ಮಲ್ಪೆ: ಕಲ್ಮಾಡಿ ಚರ್ಚಿನ ವೆಲಂಕಣಿ ಮಾತೆಯ ಮೂರ್ತಿ ಮೆರವಣಿಗೆ

| Published : Aug 11 2025, 01:56 AM IST

ಮಲ್ಪೆ: ಕಲ್ಮಾಡಿ ಚರ್ಚಿನ ವೆಲಂಕಣಿ ಮಾತೆಯ ಮೂರ್ತಿ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಮಾಡಿ ಸೇತುವೆಯ ಬಳಿ ಸ್ಟೆಲ್ಲಾ ಮಾರಿಸ್ ಚರ್ಚಿನ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಲ್ಪೆ

ಮೇರಿ ಮಾತೆಯ ಸರಳತೆಯ ಗುಣ ಪ್ರತಿಯೊಬ್ಬರಿಗೂ ಆದರ್ಶವಾಗಿದ್ದು, ಅವರು ನಡೆದ ಹಾದಿಯಲ್ಲಿ ಮುನ್ನಡೆಯೋಣ ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.

ಅವರು ಭಾನುವಾರ ಇಲ್ಲಿನ ಕಲ್ಮಾಡಿ ಸೇತುವೆಯ ಬಳಿ ಸ್ಟೆಲ್ಲಾ ಮಾರಿಸ್ ಚರ್ಚಿನ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು. ಯೇಸುಸ್ವಾಮಿಯ ತಾಯಿ ಮೇರಿ ಮಾತೆ ದೇವರ ವಾಕ್ಯವನ್ನು ಪರಿಪಾಲಿಸಿ ತನ್ನ ಸರಳ, ದೀನತೆಯ ಬದುಕಿನಿಂದ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದರು.ಮೆರವಣಿಗೆಗೆ ಮೊದಲು ಕಲ್ಮಾಡಿ ಸೇತುವೆಯ ಬಳಿಯಲ್ಲಿ ವೆಲಂಕಣಿ ಮಾತೆಯ ಮೂರ್ತಿಯ ಆಶೀರ್ವಚನ ನಡೆಯಿತು. ಇದೇ ವೇಳೆ ಭಾರತೀಯ ಕೆಥೋಲಿಕ್‌ ಯುವ ಸಂಚಾಲನ ಕರ್ನಾಟಕ ಪ್ರಾಂತ ಇದರ ವಾರ್ಷಿಕ ಸಮಾವೇಶದ ಪೂರ್ವಭಾವಿಯಾಗಿ ರಾಜ್ಯಾದ್ಯಂತ ಸಂಚಾರದಲ್ಲಿರುವ ಪವಿತ್ರ ಶಿಲುಬೆಯ ಮೆರವಣಿಗೆ ತೊಟ್ಟಂ ಸಂತ ಅನ್ನಮ್ಮ ಚರ್ಚಿಯ ಐಸಿವೈಎಂ ಸದಸ್ಯರು ಕಲ್ಮಾಡಿ ಚರ್ಚಿನ ಯುವ ಪದಾಧಿಕಾರಿಗಳಿಗೆ ಪವಿತ್ರ ಶಿಲುಬೆಯನ್ನು ಹಸ್ತಾಂತರಿಸಿದರು.ಬಳಿಕ ವೆಲಂಕಣಿ ಮಾತೆಯ ಮೂರ್ತಿ ಹಾಗೂ ಪವಿತ್ರ ಶಿಲುಬೆಯೊಂದಿಗೆ ಚರ್ಚಿಗೆ ಪಾದಯಾತ್ರೆಯ ಮೂಲಕ ತೆರಳಲಾಯಿತು. ಮೆರವಣಿಗೆಯ ಬಳಿಕ ಚರ್ಚಿನಲ್ಲಿ ನೊವೆನಾ ಪ್ರಾರ್ಥನೆ ಮತ್ತು ಪವಿತ್ರ ಬಲಿಪೂಜೆ ನೆರವೇರಿತು.

ಈ ಪುಣ್ಯಕ್ಷೇತ್ರದ ರೆಕ್ಟರ್ ವಂದನೀಯ ಬ್ಯಾಪ್ಟಿಸ್ಟ್ ಮಿನೇಜಸ್, ಯುವ ಆಯೋಗ ಉಡುಪಿ ಧರ್ಮಪ್ರಾಂತ್ಯದ ನಿರ್ದೇಶಕ ವಂದನೀಯ ಸ್ಟೀವನ್ ಫರ್ನಾಂಡಿಸ್ ಚರ್ಚಿನ ಮಹೋತ್ಸವ ಆಚರಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಆ.15ರಂದು ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಬಲಿಪೂಜೆ ಬೆಳಗ್ಗೆ 10.30ಕ್ಕೆ ನಡೆಯಲಿದ್ದು, ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಬಲಿಪೂಜೆಯ ನೇತೃತ್ವ ವಹಿಸಲಿದ್ದಾರೆ.