ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಪ್ರಭಾರ ಕುಲ ಸಚಿವರ ನೇಮಕ, ವ್ಯಾಪಾಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವೀರಭದ್ರ ಅವರು ನಿಯಮಾನುಸಾರ ಪ್ರಾಥಮಿಕ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಆದೇಶಿಸಿದ್ದಾರೆ.

ಮಂಡ್ಯ ವಿವಿಗೆ ಕಾನೂನು ಬಾಹಿರವಾಗಿ ಪ್ರಭಾರ ಕುಲಪತಿ ಪ್ರೊ.ಶಿವಚಿತ್ತಪ್ಪ ನೇಮಕ, ಹಲವು ಭ್ರಷ್ಟಾಚಾರದ ಬಗ್ಗೆ ಮರಿತಿಬ್ಬೇಗೌಡರು ಇತ್ತೀಚೆಗೆ ಆರೋಪಿಸಿ ಸರ್ಕಾರ ಹಾಗೂ ಸಚಿವರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರು ತನಿಖೆ ನಡೆಸಿ ಹತ್ತು ದಿನದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಕರ್ನಾಟಕ ವಿವಿ ಕಾಯ್ದೆ 2000 ಪ್ರಕಾರ ವಿವಿಯ ಹಿರಿಯ ಡೀನ್ ಅವರನ್ನು ನೇಮಕ ಮಾಡಬೇಕಿತ್ತು. ಜ್ಯೇಷ್ಠತಾ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಪ್ರೊ.ಶಿವಚಿತ್ತಪ್ಪರನ್ನು ಕಾನೂನು ಬಾಹಿರವಾಗಿ ಮಂಡ್ಯ ವಿವಿಗೆ ಪ್ರಭಾರ ಕುಲಪತಿಯಾಗಿ ನೇಮಕ ಮಾಡಲಾಗಿದೆ. ರಾಜಭವನದಲ್ಲಿರುವ ಕೆಲವು ಭ್ರಷ್ಟ ಅಧಿಕಾರಿಗಳು ಇದಕ್ಕೆ ಸಹಕಾರ ನೀಡಿದ್ದಾರೆ.

ಯುಜಿಸಿ ನಿಯಮಾನುಸಾರ ಯಾವುದೇ ವಿವಿ ಸ್ವಂತ ಕಾಯ್ದೆಗಳಿಲ್ಲದೇ ಶೈಕ್ಷಣಿಕ ಚಟುವಟಿಕೆ ನಿರ್ವಹಿಸುವಂತಿಲ್ಲ. ಆದರೂ ವಿವಿ ಆರಂಭಗೊಂಡಾಗಿನಿಂದಲೂ ಯಾವುದೇ ಕಾಯ್ದೆ ಮಾಡಿಕೊಂಡಿಲ್ಲ. ಕಾಯ್ದೆಗಳು ರಾಜ್ಯಪಾಲರು ಮತ್ತು ರಾಜ್ಯಸರ್ಕಾರದಿಂದ ಅನುಮೋದನೆಗೊಂಡಿರಬೇಕು. ಕಾಯ್ದೆ ರಚಿಸದೇ ಮೈಸೂರು ವಿವಿ ಕಾಯ್ದೆಗಳನ್ನೇ 7 ವರ್ಷದಿಂದ ಅನುಸರಿಸಿಕೊಂಡು ಬರಲಾಗಿದೆ. ವಿವಿಯಿಂದ ಪ್ರದಾನ ಮಾಡಿರುವ ಪದವಿ, ವಿವಿ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಿಗೆ ಹೊಸ ಕೋರ್ಸ್ ಗೆ ಅನುಮತಿ, ಸಂಶೋಧನಾ ಕೇಂದ್ರ ಸ್ಥಾಪನೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ನೇಮಕ, ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸುವುದಾಗಿ ಕಾನೂನುಬಾಹಿರವಾಗಿ ನಡೆಸಲಾಗಿದೆ.


ಸ್ವಂತ ಕಾಯ್ದೆಗಳು ಇಲ್ಲದಿದ್ದರೂ ವಿವಿ ದ್ವಾರ ಬಾಗಿಲು ನಿರ್ಮಾಣಕ್ಕೆ 3 ಕೋಟಿ ರೂ ವ್ಯಯಿಸಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಎಂಸಿಎ ಮತ್ತು ಎಂಬಿಎ ಕೋರ್ಸ್ ಗಳನ್ನು ಆರಂಭಿಸದಿದ್ದರೂ ಒಂದು ವರ್ಷದ ಹಿಂದೆಯೇ 22 ಲಕ್ಷ ರೂ ಮೌಲ್ಯದ

