ಅಂಗನವಾಡಿ ಕೇಂದ್ರಗಳನ್ನು ಹೈಟೆಕ್ ಗೊಳಿಸಿ

| Published : Feb 08 2025, 12:31 AM IST

ಸಾರಾಂಶ

ಪ್ರತಿಯೊಂದು ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ತಳಹದಿಯಾಗಿರುವ ಅಂಗನವಾಡಿ ಕೇಂದ್ರಗಳಿಗೆ ಸಾರ್ವಜನಿಕರ ಸಹಕಾರದಿಂದ ಹೈಟೆಕ್ ಸ್ಪರ್ಶ ನೀಡಲು ಎಲ್ಲಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರಯತ್ನಿಸಬೇಕೆಂದು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಟಪ್ಪ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಪ್ರತಿಯೊಂದು ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ತಳಹದಿಯಾಗಿರುವ ಅಂಗನವಾಡಿ ಕೇಂದ್ರಗಳಿಗೆ ಸಾರ್ವಜನಿಕರ ಸಹಕಾರದಿಂದ ಹೈಟೆಕ್ ಸ್ಪರ್ಶ ನೀಡಲು ಎಲ್ಲಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರಯತ್ನಿಸಬೇಕೆಂದು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಟಪ್ಪ ಸಲಹೆ ನೀಡಿದರು. ತಾಲೂಕಿನ ಸೋಮಲಾಪುರದಲ್ಲಿ ಬಾಣಸಂದ್ರ ಕ್ಲಸ್ಟರ್ ನ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳ ಸಹಯೋಗದಲ್ಲಿ ನಡೆದ ಬಾಲಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ತಾವು ಇಲ್ಲಿಯ ಅಧಿಕಾರಿಯಾಗಿ ಬಂದ ನಂತರ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಹೊಸ ರೂಪ ಕೊಡಲು ಪ್ರಯತ್ನಿಸುತ್ತಿದ್ದೇನೆ. ಪ್ರತಿ ಮಗುವಿನ ಚಟುವಟಿಕೆಗಳಿಗೆ ಕಾರಣವಾಗಿರುವ ಅಂಗನವಾಡಿ ಕೇಂದ್ರಗಳು ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರಬೇಕು. ಅಲ್ಲಿಯ ಪರಿಸರದಿಂದ ಪ್ರಭಾವಿತರಾಗಬೇಕು. ಹಾಗಾಗಿ ಆಯಾ ಅಂಗನವಾಡಿ ಕೇಂದ್ರಗಳು ಇರುವೆಡೆ ಅಲ್ಲಿಯ ಜನರ ಸಹಕಾರ ಪಡೆದು ಅವರು ನೀಡಿದ ಹಣಕ್ಕೆ ಅಥವಾ ವಸ್ತುವಿಗೆ ಗೌರವ ತರುವಂತಹ ಕೆಲಸ ಮಾಡಬೇಕು ಎಂದರು. ತಾಲೂಕಿನಲ್ಲಿ ಈ ಮಹತ್ವಾಕಾಂಕ್ಷೆಯ ಕಾರ್ಯವನ್ನು ಜಾರಿಗೊಳಿಸಲು ಪ್ರಯತ್ನಿಸಲಾಗಿದೆ. ನಮ್ಮ ತಾಲೂಕು ಜಿಲ್ಲೆ ಮತ್ತು ರಾಜ್ಯಕ್ಕೆ ಮಾದರಿ ತಾಲೂಕಾಗಿ ಹೆಸರು ಪಡೆಯಲು ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಸಾರ್ವಜನಿಕರು ಕೈಜೋಡಿಬೇಕೆಂದು ಹೇಳಿದರು.

ಗ್ರಾಮದ ನಿವಾಸಿ ಬಿಇಒ ಸೋಮಶೇಖರ್ ಅವರನ್ನು ಸೋಮಲಾಪುರ ಗ್ರಾಮಸ್ಥರು ಆತ್ಮೀಯವಾಗಿ ಗೌರವಿಸಿದರು. ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಲತಾ ಜಗದೀಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭವ್ಯ ಸುರೇಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ರಾಧ ಚನ್ನಕೇಶವ, ಮಾಜಿ ಸದಸ್ಯರಾದ ಮಹಲಿಂಗಪ್ಪ, ಪಾರ್ವತಮ್ಮ, ಮೇಲ್ವಿಚಾರಕರಾದ ಭಾಗ್ಯಜ್ಯೋತಿ, ಹೇಮಲತಾ, ಮಧುಸೂಧನ್, ಸಂಜೀವಯ್ಯ, ಲಕ್ಷ್ಮೀಕಾಂತ್, ವಸಂತಕುಮಾರಿ, ಆಶಾರಾಣಿ, ಅಂಗನವಾಡಿ ಶಿಕ್ಷಕಿಯರಾದ ಲೀಲಾವತಿ, ಗಿರಿಜಾಮಣಿ, ಎನ್.ಶೋಭಾ, ವಿಜಯಮ್ಮ, ಜ್ಯೋತಿ ಸೇರಿದಂತೆ ಅಂಗನವಾಡಿ ಕೇಂದ್ರದ ಸಹಾಯಕಿಯರು ಭಾಗವಹಿಸಿದ್ದರು.

ಅಂಗನವಾಡಿ ಕೇಂದ್ರದ ಮಕ್ಕಳು ಮತ್ತು ಸರ್ಕಾರಿ ಶಾಲಾ ಮಕ್ಕಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.