ಕನ್ನಡಪ್ರಭ ವಾರ್ತೆ ಲೋಕಾಪುರ

ಉತ್ತರ ಕರ್ನಾಟಕದ ಹಿರಿಯ ಮುಖಂಡ ಆರ್.ಬಿ. ತಿಮ್ಮಾಪೂರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಶಿವಾನಂದ ಉದಪುಡಿ ಅವರಿಗೆ ವಿಧಾನ ಪರಿಷತ್‌ ಸ್ಥಾನ ನೀಡಬೇಕೆಂದು ಲೋಕಾಪುರ ಭಾಗದ ಕಾಂಗ್ರೆಸ್ ಮುಂಖಂಡರು, ಕಾರ್ಯಕರ್ತರ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ರವಿ ಬೋಳಿಶೆಟ್ಟಿ ಮಾತನಾಡಿ, ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು, ಪಕ್ಷದ ನಿಷ್ಠಾವಂತ ನಾಯಕರಾಗಿ ಹಲವು ವರ್ಷಗಳಿಂದ ಜನಸೇವೆಯಲ್ಲಿ ತೊಡಗಿದ್ದಾರೆ. ಅನುಭವಿ ರಾಜಕಾರಣಿಯಾಗಿದ್ದು, ಪಕ್ಷವನ್ನು ಗ್ರಾಮೀಣ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಬಲಪಡಿಸುವಲ್ಲಿ ತಿಮ್ಮಾಪುರ ಅವರ ಕೊಡುಗೆ ಮಹತ್ವದ್ದಾಗಿದೆ. ರಾಜ್ಯ ಹಾಗೂ ಎಐಸಿಸಿ ವರಿಷ್ಠರು ಆರ್.ಬಿ. ತಿಮ್ಮಾಪುರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಜತೆಗೆ ಪ್ರಬಲ ಖಾತೆಯ ಜವಾಬ್ದಾರಿ ವಹಿಸಬೇಕು ಎಂದು ಆಗ್ರಹಿಸಿದರು.

ಪಿಕೆಪಿಎಸ್ ಮಾಜಿ ಅಧ್ಯಕ್ಷ ಆನಂದ ಹಿರೇಮಠ ಮಾತನಾಡಿ, ಶಿವಾನಂದ ಉದಪುಡಿಯವರು ಮೂರು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಜನಪರ ನಾಯಕರಾಗಿ ಹಾಗೂ ಸಮಾಜ ಸೇವಕರಾಗಿ ನಿರಂತರ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಪಕ್ಷ ಸಂಘಟನೆ, ರೈತ ಹಿತ, ಸಹಕಾರಿ ಕ್ಷೇತ್ರ, ಆರೋಗ್ಯ ಸೇವೆ, ಉದ್ಯೋಗ ಸೃಷ್ಠಿ ಮತ್ತು ಸಾರ್ವಜನಿಕ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರವಾಗಿದೆ. ಇವರಿಗೆ ಎಂಎಲ್‌ಸಿ ನಾಮನಿರ್ದೇಶನ ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲಾ ವಕ್ಫ್ ಬೋರ್ಡ್‌ ಸದಸ್ಯ ಅಬ್ದುಲ್‌ ರಹಿಮಾನ ತೊರಗಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಅಯ್ಯಪ್ಪಗೌಡ ಪಾಟೀಲ, ಮುತ್ತಪ್ಪ ಚೌಧರಿ, ಗೋಪಾಲಗೌಡ ಪಾಟೀಲ, ಗಣಪತಿ ಗಸ್ತಿ, ಕುಮಾರ ಕಾಳಮ್ಮನವರ, ಕುಮಾರ ಶಿರಗುಂಪಿ, ಶಂಕರಗೌಡ ಪಾಟೀಲ, ಗೋಪಾಲ ಲಮಾಣಿ, ದುರ್ಗಣ್ಣ ಭಜಂತ್ರಿ, ಶಬ್ಬೀರ್‌ ಬಾಗವಾನ, ಲೋಕಣ್ಣ ಗಣಾಚಾರಿ, ಸಿದ್ದು ಕಿಲಾರಿ, ವಿಠ್ಠಲ ತುಳಸಿಗೇರಿ, ಮಂಜು ಉಳ್ಳಾಗಡ್ಡಿ, ದಾನು ಪಟೇಲ, ರಿಯಾಜ್‌ ಭಾಗವಾನ, ಪ್ರದೀಪ್‌ ಉಪ್ಪಾರ, ಸಂಜು ಮಾದರ ಸೇರಿ ಹಲವು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದಾರೆ.