ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಿ: ನ್ಯಾಯಾಧೀಶೆ ದಿವ್ಯಶ್ರೀ

| Published : Sep 23 2024, 01:24 AM IST / Updated: Sep 23 2024, 01:25 AM IST

ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಿ: ನ್ಯಾಯಾಧೀಶೆ ದಿವ್ಯಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನಿಗೆ ತನ್ನ ಜೀವದ ಮೇಲೆ ಆಸೆಯಿದ್ದರೂ ಆತ್ಮಹತ್ಯೆ ಮಾಡಿಕೊಳ್ಳಲು ಬಡತನ, ನಿರಾಸೆ, ಬದುಕಿನಲ್ಲಿ ನಿರೀಕ್ಷಿತ ಗುರಿ ಸಾಧಿಸಲಾಗಲಿಲ್ಲ ಎಂಬ ಹಲವಾರು ಕಾರಣಗಳು ಕಾರಣವಾಗುತ್ತವೆ.

ಕಾರವಾರ: ನಾವು ಭೂಮಿ ಮೇಲೆ ಜನಿಸಿದ್ದೇವೆ ಎಂದರೆ ಅದಕ್ಕೆ ಒಂದು ಧ್ಯೇಯ ಮತ್ತು ಕಾರಣವಿರುತ್ತದೆ. ಬೇರೆ ಯಾವುದೇ ಜೀವಿಗೆ ಸಿಗದಿರುವ ಸವಲತ್ತು ಮನುಷ್ಯನಿಗೆ ಸಿಕ್ಕಿದೆ, ಅದರ ಉದ್ದೇಶವನ್ನು ಅರಿಯದೆ ಆತ್ಮಹತ್ಯೆಯಂತಹ ತಪ್ಪುಗಳನ್ನು ಮಾಡುತ್ತಿದ್ದೇವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಎಂ. ಹೇಳಿದರು.

ಶುಕ್ರವಾರ ಕ್ರಿಮ್ಸ್ ವಿಜ್ಞಾನ ಸಂಸ್ಥೆಯಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಿಗೆ ತನ್ನ ಜೀವದ ಮೇಲೆ ಆಸೆಯಿದ್ದರೂ ಆತ್ಮಹತ್ಯೆ ಮಾಡಿಕೊಳ್ಳಲು ಬಡತನ, ನಿರಾಸೆ, ಬದುಕಿನಲ್ಲಿ ನಿರೀಕ್ಷಿತ ಗುರಿ ಸಾಧಿಸಲಾಗಲಿಲ್ಲ ಎಂಬ ಹಲವಾರು ಕಾರಣಗಳು ಕಾರಣವಾಗುತ್ತವೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.

ಅತಿಯಾದ ನಿರೀಕ್ಷೆಯಿಂದ ಹೆಚ್ಚಾಗಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಅಕ್ಕಪಕ್ಕದವರು ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಾಗ, ಅವರ ನೋವನ್ನು ಅರಿತು, ಅವರ ಬಗೆಗೆ ಕಾಳಜಿ ವಹಿಸಿ ಮಾತನಾಡಿಸಿ, ಅವರ ಸಮಸ್ಯೆಗಳಿಗೆ ಸಾಂತ್ವನ ಹೇಳುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟುಬಹುದು ಎಂದರು.

ಕ್ರಿಮ್ಸ್ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ವಿಜಯರಾಜ್ ಆತ್ಮಹತ್ಯೆ ತಡೆಗಟುವ ಕುರಿತು ಉಪನ್ಯಾಸ ನೀಡಿ, ಆತ್ಮಹತ್ಯೆ ನಿರೂಪಣೆಯನ್ನು ಬದಲಾಯಿಸುವುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಬಹುತೇಕ ಮಂದಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಸಮಸ್ಯೆಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಆತ್ಮಹತ್ಯೆಗೆ ಪ್ರಯತ್ನಿಸಿಸುವವರು ಮತ್ತು ಆದರ ಬಗ್ಗೆ ಆಲೋಚಿಸುವವರನ್ನು ಗುರುತಿಸಿ ಅವರಿಗೆ ಜಾಗೃತಿ ಮೂಡಿಸಬೇಕು. ಜಗತ್ತಿನಲ್ಲಿ ಪ್ರತಿ 40 ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಮೂರು ಸೆಕೆಂಡ್‌ಗೆ 1 ಆತ್ಮಹತ್ಯೆ ಪ್ರಯತ್ನ ನಡೆಯುತ್ತಿದೆ, ಪ್ರತಿ ನಿಮಿಷಕ್ಕೆ 10 ಆತ್ಮಹತ್ಯೆ ಪ್ರಕರಣಗಳು ಕಂಡುಬರುತ್ತದೆ. ಭಾರತದಲ್ಲಿ ಶೇ. 17ರಷ್ಟು ಮಂದಿ ಆತ್ಮಹತ್ಯೆಯಿಂದ ಸಾವನಪ್ಪುತ್ತಿದ್ದಾರೆ. ಶೇ. 12ರಷ್ಟು ಜನ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ ಎಂದರು.

ವಿಶ್ವ ಆತ್ಮಹತ್ಯೆ ತಡೆ ದಿನದ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಡೀನ್ (ಪ್ರ) ಹಾಗೂ ನಿರ್ದೇಶಕ ಡಾ. ನರೇಶ್ ಪಾವಸ್ಕರ್, ಮನೋವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅಕ್ಷಯ ಪಾಟೀಲ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಶಂಕರ್ ರಾವ್, ಕ್ರಿಮ್ಸ್ ಹಿರಿಯ ತಜ್ಞ ವೈದ್ಯ ಮೋಹನ್ ಬಾಬು ಎಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನೋವೈದ್ಯ ಡಾ. ಸುಹಾಸ್ ಮತ್ತಿತರರು ಇದ್ದರು.

ವೈದ್ಯಕೀಯ ವಿಜ್ಞಾನ ಸಂಸ್ಥೆ ಕಾರವಾರ, ಭಾರತೀಯ ಮನೋವಿಜ್ಞಾನ ಸಂಘ ಕರ್ನಾಟಕ ಶಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.