಗೊಳಿಸುವಂತಹ ಹಂತಕ್ಕೆ ಮುಟ್ಟುವ ಹಾದಿಯಲ್ಲಿ ನಡೆದ ಘಟನಾವಳಿಗಳು ಆರೂವರೆ ಕೋಟಿ ಕನ್ನಡಿಗರ ಮನದಲ್ಲಿ ಅಷ್ಟು ಸುಲಭವಾಗಿ ಅಳಿದುಹೋಗಲಾರವು ಎಂದರು.

ಮಂಡ್ಯದಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಬಂಧ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದ ಪ್ರಾರಂಭದ ಪೂರ್ವಭಾವಿ ಸಭೆ ವೇದಿಕೆಯಾದದ್ದು ಇತಿಹಾಸ ಪುಟಗಳಲ್ಲಿ ದಾಖಲಾಗುವಂತಹದ್ದು. ಇಂತಹದ್ದೊಂದು ತತ್ತ್ವಾದರ್ಶದ ಹೋರಾಟಕ್ಕೆ ಹಿರಿಯ ಸಾಹಿತಿಗಳು, ಸಂಘಟಕರು, ಹೋರಾಟಗಾರರು, ಪರಿಷತ್ತಿನ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಏಕತೆಯಿಂದ ದನಿಗೂಡಿಸಿದ್ದುದರಿಂದ ಇದು ಸಾಧ್ಯವಾಯಿತೆಂಬುದರಲ್ಲಿ ಯಾವ ಅನುಮಾನವಿಲ್ಲ ಎಂದರು.


ಹೋರಾಟಗಾರರ ದನಿಗೆ ಸ್ಪಂದಿಸಿ ವಿಚಾರಣೆಗೆ ಅವಕಾಶ ಕಲ್ಪಿಸಿದ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತಾ, ಇದನ್ನು ಯಾರೊಬ್ಬರ ಗೆಲುವೆಂದು ಭಾವಿಸದೆ ಪರಿಷತ್ತಿನ ಪಾವಿತ್ರ್ಯತೆಯನ್ನು ಹಾಳುಗೆಡಿಸುವ ಕುತ್ಸಿತ ಮನಸ್ಥಿತಿಯವರಿಗೆ ಇದೇ ಫಲ ಸಿಗುತ್ತದೆ ಎಂಬ ಸಂದೇಶ ರವಾನಿಸಿದೆ ಎಂದು ಎಚ್ಚರಿಸಿದರು.

ಸಾಹಿತ್ಯ ಸಮ್ಮೇಳನದ ಸಂಬಂಧ ನೀಡಿರುವ ೨.೫೦ ಕೋಟಿ ರು. ಲೆಕ್ಕವನ್ನೂ ತನಿಖಾಧಿಕಾರಿ ಒಪ್ಪಿಲ್ಲ. ಜೋಶಿ ವಿರುದ್ಧ ೫೦೦ ಪುಟಗಳ ವರದಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಕಾರ್ಯಕಾರಿ ಮಂಡಳಿಯವರು ಜೋಶಿ ಅವರು ಎಸಗಿರುವ ತಪ್ಪುಗಳನ್ನು ವಿರೋಧಿಸದೆ ಸಹಮತ ವ್ಯಕ್ತಪಡಿಸಿದ್ದರೆ ಅವರ ವಿರುದ್ಧವೂ ಕ್ರಮ ಅನಿವಾರ್ಯವಾಗಲಿದೆ ಎಂದರು.

ಜೋಶಿ ಅವರು ಆರ್ಥಿಕ ಅವ್ಯವಹಾರ ನಡೆಸಿ ದುರುಪಯೋಗವಾಗಿರುವ ಹಣ ಪರಿಷತ್ತಿಗೆ ವಾಪಸಾಗಬೇಕು. ಅದಕ್ಕಾಗಿ ಬೆಂಗಳೂರಿನಲ್ಲಿ ಎಲ್ಲಾ ಸಾಹಿತಿಗಳು, ಹೋರಾಟಗಾರರ ಸಭೆ ಕರೆದಿದ್ದು, ಜೋಶಿ ವಿರುದ್ಧದ ಆರೋಪಗಳು ಸಾಬೀತಾಗುವುದು ನಿಶ್ಚಿತವಾಗಿರುವುದರಿಂದ ಜೋಶಿ ದುರುಪಯೋಗ ಮಾಡಿಕೊಂಡಿರುವ ಹಣವನ್ನು ಪರಿಷತ್ತಿಗೆ ವಾಪಸಾತಿ ಮಾಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪ್ರೊ.ಜಿ.ಟಿ.ವೀರಪ್ಪ, ಎಚ್.ಡಿ.ಸೋಮಶೇಖರ್, ವಿ.ಹರ್ಷ ಇದ್ದರು.

