ಸಾರಾಂಶ
ಕನಕಗಿರಿ: ಜ್ಞಾನವನ್ನು ಗುರುವಾಗಿಸಿಕೊಳ್ಳಬೇಕೇ ಹೊರತು ವ್ಯಕ್ತಿಯನ್ನಲ್ಲ ಎಂದು ಹಿಮಾಲಯನ್ ಯೋಗ ಗುರು ನಿರಂಜನಸ್ವಾಮಿ ಹೇಳಿದರು.ಅವರು ಪಟ್ಟಣದ ರುದ್ರಮುನಿ ಪ್ರೌಢ ಶಾಲೆ ಹಾಗೂ ಚೆನ್ನಶ್ರೀರುದ್ರ ಪಿಯು ಕಾಲೇಜು ಮೈದಾನದಲ್ಲಿ ಶ್ರೀರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದಿಂದ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.ಕ್ರಿಯಾತ್ಮಕ ಕಲಿಕೆಯ ದಿನಗಳಲ್ಲಿ ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಹಿಂದಿನ ಗುರುಕುಲ ಪದ್ಧತಿಯಲ್ಲಿ ಪ್ರತಿ ಹಂತದಲ್ಲಿಯೂ ಸಂಸ್ಕಾರವಿತ್ತು. ಆದರೆ ಈಗ ಸಂಸ್ಕಾರ ಎನ್ನುವುದು ಕಣ್ಮರೆಯಾಗಿದ್ದು, ಪಾಲಕರು, ಪೋಷಕರಿಂದ ಸಂಸ್ಕಾರ ಪಡೆದುಕೊಂಡು, ಸಮಾಜವನ್ನು ಸಂಸ್ಕಾರಯುತವಾಗಿಸಲು ಮುಂದಾಗಬೇಕು ಎಂದರು.ಎಳೆ ವಯಸ್ಸಿನಲ್ಲಿ ಕಲಿಯುವುದಕ್ಕೆ ಹೆಚ್ಚು ಮನಸ್ಸಿರಬೇಕು. ಪರಿಸರ ಸಂರಕ್ಷಣೆ, ಸ್ವಚ್ಛತೆ, ಸಂಸ್ಕೃತಿ, ಪರಂಪರೆಯ ಜತೆಗೆ ಸಾಮಾನ್ಯ ಜ್ಞಾನ ಅರಿಯಬೇಕು. ದಿನ ನಿತ್ಯವೂ ಪ್ರತಿಯೊಬ್ಬರು ಯೋಗ, ಧ್ಯಾನವನ್ನು ರೂಢಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಸದೃಢವಾಗಿಸಿಕೊಳ್ಳಬೇಕೆಂದು ತಿಳಿಸಿದರು.ನಂತರ ಮುಖಂಡ ವಾಗೀಶ ಹಿರೇಮಠ ಮಾತನಾಡಿ, ಹಿಮಾಲಯದಲ್ಲಿ ಸತತ ೬ ವರ್ಷಗಳ ಕಾಲ ಯೋಗ ಸಾಧನೆಗೈದ ನಿರಂಜಶ್ರೀಗಳ ಕಾರ್ಯ ಶ್ಲಾಘನೀಯ. ಶ್ರೀಗಳು ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಯೋಗ ತರಬೇತಿ ನೀಡಿದೆ. ಮುಂದೆ ರಾಜ್ಯಾದ್ಯಂತ ಯೋಗ ತರಬೇತಿ ಜತೆಗೆ ಸಾಮೂಹಿಕ ಭಜನೆ ಕಾರ್ಯಕ್ರಮ ನಡೆಸುತ್ತಿದೆ. ಎಲ್ಲೆಡೆ ವ್ಯಾಪಕ ಸ್ಪಂದನೆ ದೊರೆಯುತ್ತಿದೆ. ಪೂಜ್ಯರ ಅನುಗ್ರಹ ಸಂದೇಶ ನಮ್ಮೆಲ್ಲರಿಗೂ ಸ್ಫೂರ್ತಿ ನೀಡಿದೆ ಎಂದರು.ಪ್ರಮುಖರಾದ ಬಸವರಾಜ ಗುಗ್ಗಳಶೆಟ್ರ, ಪ್ರಶಾಂತ ಪ್ರಭುಶೆಟ್ಟರ, ಶಿಕ್ಷಕರಾದ ರಮೇಶ ಎಲಿಗಾರ, ಶಿವರೆಡ್ಡಿ ಮನ್ನೂರು, ಬಸವರಾಜ ಬಿ., ಹನುಮೇಶ, ಶಶಿಕಲಾ ಹಟ್ಟಿ, ಮಂಗಳಾ ಸಜ್ಜನ, ರವಿಕುಮಾರ ಮೋಹಿತೆ ಇದ್ದರು.