ಕ್ರಿಯಾ ಯೋಜನೆ ರೂಪಿಸಿ ಅನುದಾನ ಬಳಸಿ

| Published : Nov 14 2024, 12:45 AM IST

ಸಾರಾಂಶ

ಪಟ್ಟಣಕ್ಕೆ ಮಂಗಳವಾರ ಬೆಳಗ್ಗೆ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಪಾಲನ್ ದಿಢೀರ್‌ ಭೇಟಿ ನೀಡಿ ಪಟ್ಟಣ ಪಂಚಾಯತಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಹಾಗೂ ವಿವಿಧ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಪಟ್ಟಣಕ್ಕೆ ಮಂಗಳವಾರ ಬೆಳಗ್ಗೆ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಪಾಲನ್ ದಿಢೀರ್‌ ಭೇಟಿ ನೀಡಿ ಪಟ್ಟಣ ಪಂಚಾಯತಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಹಾಗೂ ವಿವಿಧ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದರು.

ಪಟ್ಟಣ ಪಂಚಾಯತಿಗೆ ದಿಢೀರ್‌ ಭೇಟಿ ನೀಡಿದ ಜಿಲ್ಲಾಧಿಕಾರಿ ಪಟ್ಟಣ ಪಂಚಾಯತಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಪಟ್ಟಣ ಪಂಚಾಯತಿಯ ಕೆಲವು ಸಿಬ್ಬಂದಿ ಹಾಜರಿ ಪುಸ್ತಕದಲ್ಲಿ ಸಹಿ ಇಲ್ಲದ ಕಾರಣ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡರು. ಕಚೇರಿಗೆ ಹಾಜರಾದ ತಕ್ಷಣ ಹಾಜರಿ ಪುಸ್ತಕದಲ್ಲಿ ಸಹಿ ಮಾಡಬೇಕೆಂಬ ಪರಿಜ್ಞಾನ ಕೂಡ ಇಲ್ಲ ಅಂದರೆ ಹೇಗೆ?, ಬಯೋಮೆಟ್ರಿಕ್ ಸಿಸ್ಟಮ್ ಈ ಕೂಡಲೇ ಅಡಳವಡಿಸಬೇಕು ಎಂದು ಆದೇಶ ನೀಡಿದರು.

ಪಟ್ಟಣಕ್ಕೆ ಬಂದ ಅಭಿವೃದ್ಧಿ ಅನುದಾನವನ್ನು ಸಮಪರ್ಕವಾಗಿ ಬಳಕೆ ಮಾಡುತ್ತಿಲ್ಲ, ಲಕ್ಷಾಂತರ ರುಪಾಯಿ ಅಭಿವೃದ್ಧಿಗೆ ಬಳಸದೇ ಹಾಗೆ ಬಿಟ್ಟಿದ್ದಿರಿ. ಕೂಡಲೇ ಉಳಿದ ಅನುದಾನದ ಕ್ರಿಯಾ ಯೋಜನೆ ರೂಪಿಸಿ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ಆದೇಶ ನೀಡಿದರು.

ನಂತರ ಅಧ್ಯಕ್ಷ, ಉಪಾಧ್ಯಕ್ಷರ ನೂತನ ಕೊಠಡಿಯ ಕಾಮಗಾರಿ ವೀಕ್ಷಿಸಿದರು. ಬಹುತೇಖ ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರದಲ್ಲೇ ಉದ್ಘಾಟನೆ ಮಾಡಿ ಎಂದು ಸೂಚಿಸಿದರು. ಮೊರಾರ್ಜಿ ಶಾಲೆಯ ಪಕ್ಕದಲ್ಲಿ ವಸತಿ ನಿವೇಶನಕ್ಕಾಗಿ ಪಟ್ಟಣ ಪಂಚಾಯತಿಯವರು ಖರೀದಿಸಿದ 3 ಎಕರೆ ಜಾಗವನ್ನು ವೀಕ್ಷಣೆ ನಡೆಸಿದರು. ಈ ವೇಳೆ ವಸತಿ ನಿವೇಶನಕ್ಕೆ ರಸ್ತೆ ಸಮಸ್ಯೆ ಇದೆ ಜಮೀನು ನೀಡಿದವರು ರಸ್ತೆಯ ಕಡೆ ಒಂದು ಎಕರೆ ಇಟ್ಟುಕೊಂಡು ಹಿಂದೇ 3 ಎಕರೆ ಪ್ರದೇಶ ನೀಡಿದ್ದಾರೆ. ಈ ನಿವೇಶಕ್ಕೆ ರಸ್ತೆಯೇ ಇಲ್ಲ ಎಂದರು.

