ಪ್ರವಾಹ ಸ್ಥಿತಿ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಿ

| Published : May 16 2025, 01:51 AM IST

ಪ್ರವಾಹ ಸ್ಥಿತಿ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಬೇಸಿಗೆ ಕಾಲದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಪರಿಸ್ಥಿತಿಯನ್ನು ನಿಭಾಯಿಸಿ ಜೂನ್, ಜುಲೈ ತಿಂಗಳಲ್ಲಿ ಮಳೆಗಾಲ ಬರುತ್ತಿರುವುದರಿಂದ ಈಗಲೇ ಅಗತ್ಯವಿರುವ ಎಲ್ಲ ಏರ್ಪಾಡುಗಳನ್ನು ಮಾಡಿಕೊಳ್ಳಲು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಪ್ರಸಕ್ತ ಬೇಸಿಗೆ ಕಾಲದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಪರಿಸ್ಥಿತಿಯನ್ನು ನಿಭಾಯಿಸಿ ಜೂನ್, ಜುಲೈ ತಿಂಗಳಲ್ಲಿ ಮಳೆಗಾಲ ಬರುತ್ತಿರುವುದರಿಂದ ಈಗಲೇ ಅಗತ್ಯವಿರುವ ಎಲ್ಲ ಏರ್ಪಾಡುಗಳನ್ನು ಮಾಡಿಕೊಳ್ಳಲು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿಯ ಎನ್ ಎಸ್ ಎಫ್ ಕಚೇರಿಯಲ್ಲಿ ಗುರುವಾರ ಕರೆದ ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೂಡಲಗಿ ತಾಲೂಕಿನ ಹೊನಕುಪ್ಪಿ, ಲಕ್ಷ್ಮೇಶ್ವರ ಮತ್ತು ಸಿದ್ಧಾಪುರ ಹಟ್ಟಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆವಿದ್ದು, ಈಗಾಗಲೇ ಅಲ್ಲಿ ಸಾರ್ವಜನಿಕರಿಗೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದನ್ನು ಬಿಟ್ಟರೆ ನಮ್ಮಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಅಷ್ಟೊಂದು ಉದ್ಬವಿಸಿಲ್ಲ. ಆದರೂ ಸ್ಥಾನಿಕ ಮಟ್ಟದಲ್ಲಿ ಇದ್ದುಕೊಂಡು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಸಮಸ್ಯೆಗಳು ಬರದಂತೆ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.ಬೇಸಿಗೆಯು ಇನ್ನೇನು 15 ದಿನದಲ್ಲಿ ಮುಗಿಯಲಿದೆ. ನಂತರ ಮಳೆಗಾಲ ಆರಂಭವಾಗಲಿದೆ. ದೇವರ ದಯೆಯಿಂದ ಮಳೆಯಾಗಬೇಕು. ಉತ್ತಮ ಬೆಳೆ ಬರಬೇಕು. ರೈತ ಸಮೂಹವು ಖುಷಿಯಿಂದ ಬದುಕಬೇಕು. ಜೂನ್-ಜುಲೈ ತಿಂಗಳಲ್ಲಿ ಧಾರಾಕಾರ ಮಳೆಯು ಬಂದರೂ ಬರಬಹುದು. ಲೋಳಸುರ ಸೇತುವೆ ಮೇಲೆ 70ಸಾವಿರ ಕ್ಯುಸೆಕ್‌ ನೀರು ಬಂದರೆ ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಮತ್ತೊಮ್ಮೆ ಸಂಕಟ ಎದುರಾಗಬಹುದು. ಪ್ರವಾಹ ಭೀತಿ ಎದುರಿಸಲು ಈಗಲೇ ಅಧಿಕಾರಿಗಳು ಸಿದ್ಧರಿರಬೇಕು. ಸಂಬಂಧಪಟ್ಟ ಅಧಿಕಾರಿಗಳು ಅಂಥ ಸಂದರ್ಭದಲ್ಲಿ ಯಾವುದೇ ಕುಂಟು ನೆಪ ಹೇಳದೇ ಸಂಭವನೀಯ ಪ್ರವಾಹ ಸ್ಥಿತಿಯನ್ನು ಎದುರಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಈಗಾಗಲೇ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪ್ರಯತ್ನದಿಂದ ಬಿಡಲಾಗಿದ್ದು, ನಿನ್ನೆ ಬುಧವಾರದಿಂದ ಮುಂದಿನ 10 ದಿನಗಳವರೆಗೆ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರನ್ನು ಹರಿಸಲಾಗಿದೆ ಎಂದು ಮಾಹಿತಿ ನೀಡಿದರು.ಗೋಕಾಕ ತಹಸೀಲ್ದಾರ್‌ ಮೋಹನ ಭಸ್ಮೆ, ಮೂಡಲಗಿ ತಹಸೀಲ್ದಾರ್‌ ಶಿವಾನಂದ ಬಬಲಿ, ಗೋಕಾಕ ತಾಪಂ ಇಒ ಪರಶುರಾಮ ಗಸ್ತಿ, ಮೂಡಲಗಿ ಇಒ ಚಿನ್ನಣ್ಣವರ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಘಟಪ್ರಭಾ ಸಿಪಿಐ ಎಚ್.ಡಿ.ಮುಲ್ಲಾ ಸೇರಿದಂತೆ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಎಂಜನೀಯರ್‌, ಪಿಡಿಒ, ಗ್ರಾಮ ಆಡಳಿತ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.