ಹೊಳೆನರಸೀಪುರ: ಪಟ್ಟಣದ ಪುರಸಭೆ ವ್ಯಾಪ್ತಿಯ ಸೂರನಹಳ್ಳಿ ಸಮೀಪ ಬುದ್ಧಿಮಾತು ಹೇಳಿದ ವ್ಯಕ್ತಿಯ ಮೇಲೆ ಆಕ್ರೋಶಗೊಂಡ ಕಾರಿನ ಚಾಲಕ ಕಾರಿನಿಂದ ನಡೆಸಿದ ಡೆಡ್ಲಿ ಎಟ್ಯಾಕ್ ಪರಿಣಾಮ ಮನು(22) ಎಂಬ ವ್ಯಕ್ತಿ ಸ್ಥಳದಲೇ ಸಾವನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ 11.45 ಸುಮಾರಿನಲ್ಲಿ ನಡೆದಿದೆ.

ಸೂರನಹಳ್ಳಿ ಗ್ರಾಮದ ರಸ್ತೆ ಬದಿ ಮನು, ಅಭಿಷೇಕ, ರಾಕೇಶ್ ಹಾಗೂ ಕುಶಾಲ್, ಪಟ್ಟಣದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಕ್ಕೆ ಆಗಮಿಸಿ, ಸ್ವಗ್ರಾಮದ ರಸ್ತೆ ಬದಿ ಮಾತನಾಡುತ್ತಿದ್ದ ವೇಳೆ ಪಟ್ಟಣದಿಂದ ಕೆ.ಎ.01 ಎಂ.ಎಫ್.2883 ಸಂಖ್ಯೆಯ ಕಾರು ವೇಗದಿಂದ ಚಲಿಸಿದೆ. ಅದನ್ನು ಕಂಡ ಮನು ಮತ್ತು ಗೆಳೆಯರು ನಿಧಾನವಾಗಿ ಚಲಿಸುವಂತೆ ಬುದ್ಧಿಮಾತು ಹೇಳಿದ್ದಾರೆ. ಆದರೆ ಕಾರಿನ ಚಾಲಕ ಬುದ್ಧಿವಾದವನ್ನು ತಪ್ಪಾಗಿ ಆರ್ಥೈಸಿಕೊಂಡು ಮುಂದಕ್ಕೆ ಚಲಿಸುತ್ತಿದ್ದ ಕಾರನ್ನು ತಿರುಗಿಸಿಕೊಂಡು ವೇಗವಾಗಿ ಬಂದು ರಸ್ತೆ ಬದಿ ನಿಂತಿದ್ದ ನಾಲ್ವರ ಮೇಲೆ ನುಗ್ಗಿಸಿದ್ದಾನೆ. ಡಿಕ್ಕಿಯ ರಭಸಕ್ಕೆ ನಾಲ್ವರಲ್ಲಿ ಮನು ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ ಮತ್ತು ಜತೆಗಿದ್ದ ಅಭಿಷೇಕ್, ರಾಕೇಶ್ ಹಾಗೂ ಕುಶಾಲ್ ತೀವ್ರವಾಗಿ ಗಾಯಗೊಂಡಿದ್ದು, ಹಾಸನದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ

ಪರಿಶೀಲನೆ ನಡೆಸಿ, ಅಪಘಾತ ಮಾಡಿದ ಕಾರನ್ನು ವಶಕ್ಕೆ ಪಡೆದಿದ್ದಾರೆ ಮತ್ತು ತಲೆ ಮರೆಸಿಕೊಂಡಿರುವ ಕಾರು ಚಾಲಕ ಪತ್ತೆಗಾಗಿ ಪೋಲಿಸರು ಕ್ರಮಕೈಗೊಂಡಿದ್ದಾರೆ.