ಸಾರಾಂಶ
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆಕನ್ನಡಪ್ರಭ ವಾರ್ತೆ ಹೊಸದುರ್ಗ
ನರೇಗಾ ಯೋಜನೆಯ ಮಾರ್ಗಸೂಚಿ ಅನ್ವಯವೇ ಕೆಲಸ ನಿರ್ವಹಿಸಬೇಕು ಹಾಗೂ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕಿನ ಹೆಬ್ಬಳ್ಳಿ ಸೇರಿದಂತೆ ವಿವಿಧ ಗ್ರಾಪಂ ಮಂಗಳವಾರ ಭೇಟಿ ನೀಡಿ, ಚಾಲನೆಯಲ್ಲಿರುವ ಮಹಾತ್ಮಾಗಾಂಧಿ ನರೇಗಾ ಯೋಜನೆಯ ಗ್ರಾಮೀಣ ಗೋದಾಮು ಕಟ್ಟಡ ವೀಕ್ಷಣೆ ಹಾಗೂ ಕಾಮಗಾರಿಯ ಕಡತ ಪರಿಶೀಲಿಸಿದರು.
ಹೆಬ್ಬಳ್ಳಿಯಲ್ಲಿರುವ ಗೋದಾಮು ಕಟ್ಟಡವು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಬೇಕು ಎಂದು ನರೇಗಾ ಎಂಜಿನಿಯರ್ ಅವರಿಗೆ ಸೂಚಿಸಿದರು. ನಂತರ ಅದೇ ಗ್ರಾಮದ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು, ಔಷಧಿ ಕೊಠಡಿಗೆ ತೆರಳಿ ಪರಿಶೀಲಿಸಿದರು. ಈ ಕೇಂದ್ರಕ್ಕೆ ಬರುವ ರೋಗಿಗಳಿಗೆ ಆರೋಗ್ಯಕ್ಕೆ ಸಂಬಂಧಿಸಿದ ಉತ್ತಮ ಸಲಹೆ ಮತ್ತು ಔಷಧೋಪಚಾರಗಳನ್ನು ನೀಡಿ ಆರೋಗ್ಯವಂತರನ್ನಾಗಿ ಮಾಡುವುದು ನಿಮ್ಮ ಜವಾಬ್ದಾರಿ ಎಂದು ವೈದ್ಯಾಧಿಕಾರಿಗೆ ಸೂಚಿಸಿದರು.ಸಾಮಾಜಿಕ ಅರಣ್ಯ ವಲಯ ವತಿಯಿಂದ ಕುಂಬಾರಗಟ್ಟೆ ನರ್ಸರಿಯಲ್ಲಿ ನರೇಗಾ ಯೋಜನೆಯಡಿ ನರ್ಸರಿ ಸಸಿಗಳನ್ನು ಬೆಳೆಸಿದ್ದು, ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ನಂತರ ದೇವಿಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನವಾದ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ, ಕಲ್ಯಾಣಿ ಸುತ್ತ-ಮುತ್ತ ಗಿಡ-ಗಂಟೆಗಳಿದ್ದು, ಅವುಗಳನ್ನು ತೆಗೆಸಿ, ಸ್ವಚ್ಛಗೊಳಿಸಿ, ಕಲ್ಯಾಣಿ ಸುತ್ತ-ಮುತ್ತ ಉತ್ತಮ ಪರಿಸರ ಕಾಪಾಡುವಂತೆ ನರೇಗಾ ಸಹಾಯಕ ಇಂಜಿನಿಯರ್ಗೆ ಸೂಚಿಸಿದರು.ಕೊಂಡಾಪುರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಲಾದ ಹೈಟೆಕ್ ಶೌಚಾಲಯ ಮತ್ತು ಅಡುಗೆ ಕೋಣೆ ವೀಕ್ಷಣೆ ಮಾಡಿ, ನಂತರ ಶಾಲಾ ಕೊಠಡಿಗಳಿಗೆ ತೆರಳಿ ಪರಿಶೀಲಿಸಿದರು. ಶಾಲಾ ಆವರಣದಲ್ಲಿರುವ ಆಟದ ಮೈದಾನದಲ್ಲಿ ಶಟಲ್ ಕಾಕ್ ವೀಕ್ಷಿಸಿ, ಶಾಲಾ ಮುಖ್ಯ ಶಿಕ್ಷಕ ಶೇಖರಪ್ಪ ಅವರಿಂದ ಮಾಹಿತಿ ಪಡೆದು, ಶೌಚಾಲಯ ಮತ್ತು ಅಡುಗೆ ಕೋಣೆ ಸಮರ್ಪಕವಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಸದ್ಭಳಕೆ ಮಾಡಿಕೊಳ್ಳುವಂತೆ ಮನವರಿಕೆ ಮಾಡುವಂತೆ ಶಾಲಾ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರಿಗೆ ತಿಳಿಸಿದರು.
ಈ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಬಸನಗೌಡ ಪಾಟೀಲ್, ಹಿರಿಯ ಭೂ ವಿಜ್ಞಾನಿ ಬಸಂತ್, ಹೊಸದುರ್ಗ ತಾಪಂ ಇಒ ಸುನೀಲ್, ಸಹಾಯ ನಿರ್ದೇಶಕ (ನರೇಗಾ) ನಯಾಜ್, ನರೇಗಾ ಯೋಜನೆಯ ಸಂಯೋಜಕ ಸಂತೋಷ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳು , ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.