ಮಂಗಳೂರು: ಪ್ರವಾಸಿ ವಾಹನಗಳಿಗೆ ‘ಪ್ಯಾನಿಕ್‌ ಬಟನ್‌’ ಸಾಧನ ಅಳವಡಿಸಲು ರಾಜ್ಯ ಸರ್ಕಾರ ಕಳೆದ ವರ್ಷ ತರಾತುರಿಯಲ್ಲಿ ಆದೇಶ ಹೊರಡಿಸಿದೆ. ಈ ಸಾಧನಕ್ಕೆ ಕೇರಳ ರಾಜ್ಯಕ್ಕಿಂತ ಹಲವು ಪಟ್ಟು ದರವನ್ನು ಕರ್ನಾಟಕದಲ್ಲಿ ನಿಗದಿಪಡಿಸಿದ್ದು, ಭಾರಿ ಅವ್ಯವಹಾರ ನಡೆದಿದೆ ಎಂದು ದ.ಕ. ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ ಎಸೋಸಿಯೇಶನ್‌ ಅಧ್ಯಕ್ಷ ಆನಂದ ಕೆ. ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಕರಾವಳಿ ಮಾತ್ರವಲ್ಲ, ಇತರ ಜಿಲ್ಲೆಗಳಲ್ಲೂ ಅನಿರ್ದಿಷ್ಟ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಚ್ಚರಿಸಿದರು.ದುಬಾರಿ ದರ:

ನಿರ್ಭಯಾ ಪ್ರಕರಣದ ಬಳಿಕ ಪ್ರಯಾಣಿಕರ ಸುರಕ್ಷತೆಗಾಗಿ ಪ್ರವಾಸಿ ವಾಹನಗಳಿಗೆ ಪ್ಯಾನಿಕ್‌ ಬಟನ್‌ ಅಳವಡಿಸಲು ಕೇಂದ್ರ ಸರ್ಕಾರ ಆದೇಶಿಸಿತ್ತು. ಆದರೆ ಬಹುತೇಕ ರಾಜ್ಯಗಳಲ್ಲಿ ಅಳವಡಿಸದ ಈ ಸಾಧನವನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ಜಾರಿಗೊಳಿಸಿದೆ. ಕೇರಳದಲ್ಲಿ ಈ ಸಾಧನದ ಮೂಲ ಬೆಲೆ 3,000 ರು.ನಿಂದ 4000 ರು.ವರೆಗೆ ಮಾತ್ರವೇ ಇದ್ದರೆ, ಕರ್ನಾಟಕದಲ್ಲಿ 8,250 ರು.ಗೆ ಮಾರಾಟ ಮಾಡುತ್ತೇವೆಂದು ಉಚ್ಚ ನ್ಯಾಯಾಲಯಕ್ಕೆ ರಾಜ್ಯ ಸಾರಿಗೆ ಇಲಾಖೆ ತಿಳಿಸಿದೆ. ಅಲ್ಲದೆ, ಅದಕ್ಕಾಗಿ 12 ಕಂಪೆನಿಗಳನ್ನೂ ಆಯ್ಕೆ ಮಾಡಿದೆ. ಆದರೆ ಈ ಕಂಪೆನಿಗಳು 13,500 ರು.ನಿಂದ 16,000 ರು. ರು.ವರೆಗೆ ಬೆಲೆ ನಿಗದಿ ಮಾಡಿ ಬಿಲ್ ನೀಡಲು ನಿರಾಕರಿಸುತ್ತಿವೆ. ಇದನ್ನು ಅಳವಡಿಸದಿದ್ದರೆ ವಾಹನಕ್ಕೆ ಎಫ್‌ಸಿ ನಿರಾಕರಿಸಲಾಗುತ್ತಿದೆ. ಇದು ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಚಾಲಕರಿಗೆ ತೀವ್ರ ಹೊರೆಯಾಗಿದೆ ಎಂದು ಆನಂದ ಕೆ. ಹೇಳಿದರು.ನಿರುಪಯುಕ್ತ ಸಾಧನ: ಪ್ಯಾನಿಕ್‌ ಬಟನ್‌ ಸಾಧನ ರಾಜ್ಯದಲ್ಲಿ ಸಂಪೂರ್ಣ ನಿರುಪಯುಕ್ತವಾಗಿದೆ. ಪ್ಯಾನಿಕ್‌ ಬಟನ್‌ ಒತ್ತಿದ ಕೂಡಲೆ ಸಂಬಂಧಿಸಿದ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಮಾಹಿತಿ ಹೋಗಬೇಕು. ಆಗ ಆ ಪ್ರವಾಸಿ ವಾಹನ ಎಲ್ಲಿದೆ, ಅದರ ಚಾಲಕನ ಫೋನ್‌ ಸಂಖ್ಯೆ ಎಲ್ಲವನ್ನೂ ಟ್ರ್ಯಾಕ್‌ ಮಾಡಿ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ಈ ವ್ಯವಸ್ಥೆ ರೂಪಿಸಲಾಗಿತ್ತು. ಆದರೆ ರಾಜ್ಯದಲ್ಲಿ ಈಗಾಗಲೇ ಅಳವಡಿಸಿರುವ ಪ್ರವಾಸಿಗಳಲ್ಲಿನ ಪ್ಯಾನಿಕ್‌ ಬಟನ್‌ ಒತ್ತಿದರೆ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ತಲುಪುವ ಯಾವುದೇ ವ್ಯವಸ್ಥೆ ಇಲ್ಲ. ಸಾವಿರಾರು ರು. ಇದಕ್ಕೆ ವ್ಯಯಿಸಿ ವ್ಯವಸ್ಥಯೇ ಸರಿಯಿಲ್ಲದಿದ್ದರೆ ಉಪಯೋಗವೇನು ಎಂದು ಪ್ರಶ್ನಿಸಿದರು.ಅಲ್ಲದೆ, ಪ್ಯಾನಿಕ್‌ ಬಟನ್‌ ಸಾಧನದ ರಿಚಾರ್ಜ್‌ಗೆ ರಾಜ್ಯ ಸಾರಿಗೆ ಇಲಾಖೆ 1800 ರು. ನಿಗದಿಪಡಿಸಿದ್ದರೂ 3,800 ರು. ವಸೂಲಿ ಮಾಡಲಾಗುತ್ತಿದೆ. ಇದರಿಂದ ಟ್ಯಾಕ್ಸಿ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಹೈಕೋರ್ಟ್‌ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಆನಂದ ಕೆ. ತಿಳಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್‌, ಕೋಶಾಧಿಕಾರಿ ಸುರೇಶ್‌ ಸಾಲಿಯಾನ್‌, ಪ್ರಮುಖರಾದ ಹರೀಶ್‌ ಶೆಟ್ಟಿ, ರಾಜೇಶ್‌, ನಾಗೇಶ್‌, ಶುಭಕರ ಶೆಟ್ಟಿ ಇದ್ದರು.