ಮಂಗಳೂರು: ಮಂಗಳೂರಿನ ಎಂ.ಸಿ.ಸಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಕ್ರೀಡೆ, ಕಲೆ ಹಾಗೂ ಇತರ ಕ್ಷೇತ್ರಗಳಲ್ಲಿ ಸಾಧನೆಗೈದ 65 ವಿಶೇಷ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಗರದ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಎಂ.ಸಿ.ಸಿ ಬ್ಯಾಂಕ್‌ ಅಧ್ಯಕ್ಷ ಅನಿಲ್ ಲೋಬೊ ಅವರು ಕಾರ್ಯಕ್ರಮ ಉದ್ಘಾಟಿಸಿ, ಯುವ ಜನರು ಸ್ವದೇಶದಲ್ಲಿಯೇ ಇದ್ದು ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಜೀವನವನ್ನು ಆಯ್ಕೆ ಮಾಡಿ, ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ವಿಶೇಷ ಸಾಧನೆ ಮಾಡಿದವರನ್ನು ಪ್ರತ್ಯೇಕವಾಗಿ ಗುರುತಿಸಿ ಅವರ ಸಾಧನೆ ಬೇರೆಯವರಿಗೂ ಪ್ರೇರಣೆಯಾಗಲಿ ಎನ್ನುವ ಉದ್ದೇಶದಿಂದ ಎಂಸಿಸಿ ಬ್ಯಾಂಕ್ ಈ ಕಾರ್ಯಕ್ರಮದಲ್ಲಿ ಫುಡಾರ್ ಪ್ರತಿಷ್ಠಾನ್ ಜತೆ ಕೈಜೋಡಿಸಿದೆ ಎಂದು ಹೇಳಿದರು.

ಮುಖ್ಯ ಅತಿಥಿ ಎಂ.ಪಿ. ನೊರೊನ್ಹಾ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಅಳವಡಿಕೊಂಡು ಸಮಾಜದ ಎಲ್ಲರ ಒಳಿತನ್ನು ಬಯಸುವುದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ. ಹೃದಯ ಶ್ರೀಮಂತಿಕೆಯಿಂದ ಇತರರ ಸೇವೆ ಮಾಡಲು ಈ ಸಾಧನೆ ಮೆಟ್ಟಿಲಾಗಲಿ ಎಂದು ಶುಭ ಹಾರೈಸಿದರು.

ಫುಡಾರ್ ಪ್ರತಿಷ್ಠಾನ್ ಸಂಸ್ಥೆಯ ಅಧ್ಯಕ್ಷ ನೈಜಿಲ್ ಪಿರೇರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಸಂತೋಷ್ ಡಿಸೋಜ, ಉಡುಪಿ ಪ್ರದೇಶದ ಅಧ್ಯಕ್ಷ ರೊನಾಲ್ಡ್ ಅಲ್ಮೇಡಾ, ಫುಡಾರ್ ಪ್ರತಿಷ್ಠಾನ್ ಕಾರ್ಯದರ್ಶಿ ವಿವಿಡ್ ಡಿಸೋಜ, ನಿರ್ದೇಶಕ ರೋಬರ್ಟ್ ಮಿನೇಜಸ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಪ್ಯಾನಿ ಅಲ್ವಾರಿಸ್, ಸಾಹಿತಿ ಹಾಗೂ ಪತ್ರಕರ್ತ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಎಚ್.ಎಂ. ಪೆರ್ನಾಲ್, ಕೊಂಕಣಿ ಗಾಯಕ ವಿನ್ಸೆಂಟ್ ಫರ್ನಾಂಡಿಸ್ ಇದ್ದರು.

ಪುರಸ್ಕೃತರ ಪರವಾಗಿ ರೂಬೆನ್ ಮಚಾದೊ. ರೋಶ್ವಿತ ಡಿಸೋಜ, ವಿನಿತಾ ಡೆಸ್ಸಾ ಅನಿಸಿಕೆ ಹಂಚಿಕೊಂಡರು. ಸನ್ಮಾನ ಕಾರ್ಯಕ್ರಮ ಯಶಸ್ವಿಗೊಳಿಸಲು ಧನ ಸಹಾಯ ನೀಡಿದ ದಾನಿಗಳನ್ನು, ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶ, ಉಡುಪಿ ಪ್ರದೇಶ ಹಾಗೂ ಫುಡಾರ್‌ ಪ್ರತಿಷ್ಠಾನ್‌ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು.


ನೋರ್ಬರ್ಟ್ ಮಿಸ್ಕಿತ್ ಹಾಗೂ ಐಡಾ ಫುರ್ಟಾಡೊ ನಿರೂಪಿಸಿದರು. ಫುಡಾರ್‌ ಪ್ರತಿಷ್ಠಾನ್‌ ಅಧ್ಯಕ್ಷ ನೈಜಿಲ್ ಪಿರೇರಾ ಸ್ವಾಗತಿಸಿದರು. ಕಾರ್ಯದರ್ಶಿ ವಿವಿಡ್ ಡಿಸೋಜ ವಂದಿಸಿದರು.