ಜಮೀನು ಪೂರ್ತಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು ಜಮೀನು ಪಕ್ಕ ಕಾಲುವೆ ರಸ್ತೆ ಇದೆ. ಇದನ್ನು ಕೂಡ ಬಳಸಿಕೊಂಡರೇ ಆಗುತ್ತೇವೆ. ಇದರ ಸಂಪೂರ್ಣ ವರದಿಯನ್ನು ಕೂಡಲೇ ನನಗೆ ನೀಡಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಅಪೂರ್ಣಗೊಂಡ ಅಂಬೇಡ್ಕರ್‌ ವೃತ್ತಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು ಶೀಘ್ರದಲ್ಲೆ ವೃತ್ತ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಆದೇಶ ನೀಡಿದರು.

ಅತಿಕ್ರಮಣ ಸ್ಮಶಾನ ಜಾಗಕ್ಕೆ ಭೇಟಿ:

ಸುಮಾರು 6 ಎಕರೆ ಪ್ರದೇಶದ ಸ್ಮಶಾನ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಯುವ ಜನ ಸೇನೆ ಸಂಘಟಿಕರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ಕೂಡಲೇ ಸ್ಮಶಾನ ಜಾಗಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸ್ಥಳವನ್ನು ಪರಿಶೀಲನೆ ನಡೆಸಿದರು. ಕೂಡಲೇ ಇದರ ಸಂಪೂರ್ಣ ಮ್ಯಾಪ್ ಹಾಗೂ ಅತಿಕ್ರಮ ಮಾಡಿಕೊಂಡವರ ಪಟ್ಟಿ ಸಲ್ಲಿಸಬೇಕು ಎಂದು ಖಡಕ್ಕಾಗಿ ಸೂಚಿಸಿದರು.

ಇದೇ ಜಾಗದಲ್ಲಿ ನಿರ್ಮಿಸಿರುವ ಸಭಾಭವನ ಕಟ್ಟಡವನ್ನು ವೀಕ್ಷಣೆ ಮಾಡಿದರು. ಇದರ ಸುತ್ತ-ಮುತ್ತ ಮಲೀನ ವಾತಾವರಣ ಕಂಡು ಕೂಡಲೇ ಸ್ವಚ್ಛತೆ ಮಾಡುವಂತೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಉದ್ಘಾಟಣೆಯಾದರು ಇದನ್ನು ಬಳಕೆ ಯಾವ ಕಾರಣಕ್ಕೆ ಮಾಡುತ್ತಿಲ್ಲ ಎಂದು ಮುಖ್ಯಾಧಿಕಾರಿಗಳಿಗೆ ಪ್ರಶ್ನಿಸಿದರು. ಕೂಡಲೇ ಇದನ್ನು ಬಳಕೆ ಮಾಡುವ ವ್ಯವಸ್ಥೆ ಮಾಡಿ ಎಂದರು.

ನಾಡ ಕಾರ್ಯಾಲಕ್ಕೆ ಭೇಟಿ:

ನಾಡಕಾರ್ಯಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಆಧಾರ ಕೇಂದ್ರ ತೆರಳಿ ಹೆಚ್ಚಿನ ಹಣ ವಸೂತಿ ಮಾಡುತಿದ್ದಾರೆಯೇ ಎಂದು ಜನರಿಗೆ ಪ್ರಶ್ನಿಸಿದರು, ಅನಗತ್ಯ ಹೆಚ್ಚಿನ ಹಣ ಪಡೆದರೇ ಸೂಕ್ತಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾಡ ಕಾರ್ಯಾಲಯ ಅಲ್ಲಲ್ಲಿ ಸೋರುತ್ತಿದೆ. ಹೊಸ ಕಟ್ಟಡದ ಕ್ರಿಯಾ ಯೋಜನೆಗೆ ಲೋಪೋಪಯೋಗಿ ಇಲಾಖೆಗೆ ಕಳಿಸಿದ್ದೇವೆ ಎಂದು ಉಪತಹಸೀಲ್ದಾರ್‌ ಎನ್.ಬಿ.ದೊರೆ ತಿಳಿಸದರು. ಕೂಡಲೇ ಲೋಕೋಪಯೋಗಿ ಎಇಇ ಅಧಿಕಾರಿಗಳಿಗೆ ಕರೆ ಮಾಡಿದ ಜಿಲ್ಲಾಧಿಕಾರಿಗಳು ಶೀಘ್ರದಲ್ಲೆ ಟೆಂಡರ್ ಪ್ರೋಸೆಸ್ ಪೂರ್ಣಗೊಳಿಸಿ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಿ ಎಂದರು.

