-ಡಾ. ದಾಕ್ಷಾಯಿಣಿ ಅವ್ವಾಜಿ ಮಾಹಿತಿ । ಮಹಾಮಾನವ ಕೃತಿ ಬಿಡುಗಡೆ
----ಕನ್ನಡಪ್ರಭ ವಾರ್ತೆ ಕಲಬುರಗಿ ಶ್ರಾವಣ ಮಾಸದ ಅಂಗವಾಗಿ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪ್ರತಿವರ್ಷ ನಡೆವ 40 ದಿನಗಳ ವಾರ್ಷಿಕ ಉತ್ಸವ ಬುಧವಾರ ಆರಂಭವಾಗಲಿದೆ. ಉತ್ಸವದ ಅಂಗವಾಗಿ ಸಾಮಾಜಿಕ ಹಾಗೂ ಧಾರ್ಮಿಕ ವಿಷಯಗಳ ಕುರಿತು ಪ್ರವಚನಗಳು, ವಿಶೇಷ ಉಪನ್ಯಾಸಗಳು ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಕ್ತರು ಶ್ರಾವಣ ಮಾಸದ 30 ದಿನಗಳ ಕಾಲ ನಡೆವ ಧಾರ್ಮಿಕ ಪ್ರವಚನಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶರಣಬಸವ ಕುಲಾಧಿಪತಿ ಡಾ. ದಾಕ್ಷಾಯಿಣಿ ಅವ್ವಾಜಿ ಎಂದು ಭಕ್ತರಲ್ಲಿ ಮನವಿ ಮಾಡಿದ್ದಾರೆ.ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ, ಪ್ರಥಮ ಪುಣ್ಯತಿಥಿ ಹಾಗೂ ಸಂಸ್ಥಾನದ 7ನೇ ಮಹಾದಾಸೋಹ ಪೀಠಾಧಿಪತಿ ದೊಡ್ಡಪ್ಪ ಅಪ್ಪಾಜಿ ಅವರ 43ನೇ ಪುಣ್ಯತಿಥಿ ಅಂಗವಾಗಿ 40 ದಿನಗಳ ಕಾಲ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
ಪ್ರತಿದಿನ ಸಂಜೆ ಒಂದು ಗಂಟೆ ನಡೆವ ಧಾರ್ಮಿಕ ಪ್ರವಚನಕ್ಕೂ ಮುನ್ನ ವಿಶೇಷ ಉಪನ್ಯಾಸಗಳು ನಡೆಯಲಿವೆ ಎಂರು.
ಶರಣಬಸವೇಶ್ವರರ ಜೀವನ ಮತ್ತು ಸಾಧನೆ ಕುರಿತು ಜಿಲ್ಲೆಯ ಸುಂಟನೂರಿನ ಧಾರ್ಮಿಕ ಪ್ರವಚನಕಾರ ಬಂಡಯ್ಯ ಶಾಸ್ತ್ರಿಗಳು ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ 30 ದಿನಗಳ ಕಾಲ ಪ್ರತಿದಿನ ಒಂದು ಗಂಟೆ ಪ್ರವಚನ ನೀಡಲಿದ್ದಾರೆ ಎಂದು ಡಾ. ಅವ್ವಾಜಿ ಹೇಳಿದ್ದಾರೆ.
ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ದೊಡ್ಡಪ್ಪ ಅಪ್ಪಾಜಿ, ಶ್ರಾವಣ ಮಾಸದ ಸ್ಮರಣಾರ್ಥ, ಸಾಂಪ್ರದಾಯಿಕ ಪಾದಪೂಜೆ, ತ್ರಿಕಾಲ ಪೂಜೆ ಹಾಗೂ ವಿಶೇಷ ಪೂಜೆ ನೆರವೇರಿಸಲಿದ್ದಾರೆ.ಪ್ರತಿ ಸೋಮವಾರ ಶರಣಬಸವೇಶ್ವರರ ವಿಶೇಷ ಪಲ್ಲಕ್ಕಿ ಉತ್ಸವದಲ್ಲಿ ಸಾನಿಧ್ಯ ವಹಿಸುವರು. ದಿನಂಪ್ರತಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಮಂಡಳದಿಂದ ವಚನಾಂಜಲಿ ನಡೆಯಲಿದೆ.
ಕಳೆದ 250ಕ್ಕೂ ಹೆಚ್ಚು ವರ್ಷಗಳಿಂದ ಶ್ರಾವಣ ಮಾಸದಲ್ಲಿ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಈ ಬೃಹತ್ ಸಾಮಾಜಿಕ, ಧಾರ್ಮಿಕ ಉತ್ಸವವು ಇದೇ ಮೊದಲ ಬಾರಿಗೆ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರ ನೇತೃತ್ವದಲ್ಲಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ದಾಕ್ಷಾಯಿಣಿ ಅವ್ವಾಜಿ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.ಹಿಂದೂ ಪಂಚಾಂಗದ ಪ್ರಕಾರ ಡಾ. ಅಪ್ಪಾಜಿ ಅವರ ಪ್ರಥಮ ಪುಣ್ಯತಿಥಿಯು ಸೆ.2 ರಂದು ನಡೆಯಲಿದ್ದು, ಅಂದು ವಿವಿಧ ಧಾರ್ಮಿಕ ಮಠಗಳ ಪೀಠಾಧಿಪತಿಗಳು ಭಾಗವಹಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಾ. ಅಪ್ಪಾಜಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಹಲವು ಗಣ್ಯರು ಬರೆದ ಲೇಖನಗಳು ಹಾಗೂ ನೆನಪುಗಳನ್ನು ಒಳಗೊಂಡ, ಡಾ. ನೀಲಾಂಬಿಕಾ ಶೇರಿಕಾರ್ ಅವರು ಸಂಪಾದಿಸಿ ರಚಿಸಿರುವ “ಮಹಾಮಾನವ” ಎಂಬ ಬೃಹತ್ ಕೃತಿಯನ್ನು ಬಿಡುಗಡೆ ಮಾಡಲಾಗುತ್ತಿದೆ.