ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ರಾಜ್ಯಾದ್ಯಂತ ಬಾಲ್ಯವಿವಾಹ ತಡೆಗೆ ಹಲವಾರು ಕ್ರಮಕೈಗೊಂಡಿದ್ದರೂ ಸಹ ಅವುಗಳನ್ನು ನಿಯಂತ್ರಣ ಮಾಡುವಲ್ಲಿ ಸಾಧ್ಯವಾಗದೆ ಇರುವುದು ಅಂಕಿ-ಸಂಖ್ಯೆಯಿಂದ ಬೆಳಕಿಗೆ ಬಂದಿದೆ. ಹೀಗಾಗಿ, ಸರ್ಕಾರ ಜಿಲ್ಲಾಮಟ್ಟದ ಸಭೆಯಲ್ಲಿ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಈ ಕುರಿತು ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಸುಪ್ರೀಂಕೋರ್ಟ್ ರಿಟ್ ಪಿಟೇಶನ್ ಪ್ರಕರಣದ 2024 ಅ. 10ರಂದು ಆಗಿರುವ ಆದೇಶದಂತೆ ರಾಜ್ಯಾದ್ಯಂತ ಬಾಲ್ಯವಿವಾಹ ತಡೆಯುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಸಮಿತಿಯು ಹೆಚ್ಚು ಜಾಗೃತಿವಾಗಿ ಕಾರ್ಯನಿರ್ವಹಿಸಬೇಕು ಮತ್ತು ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.ಎಷ್ಟು ಬಾಲ್ಯ ವಿವಾಹ?
ರಾಜ್ಯಾದ್ಯಂತ 2020ರಿಂದ 2024 ಡಿಸೆಂಬರ್ ವರೆಗೆ 13045 ಬಾಲ್ಯವಿವಾಹ ಪ್ರಕರಣದ ದೂರು ಸಲ್ಲಿಕೆಯಾಗಿದ್ದು, ಇದರಲ್ಲಿ 10,857 ಬಾಲ್ಯವಿವಾಹ ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆದರೆ, ಇದನ್ನು ಮೀರಿಯೂ 2188 ಬಾಲ್ಯವಿವಾಹ ಪ್ರಕರಣ ನಡೆದಿವೆ. ಇದರಲ್ಲಿ 1945 ಎಫ್ಐಆರ್ ದಾಖಲಿಸಲಾಗಿದೆ. ಇದರ ಹೊರತಾಗಿಯೂ 243 ದೂರು ದಾಖಲು ಆಗಿಯೇ ಇಲ್ಲ. ಹೀಗೆ, ಬಾಲ್ಯವಿವಾಹ ಪ್ರಕರಣಗಳು ನಡೆಯುತ್ತಲೇ ಇದ್ದರೂ ಸಹ ಅವುಗಳನ್ನು ನಿಯಂತ್ರಣ ಮಾಡುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಹೀಗಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೋರಡಿಸಿ ಜಿಲ್ಲಾ ಸಮಿತಿಯು ಹೆಚ್ಚು ಜಾಗೃತವಾಗಬೇಕು ಮತ್ತು ಬಾಲ್ಯವಿವಾಹ ಪ್ರಕರಣಗಳು ಆಗದಂತೆ ನೋಡಿಕೊಳ್ಳಬೇಕು ಎನ್ನುವ ಸಂದೇಶ ನೀಡಿದ್ದಾರೆ.ದೂರು ದಾಖಲಿಸಲು ಹಿಂದೇಟು:
ದೂರು ಸ್ವೀಕಾರ ಮತ್ತು ಎಫ್ಐಆರ್ ದಾಖಲಿಸಿದ ಸಂಖ್ಯೆ ಅಷ್ಟೇ ಆಗಿದ್ದು, ಬಾಲ್ಯವಿವಾಹದ ವಿರುದ್ಧ ದೂರು ದಾಖಲಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಬಾಲ್ಯವಿವಾಹ ಪ್ರಕರಣದಲ್ಲಿ ಸ್ಥಳೀಯವಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಮಕ್ಕಳ ರಕ್ಷಣಾ ಘಟಕ ಸೇರಿದಂತೆ ಹಲವು ಅಧಿಕಾರಿಗಳಿಗೆ ದೂರು ದಾಖಲಿಸಲು ಅಧಿಕಾರ ಇದೆಯಾದರೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.ಬಹುತೇಕ ಜಿಲ್ಲೆಯಲ್ಲಿಯೂ ಬಾಲ್ಯವಿವಾಹ ಪ್ರಕರಣಗಳು ವರದಿಯಾಗುತ್ತಿವೆ. ಮಕ್ಕಳ ಸಹಾಯವಾಣಿಗೆ ಸಾಕಷ್ಟು ದೂರು ಬರುತ್ತಿರುವುದರಿಂದ ಎಲ್ಲ ಪ್ರಕರಣಗಳಿಗೂ ಸ್ಪಂದಿಸಲು ಆಗುತ್ತಿಲ್ಲ ಎನ್ನುವುದು ಅಧಿಕಾರಿಗಳ ವಿವರಣೆಯಾಗಿದೆ. ಹೀಗಾಗಿಯೇ ಬಾಲ್ಯವಿವಾಹ ಪ್ರಕರಣಗಳು ಕಟ್ಟುನಿಟ್ಟಿನ ಕ್ರಮದ ನಡುವೆಯೂ ನಡೆಯುತ್ತಿವೆ ಎನ್ನುತ್ತಾರೆ ಮಕ್ಕಳ ರಕ್ಷಣಾ ಸಮಿತಿ ಕಾರ್ಯಕರ್ತರು.ಬಾಲ್ಯವಿವಾಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಬರುವ ದೂರುಗಳಿಗೆ ಸ್ಪಂದಿಸಿ, ಕ್ರಮವಹಿಸುವ ಅಗತ್ಯವಿದೆ ಎಂದು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಸದಸ್ಯ ಹೇಳಿದರು.