ಸಾರಾಂಶ
ಸೊರಬ: ಸಮಾಜದ ಸುಧಾರಣೆಗೆ ಶ್ರಮಿಸಿದ ಬುದ್ಧ ಮತ್ತು ಬಸವರನ್ನು ದೇವರನ್ನಾಗಿ ಮಾಡಿದಂತೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ದೇವರನ್ನಾಗಿಸುವುದು ಸಲ್ಲದು. ಬದಲಿಗೆ ಅವರ ವಿಚಾರಧಾರೆಗಳು, ಆದರ್ಶ ಮತ್ತು ಮಾರ್ಗದರ್ಶನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು. ತಾಲೂಕಿನ ಹೊಳೆಮರೂರು ಗ್ರಾಮದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಅಡಿಯಡಿಯಲ್ಲಿ ಸ್ವಾಭಿಮಾನದ ಬದುಕನ್ನು ಕಂಡುಕೊಳ್ಳಬೇಕು. ಸಮಾಜದಲ್ಲಿನ ನಡೆಯುವ ಅನ್ಯಾಯವನ್ನು ಖಂಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಅದು ಅಂಬೇಡ್ಕರ್ ಅವರಿಗೆ ಮಾಡುವ ಅವಮಾನದಂತೆ ಆಗುತ್ತದೆ ಎಂದರು.
ಜಗತ್ತಿನಲ್ಲಿ ಅತಿ ಹೆಚ್ಚು ಪದವಿಗಳನ್ನು ಪಡೆದ ಮಹಾಚೇತನ ಡಾ.ಬಿ.ಆರ್.ಅಂಬೇಡ್ಕರ್ ಆಗಿದ್ದಾರೆ. ಅವರಿಗೆ ವಿಶ್ವವೇ ಗೌರವ ನೀಡುತ್ತದೆ. ಅವರ ಜ್ಞಾನ ಭಂಡಾರವನ್ನು ಕಂಡು ದೇಶದ ಸಂವಿಧಾನವನ್ನು ರಚಿಸುವ ಮಹತ್ಕಾರ್ಯವನ್ನು ನೀಡಲಾಯಿತು. ಸಂವಿಧಾನವನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಇಲ್ಲವಾದಲ್ಲಿ ದಲಿತರು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ದಲಿತರು ಒಗ್ಗಟ್ಟಾಗಬೇಕು ಎಂದರು.ಲೇಖಕಿ ಮಾಧವಿ ಭಂಡಾರಿ ಕೆರೆಕೋಣ ಉಪನ್ಯಾಸ ನೀಡಿದರು. ಸೂಲಗಿತ್ತಿ ಕೆರಿಯಮ್ಮ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಸಂಚಾಲಕ ಸುಭಾಷ್ ಕಾನಡೆ, ಗ್ರಾಪಂ ಮಾಜಿ ಸದಸ್ಯ ಮೋಹನ್ ಕಾನಡೆ, ಕೆರಿಯಮ್ಮ ಗಂಜಪ್ಪ, ಚಂದ್ರಪ್ಪ ಎಸ್.ಸಾಗರ್ಕರ್, ಪರಮೇಶ್ವರ ಆಲಹಳ್ಳಿ, ನಂದನ್ ಬೋರ್ಕ್ರ್, ಎಚ್.ಬಂಗಾರಪ್ಪ, ಪಿ.ವಿ.ಯಂಕಪ್ಪ, ಕೇಶವ ಕಾನಡೆ, ಪ್ರಶಾಂತ್ ನಾಯ್ಕ್, ನಾಗರಾಜ ಶಿರಸಿಕರ್, ಸುಮತಿ, ಶಾರದಾ ವಾಸುದೇವ ಮತ್ತಿತರರಿದ್ದರು.