ಜಿಲ್ಲಾಧಿಕಾರಿಗಳ ಎದುರೇ ಮಾತಿನ ಚಕಮಕಿ:

ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಡಬ್ಬಾ ಅಂಗಡಿಕಾರರು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಲಕ್ಷಾಂತರ ಹಣ ಕೊಟ್ಟು ಬಾಡಿಗೆ ಪಡೆದು ಅಂಗಡಿಗಳನ್ನು ಹಾಕಿದ್ದೇವೆ. ಅಂಗಡಿಗಳ ಮುಂಭಾಗದಲ್ಲಿ ಡಬ್ಬಾ ಅಂಗಡಿಗಳನ್ನು ಇಟ್ಟಿದ್ದಾರೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಅಂಗಡಿಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವ ಸಂದರ್ಭದಲ್ಲಿ ಅನಧಿಕೃತ ಡಬ್ಬಾ ಅಂಗಡಿಕಾರರು ಹಾಗೂ ಮಳಿಗೆ ಮಾಲೀಕರ ವಿರುದ್ಧ ಮಾತಿನ ಚಕಮಕಿ ನಡೆಯಿತು. ನಮಗೆ ಸೂಕ್ತ ಜಾಗ ನೀಡಿ ನಾವು ಡಬ್ಬಾ ಅಂಗಡಿಗಳನ್ನು ಖಾಲಿ ಮಾಡುತ್ತೇವೆ. ಜಾಗ ಇಲ್ಲದ ಕಾರಣ ನಾವು ಡಬ್ಬಾ ಅಂಗಡಿಗಳನ್ನು ಇಟ್ಟಿದ್ದೇವೆ ಎಂದು ಎರಡು ಗುಂಪುಗಳ ಮಧ್ಯ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಜಿಲ್ಲಾಧಿಕಾರಿಗಳು ಇಂದಿರಾ ಕ್ಯಾಂಟಿನ್ ವೀಕ್ಷಣೆಗೆ ತೆರಳಿದರು. ಇಂದಿರಾ ಕ್ಯಾಂಟಿನ್ ಸುತ್ತ-ಮುತ್ತ ಸ್ವಚ್ಛತೆ ಪಾಕಾಡುವಂತೆ ಮುಖ್ಯಾಧಿಕಾರಿಗೆ ಆದೇಶ ನೀಡಿದರು.

ಈ ವೇಳೆ ಯೋಜನಾ ನಿರ್ದೇಶಕರು ಬಿ.ಎ.ಸೌದಾಗರ, ಎಇಇ ನಾರಾಣಕರ್, ಉಪತಹಸೀಲ್ದಾರ್‌, ಎನ್.ಬಿ.ದೊರೆ, ಸರ್ಕಲ್ ವೆಂಕಟೇಶ ಅಂಬಿಗೇರ, ಪ.ಪಂ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ, ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಳಕಲ್ಲ, ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಸದಸ್ಯರಾದ ಎಸ್.ಬಿ.ಗಂಗನಗೌಡರ, ಅಂಬ್ರಪ್ಪ ಶೀರಿ, ರಮೇಶ ಆಲಕೊಪ್ಪರ ಹಾಗೂ ಇನ್ನಿತರರು ಇದ್ದರು.

12ಎನ್.ಎಲ್ಟಿ1ಪಪಂ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾಧಿಕಾರಿಗಳು.12ಎನ್.ಎಲ್ಟಿ1ಎ ಇಂದಿರಾ ಕ್ಯಾಂಟಿನ್ ಕಾಮಗಾರಿ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಗಳು.12ಎನ್.ಎಲ್ಟಿ1ಬಿ ಸಭಾಭವನ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು.