ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ವತಿಯಿಂದ ಯೂತ್ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಮತ್ತು ನಿಟ್ಟೆ ಪರಿಗಣಿತ ವಿ.ವಿ. ಸಹಯೋಗದಲ್ಲಿ ನಗರದ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ಮಂಗಳವಾರ ವಿಶ್ವ ಆರೋಗ್ಯ ದಿನ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕೆಎಂಸಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ ತಜ್ಞೆ ಡಾ. ಶ್ರದ್ಧಾ ಶೆಟ್ಟಿ ಮಾತನಾಡಿ, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆ ಕೂಡ ಆರಂಭಿಕ ಹಂತದಲ್ಲೇ ಪತ್ತೆಯಾದರೆ ಪರಿಣಾಮಕಾರಿ ಚಿಕಿತ್ಸೆ ನೀಡಿ ಜೀವ ಉಳಿಸಬಹುದು. ಮುಂಜಾಗ್ರತಾ ಕ್ರಮ ಹಾಗೂ ನಿಯಮಿತ ತಪಾಸಣೆ ರೋಗ ತಡೆಗಟ್ಟುವ ಅತ್ಯುತ್ತಮ ಮಾರ್ಗವಾಗಿದೆ.

ಆರೋಗ್ಯ ರಕ್ಷಣೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದರು.ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ರೆಡ್‌ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಬಿ. ಸಚ್ಚಿದಾನಂದ ರೈ, ಖಜಾಂಜಿ ಗುರುದತ್ ನಾಯಕ್, ನಿರ್ದೇಶಕರಾದ ಡಾ. ಸತೀಶ್ ರಾವ್, ಪಿ.ಬಿ. ಹರೀಶ್ ರೈ, ರಾಘವೇಂದ್ರ ರಾವ್, ನಿಟ್ಟೆ ಪರಿಗಣಿತ ವಿ.ವಿ. ನೋಡಲ್ ಅಧಿಕಾರಿ ಡಾ. ಶಂತನು ಭಾಗವಹಿಸಿದ್ದರು.

ಯೂತ್ ರೆಡ್‌ಕ್ರಾಸ್ ಯೋಜನಾಧಿಕಾರಿಗಳಾದ ಸೈಂಟ್ ಅಲೋಶಿಯಸ್ ಕಾಲೇಜಿನ ಇಮ್ತಿಯಾಜ್ ಆಲಿ, ಬೆಸೆಂಟ್ ಮಹಿಳಾ ಕಾಲೇಜಿನ ದೀಕ್ಷಿತಾ, ಸೈಂಟ್ ಆಗ್ನೆಸ್ ಕಾಲೇಜಿನ ನಿಮಿತಾ.ಕೆ. ಮತ್ತು ತೃಷಾ ಕಾಲೇಜಿನ ಶಿಲ್ಪಾ ಶೆಟ್ಟಿ ಇದ್ದರು. ಮಂಗಳೂರು ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್. ಸ್ವಾಗತಿಸಿದರು. ರೆಡ್‌ಕ್ರಾಸ್ ಕಾರ್‍ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ವಂದಿಸಿದರು. ಯೂತ್ ರೆಡ್‌ಕ್ರಾಸ್ ಉಪ ಸಮಿತಿ ನಿರ್ದೇಶಕಿ ಡಾ. ಸುಮನ ಬಿ. ನಿರೂಪಿಸಿದರು.ಸ್ಪರ್ಧಾ ವಿಜೇತರು: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ ರೀಲ್ಸ್ ಸ್ಪರ್ಧೆಯಲ್ಲಿ ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ತಂಡ ಪ್ರಥಮ, ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ತಂಡ ದ್ವಿತೀಯ ಹಾಗೂ ಮಿಲಾಗ್ರಿಸ್ ಪದವಿ ಕಾಲೇಜು ತಂಡ ತೃತೀಯ ಸ್ಥಾನ ಪಡೆಯಿತು. ಪೋಸ್ಟರ್ ತಯಾರಿ ಸ್ಪರ್ಧೆಯಲ್ಲಿ ಹಿಬಾ ಪರ್ವಿನ್, ಯೇನೆಪೋಯ ಮೆಡಿಕಲ್ ಕಾಲೇಜು (ಪ್ರಥಮ), ಆಯಿಶಾ ಸಫಾ, ಯೇನೆಪೋಯ ಮೆಡಿಕಲ್ ಕಾಲೇಜು (ದ್ವಿತೀಯ) ಹಾಗೂ ಮೈನಾ ಸಮಂತ, ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ (ತೃತೀಯ) ಸ್ಥಾನ ಪಡೆದರು.