ಕನ್ನಡಪ್ರಭ ವಾರ್ತೆ ಹಲಗೂರು
ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳದಿದ್ದರೆ ಆಮ್ಲಜನಕದ ಕೊರತೆಯಿಂದ ಉಸಿರಾಟದ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಮಳವಳ್ಳಿ ಹಿರಿಯ ಸಿವಿಲ್ ನ್ಯಾಯಾಧೀಶ, ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಎಂ.ಮಹೇಂದ್ರ ತಿಳಿಸಿದರು.ಹಾಡ್ಲಿ ಸರ್ಕಲ್ ಸಮೀಪದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ತೆಂಗಿನ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಜೀವಿಗೂ ಆಮ್ಲಜನಕದ ಅವಶ್ಯಕತೆ ಹೆಚ್ಚಾಗಿದೆ. ಆಮ್ಲಜನಕದ ಕೊರತೆಯಿಂದ ಕೋರೋನಾ ವೇಳೆ ಸಾವಿರಾರು ಜನರ ಜೀವಗಳು ಬಲಿಯಾಗಿದೆ. ಆದ್ದರಿಂದ ಪರಿಸರದಲ್ಲಿ ಆಮ್ಲಜನಕದ ಸಮತೋಲನ ಬರಬೇಕು. ಹೀಗಾಗಿ ಹೆಚ್ಚು ಹೆಚ್ಚು ಮರ, ಗಿಡಗಳನ್ನು ನೆಡಬೇಕು ಎಂದು ಕರೆ ನೀಡಿದರು.ಮೊದಲೆಲ್ಲ ಮಳೆ, ಬಿಸಿಲು ಯಾವಾಗ ಬರುತ್ತದೆ ಎಂಬುದು ತಿಳಿದಿತ್ತು. ಆದರೆ, ಈಗ ಎಲ್ಲಾ ವ್ಯತ್ಯಾಸವಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗಿದೆ. ಹೆಚ್ಚು ಗಿಡಮರಗಳನ್ನು ಬೆಳೆಸಿ ವಾತಾವರಣದಲ್ಲಿ ಸಮತೋಲನ ಕಾಪಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾಲೇಜಿನಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳನ್ನು ಸೇರಿಸುವ ನಿಟ್ಟಿನಲ್ಲಿ ಪ್ರಾಂಶುಪಾಲರು ಶ್ರಮಿಸಬೇಕು. ಕಾಲೇಜು ಬಳಿ ಸಾರಿಗೆ ಬಸ್ ನಿಲುಗಡೆ ಸಮಸ್ಯೆ ಕುರಿತು ಗಮನಕ್ಕೆ ತಂದಾಗ ನಾನು ಇಲ್ಲಿ ಬಸ್ ನಿಲ್ಲಿಸುವ ವ್ಯವಸ್ಥೆಗೆ ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರು, ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ನಾಜಿಯಾ ಕೌಸರ್ ಮಾತನಾಡಿ, ಪರಿಸರದ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕು. ವಾತಾವರಣದಲ್ಲಿ ಸಮತೋಲನ ಕಾಪಾಡಲು ಗಿಡಮರಗಳನ್ನು ಹೆಚ್ಚು ಬೆಳೆಸುವಂತೆ ಮನದಟ್ಟು ಮಾಡುವುದು ಅಗತ್ಯ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಶಂಕರ್ ಸ್ವಾಮಿ ಮಾತನಾಡಿ, ಹೆಚ್ಚು ಮರ- ಗಿಡಗಳನ್ನು ಬೆಳೆಸಿದರೆ ಅವು ನಮ್ಮನ್ನು ಕಾಪಾಡುತ್ತವೆ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳಲ್ಲಿ ಕೇಕ್ ಕತ್ತರಿಸಿ ಪಟಾಕಿ ಹೊಡೆದು ವಾತಾವರಣ ಹಾಳು ಮಾಡುವ ಬದಲು ಗಿಡಗಳನ್ನು ನೆಟ್ಟು ಆಚರಿಸಬೇಕು ಎಂದು ಕಿವಿಮಾತು ಹೇಳಿದರು.ಕಾಲೇಜು ವತಿಯಿಂದ ಎಲ್ಲರನ್ನೂ ಸನ್ಮಾನಿಸಿ ಅಭಿನಂದಿಸಲಾಯಿತು. ಪ್ರಭಾರ ಪ್ರಾಂಶುಪಾಲರಾದ ಶಹೀಬ್ ಖಾನ್, ಟಿ.ವಿ.ಶಿವಕುಮಾರ್, ಜಿ.ಆನಂದ, ಕಾಂತಾಮಣಿ ಎಚ್.ಎಸ್. ಆಶಾ ಜಿ.ಎಂ., ಆಶಾ ಎಂ. ಪಲ್ಲವಿ ಹಾಗೂ ಸಿಡಿಸಿ ಉಪಾಧ್ಯಕ್ಷರು ಲಿಂಗರಾಜು ಸೇರಿದಂತೆ ಇತರರು ಇದ್ದರು.