ಪುಸ್ತಕಗಳನ್ನು ಖರೀದಿ ಮಾಡಿದ್ದಾರೆ. ಇದಲ್ಲದೆ ಗ್ರಂಥಾಲಯಕ್ಕೆ 40 ಲಕ್ಷ ರು ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಪುಸ್ತಕದ ಮುಖ ಬೆಲೆಗಿಂತ ದುಪ್ಪಟ್ಟು ದರದ ಬಿಲ್ ಹಾಕಲಾಗಿದೆ. ಲಕ್ಷಾಂತರ ರೂ ಕೊಟ್ಟು ಕಂಪ್ಯೂಟರ್ ಪರಿಕರ ಖರೀದಿಸಿ

ಕೊಠಡಿಯಲ್ಲಿ ದಾಸ್ತಾನು ಮಾಡಿಕೊಂಡಿದ್ದಾರೆ. ಪಾರದರ್ಶಕ ನಿಯಮ ಪಾಲಿಸದೇ ವಿದ್ಯಾರ್ಥಿಗಳಿಂದ ಬಂದ ಶುಲ್ಕದ ಹಣದಿಂದ ಬೇಕಾಬಿಟ್ಟಿಯಾಗಿ ಖರೀದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ವಿವಿಗೆ ಸಂಬಂಧಿಸಿದಂತೆ ಟೆಂಡರ್ ರಹಿತರವಾಗಿ ಹೊರಗುತ್ತಿಗೆ ಆಧಾರದಲ್ಲಿ ಕಾವಲುಗಾರರು ಮತ್ತು ಇತರೆ ಸಿಬ್ಬಂದಿ ನೇಮಕಾತಿ, ಕೆಲಸ ಮಾಡುವವರ ಸಂಖ್ಯೆ 30 ನೌಕರರು. ಆದರೆ, 50 ನೌಕರರ ಹೆಸರಿನಲ್ಲಿ ವೇತನ ಪಾವತಿ, ಮಂಡ್ಯ ವಿವಿಯಲ್ಲಿ ಪಿಎಚ್.ಡಿ ಪದವಿಗೆ ಸಂಬಂಧಿಸಿದಂತೆ ಕೆಲ ಲೋಪ, ಯುಜಿಸಿ ನಿಯಮಾವಳಿ ಪ್ರಕಾರ ಅರ್ಹತೆ ಇಲ್ಲದಿದ್ದರೂ ವಿವಿ ಸಂಯೋಜಿತ ಕಾಲೇಜಿಗೆ ಸಂಶೋಧನಾ ಕೇಂದ್ರ ನೀಡಿದ್ದಾರೆ. ಪಿಎಚ್.ಡಿ ಮಾರ್ಗದರ್ಶಕರ ನೇಮಕ ಮಾಡುವಾಗ ನಿಯಮ ಪಾಲನೆ ಮಾಡಿಲ್ಲ ಎಂದು ಮರಿತಿಬ್ಬೇಗೌಡರು ಆರೋಪಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಉನ್ನತ ಶಿಕ್ಷಣ ಇಲಾಖೆ, ಆರೋಪಕ್ಕೆ ಸಂಬಂಧಿಸಿದಂತೆ ವ್ಯವಹಾರಗಳು ಕಾನೂನು ರಿತ್ಯವೋ ಅಥವಾ ಕಾನೂನುಬಾಹಿರವೋ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.ತನಿಖೆಗೆ ಒತ್ತಾಯಿಸಿ ಸುದ್ದಿಗೋಷ್ಠಿ ಎಚ್ಚರಿಕೆ

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಮರಿತಿಬ್ಬೇಗೌಡರು, ಮಂಡ್ಯ ವಿವಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಒತ್ತಾಯಿಸಿ ಉನ್ನತ ಶಿಕ್ಷಣ ಸಚಿವರು ಮತ್ತು ಕಾರ್ಯದರ್ಶಿಗೆ ಆರು ಬಾರಿ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ಹೊರ ಹಾಕಿ ರಾಜ್ಯಪಾಲರಿಗೂ ಈ ಬಗ್ಗೆ ಪತ್ರ ಬರೆಯುತ್ತೇನೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಗತ್ಯ ಬಿದ್ದರೆ ಕಾನೂನು ಹೋರಾಟ ನಡೆಸುತ್ತೇನೆ. ಜತೆಗೆ ಲೋಕಾಯುಕ್ತರಿಗೂ ದೂರು ಕೊಡುತ್ತೇನೆ ಎಂದು ಎಚ್ಚರಿಸಿ ಮೇ 5ರಂದು ರಾಜ್ಯಪಾಲರು, ಮುಖ್ಯಮಂತ್ರಿ, ಉನ್ನತ ಶಿಕ್ಷಣ ಇಲಾಖೆಗೆ ಮತ್ತೊಮ್ಮೆ ದೂರು ನೀಡಿದ್ದರು.