ಗೆಲುವು ಹವ್ಯಾಸವಾಗಬೇಕು, ಗೆಲ್ಲುವುದನ್ನೇ ಅಭ್ಯಾಸ ಮಾಡಿಕೊಳ್ಳಬೇಕು. ಆತ್ಮವಿಶ್ವಾಸ, ಛಲ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಕನ್ನಡಪ್ರಭ ವಾರ್ತೆ, ತುಮಕೂರುಗೆಲುವು ಹವ್ಯಾಸವಾಗಬೇಕು, ಗೆಲ್ಲುವುದನ್ನೇ ಅಭ್ಯಾಸ ಮಾಡಿಕೊಳ್ಳಬೇಕು. ಆತ್ಮವಿಶ್ವಾಸ, ಛಲ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.ಶನಿವಾರ ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಗಳು, ಒಂದು ಕೆಲಸವನ್ನು ಹೇಗೆ ಬೇಕಾದರೂ ಮಾಡಿ ಮುಗಿಸಬಹುದು. ಆದರೆ ಅದನ್ನು ಹೀಗೇ ಮಾಡಿ ಮುಗಿಸಬೇಕು ಎಂದು ತಿಳಿದು ಮುಗಿಸುವುದು ಮುಖ್ಯ. ಅಂತಹ ಚಾಣಾಕ್ಷತನ, ಬುದ್ಧಿವಂತಿಕೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು.ಅವಕಾಶಗಳಿಗಾಗಿ ಕಾಯಬಾರದು ಸಿಗುವ ಸಣ್ಣ ಅವಕಾಶವನ್ನೂ ಬಿಡದೆ ಬಳಸಿಕೊಂಡು ಯಶಸ್ವಿಯಾದರೆ ದೊಡ್ಡ ಅವಕಾಶಗಳಿಗೆ ನಾಂದಿಯಾಗುತ್ತದೆ. ಈಗ ನಿಮ್ಮ ಮುಂದಿನ ಗುರಿ ಚೆನ್ನಾಗಿ ಓದಿ ಉತ್ತಮ ಅಂಕ ಪಡೆಯುವುದು. ಈ ಬಾರಿ ಎಸ್‌ಎಸ್‌ಎಸ್‌ಸಿಯಲ್ಲಿ ನೂರಕ್ಕೆ ನೂರು ಅಂಕ ಪಡೆಯಬೇಕು. ಅಂತಹ ಫಲಿತಾಂಶ ಪಡೆದರೆ ಶಾಲೆಯಲ್ಲಿ ಮತ್ತೊಂದು ಕಾರ್ಯಕ್ರಮ ಮಾಡೋಣ ಎಂದರು.ವಿದ್ಯಾರ್ಥಿಗಳು ದಿನದಲ್ಲಿ ಕನಿಷ್ಟ 8 ಗಂಟೆ ಕಾಲ ಟಿ.ವಿ, ಮೊಬೈಲ್‌ನಿಂದ ದೂರ ಉಳಿಯಬೇಕು. ಈ ಬಗ್ಗೆ ವಿದ್ಯಾರ್ಥಿಗಳಿಗೆ ಹೇಗೆ ಹೇಳಿಕೊಡಬೇಕು ಎಂದು ಶಿಕ್ಷಕರು ತಿಳಿಯಬೇಕು. ಶಿಕ್ಷಕರು ತಾವು ಸರಿಯಾದ ಸಿದ್ಧತೆ ಮಾಡಿಕೊಂಡು ಮಕ್ಕಳಿಗೆ ಪಾಠ ಮಾಡಿದರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ದೇಶದ ಜವಾಬ್ದಾರಿಯುತ ಪ್ರಜೆಗಳನ್ನು ರೂಪಿಸಿದ ತೃಪ್ತಿ ನಿಮಗೆ ದೊರೆಯುತ್ತದೆ ಎಂದು ಶುಭಾ ಕಲ್ಯಾಣ್ ಶಿಕ್ಷಕರಿಗೆ ಹೇಳಿದರು.ಈ ವೇಳೆ ಮಾತನಾಡಿದ ಶಾಸಕ ಬಿ.ಸುರೇಶ್‌ಗೌಡ, ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಓದಿದ ಈ ನಾಗವಲ್ಲಿ ಶಾಲೆಯನ್ನು ತಾವು ಹತ್ತು ವರ್ಷಗಳ ಹಿಂದೆಯೇ ದತ್ತು ಪಡೆದಿದ್ದು ದೇಶದಲ್ಲೇ ಮಾದರಿ ಶಾಲೆಯನ್ನಾಗಿ ರೂಪಿಸುವ ಸಂಕಲ್ಪ ಮಾಡಿದ್ದೇನೆ. ಈ ಶಾಲೆಗೆ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ಶಾಲೆ ಎಂಬ ಪ್ರತಿಷ್ಠಿತ ಗೋವಿಂದೇಗೌಡ ಶಿಕ್ಷಣ ಪ್ರಶಸ್ತಿ ದೊರಕಿದೆ ಎಂದು ಹೇಳಿದರು. 1951 ರಲ್ಲಿ ಆಗಿನ ಮೈಸೂರು ಮಹಾರಾಜರು ಈ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದರು. ಆಗಿನ ಈ ಭಾಗದ ಶಾಸಕ ಮುಡಲಗಿರಿಯಪ್ಪನವರು ಶಾಲೆಗೆ ಜಮೀನು ನೀಡಿದರು. ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದಗೌಡರು, ಸೇರಿದಂತೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಶಾಲೆಯ ಚಟುವಟಿಕೆ ಮೆಚ್ಚಿದ್ದಾರೆ. ಮುಂದಿನ ವರ್ಷ ಶಾಲೆಗೆ 75 ವರ್ಷ ತುಂಬುತ್ತದೆ. ದುರಸ್ತಿ ಕಾರ್ಯ ಮುಗಿಸಿ ಎಲ್ಲಾ ಸೌಕರ್ಯಗಳನ್ನು ಒದಗಿಸಿ ನಾಗವಲ್ಲಿ ಶಾಲೆಯನ್ನು ದೇಶದಲ್ಲೇ ಅತ್ಯುತ್ತಮ ಶಾಲೆ ಮಾಡುವ ಆಶಯ ವ್ಯಕ್ತಪಡಿಸಿದರು.

ಡಿಡಿಪಿಐ ರಘುಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ, ಕಾಲೇಜಿನ ಪ್ರಾಚಾರ್ಯ ಸಿದ್ಧರಾಜು, ಎಸ್‌ಡಿಎಂಸಿ ಉಪಾಧ್ಯಕ್ಷ ನಾಗಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಗೌರಮ್ಮ, ಉಪಾಧ್ಯಕ್ಷೆ ಜ್ಯೋತಿ, ಡಯಟ್ ಉಪನ್ಯಾಸಕಿ ಶೈಲಜಾಕುಮಾರಿ, ಗ್ರಾ ಪಂ ಮಾಜಿ ಅಧ್ಯಕ್ಷೆ ಸುಮಿತ್ರಮ್ಮ, ಸದಸ್ಯರಾದ ರುಕ್ಮಿಣಮ್ಮ, ವೆಂಕಟಲಕ್ಷ್ಮಮ್ಮ, ಹೊಳಕಲ್ ಗ್ರಾ.ಪಂ. ಅಧ್ಯಕ್ಷ ಎಚ್.ಎ.ಆಂಜನಪ್ಪ ಅವರೊಂದಿಗೆ ವಿವಿಧ ಮುಖಂಡರು ಭಾಗವಹಿಸಿದ್ದರು.