ಕರ್ನಾಟಕ ಸಂಘದಿಂದ ತತ್ವಪದಗಳ ತಾತ್ವಿಕ ಸಂಗಮ

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಸಂಘದಿಂದ ತತ್ತ್ವಪದಗಳ ತಾತ್ವಿಕ ಸಂಗಮ ಕಾರ್ಯಕ್ರಮದಡಿ ಜಿಲ್ಲೆಯ ತತ್ವ ಪದಕಾರರಿಗೆ ತರಬೇತಿ ಮತ್ತು ಪ್ರಸ್ತುತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.

ಸ್ಥಳೀಯ ಇತಿಹಾಸ, ಸಂಸ್ಕೃತಿಯನ್ನು ದಾಖಲಿಸುವ ಸಂದರ್ಭದಲ್ಲಿ ದೇಸಿ ಕಲೆಗಳನ್ನು, ದೇಸಿ ಪರಂಪರೆಯ ಜ್ಞಾನವನ್ನು ಅನಕ್ಷರಸ್ಥರ ಪರಂಪರೆಯಲ್ಲಿಯೂ ಹುದುಗಿಹೋಗಿರುವ ತತ್ವಾದರ್ಶಗಳನ್ನು ಪ್ರಚುರಪಡಿಸಿ ಮುಖ್ಯವಾಹಿನಿಗೆ ತರುವುದು ನಮ್ಮ ಕರ್ತವ್ಯವೆಂದು ಭಾವಿಸಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಂಡ್ಯ ತಾಲೂಕನ್ನು ಕೇಂದ್ರೀಕರಿಸಿ ಮೊದಲ ಹತ್ತು ತಂಡಗಳಿಗೆ ಆದ್ಯತೆ ನೀಡಿ ನುರಿತ ಗಾಯಕರ ಮೂಲಕ ಅವರ ಸಾಹಿತ್ಯ ಮತ್ತು ರಾಗದ ಏರು-ಪೇರು ತಿದ್ದುವುದರ ಮುಖಾಂತರ ಸುಸಜ್ಜಿತ ತಂಡವಾಗಿ ರೂಪಿಸಬೇಕಾಗಿದೆ ಎಂದು ಹೇಳಿದರು.

ಪ್ರತಿ ತಂಡಕ್ಕೆ ಮೂರು ದಿನಗಳ ತರಬೇತಿ ನೀಡಿ, ವಿವಿಧ ಅವಧಿಯಲ್ಲಿ ೩೦ ದಿನಗಳ ತರಬೇತಿ ನೀಡಲಾಗುವುದು. ತರಬೇತಿಯ ಸಮಯ ಬೆಳಗ್ಗೆ ೧೧ ರಿಂದ ಸಂಜೆ ೫ ಗಂಟೆಯವರೆಗೆ. ಮಧ್ಯಾಹ್ನದ ಊಟ, ಕಾಫಿ ಉಚಿತವಾಗಿರುತ್ತದೆ. ತರಬೇತಿ ಪಡೆದ ತಂಡಗಳ ಪ್ರಸ್ತುತಿಯನ್ನು ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗುವುದು. ಹೆಚ್ಚಿನ ವಿವರಗಳಿಗೆ ಭವಾನಿ ಲೋಕೇಶ್-೯೮೪೪೬೪೧೦೪೩, ಎಂ.ಕೆಂಪಮ್ಮ-೯೯೦೧೪೨೩೭೦೬ ಹಾಗೂ ಗಾಮನಹಳ್ಳಿ ಸ್ವಾಮಿ-೯೦೩೫೧೧೮೭೮೪ ಅವರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.